
ಚೆನ್ನೈ, ಏಪ್ರಿಲ್ 13: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಗುರುವಾರದ (ಏಪ್ರಿಲ್ 11) ಪಂದ್ಯದ ವೇಳೆ ಚೆನ್ನೈ ನಾಯಕ ಎಂಎಸ್ ಧೋನಿ ಅವರು ಮೈದಾನಕ್ಕೆ ತೆರಳಿ ನೋ ಬಾಲ್ ತೀರ್ಪಿನ ಬಗ್ಗೆ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಇದೇ ವಿಚಾರ ಈಗ ಕ್ರಿಕೆಟ್ ವಲಯದಲ್ಲಿ ಹೆಚ್ಚು ಚರ್ಚೆಗೀಡಾಗಿದೆ. ಆದರೆ ಅಂದಿನ ಪಂದ್ಯದ ಅಂಪೈರ್, ಬ್ರೂಸ್ ಆಕ್ಸನ್ಫೋರ್ಡ್ ಧೋನಿ ನನ್ನನ್ನು ಅಪರಾಧಿಯನ್ನಾಗಿಸಿಲ್ಲ ಎಂದಿದ್ದಾರೆ.
ಗುರುವಾರದ ಪಂದ್ಯದ 20ನೇ ಓವರ್ನಲ್ಲಿ ಈ ವಿವಾದ ಘಟಿಸಿತ್ತು. ರಾಜಸ್ಥಾನ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಎಸೆದ ಎಸೆತ ಸ್ಟ್ರೈಕ್ನಲ್ಲಿದ್ದ ಚೆನ್ನೈ ಆಟಗಾರ ಮಿಚೆಲ್ ಸ್ಯಾಂಟ್ನರ್ ಭುಜದ ನೇರಕ್ಕೆ ಹೋಗಿತ್ತು. ಅಂಪೈರ್ ಉಲ್ಹಾಸ್ ಇದನ್ನು ನೋ ಬಾಲ್ ಎಂದು ತೋರಿಸಿದರು. ಆದರೆ ಲೆಗ್ ಅಂಪೈರ್ ಬ್ರೂಸ್ ಆ ಎಸೆತವನ್ನು ನೋ ಬಾಲ್ ಅಲ್ಲವೆಂದು ತೀರ್ಪಿತ್ತದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬ್ರೂಸ್, ಮ್ಯಾಚ್ ರೆಫರಿ ಪ್ರಕಾಶ್ ಭಟ್ ಅವರಲ್ಲಿ 'ನೋ ಬಾಲನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಮೈದಾನಕ್ಕೆ ಬಂದು ಚರ್ಚಿಸುವ ಮೂಲಕ ಧೋನಿ ನನ್ನನ್ನು ಅಪರಾಧಿಯನ್ನಾಗಿಸಿಲ್ಲ' ಎಂದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಪಂದ್ಯದ ವೇಳೆ ಇಂಥ ನಡವಳಿಕೆ ತೋರಿಸಿದ್ದಕ್ಕಾಗಿ ಕ್ರಿಕೆಟ್ ವಲಯದಲ್ಲಿ ಧೋನಿಯ ಬಗ್ಗೆ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಧೋನಿ ಅಭಿಮಾನಿಗಳು ಮಾತ್ರ ಧೋನಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ನಡೆ ತೋರಿಸಿದ್ದಕ್ಕಾಗಿ ಧೋನಿಗೆ ಸಂಭಾವನೆಯ 50 ಶೇ. ದಂಡ ವಿಧಿಸಲಾಗಿದೆ. ಅಂದ್ಹಾಗೆ ಪಂದ್ಯವನ್ನು ಚೆನ್ನೈ 4 ವಿಕೆಟ್ಗಳಿಂದ ಗೆದ್ದಿತ್ತು.