
ಅಭಿಮಾನಿಗಳ ಮನವೊಲಿಸುವ ಹೊಣೆ
'ನಾವೀಗ ಖಾಲಿ ಸ್ಲೇಟ್ ಹಿಡಿದು ಮುಂದೆ ಹೊರಟಿದ್ದೇವೆ. ಅದರಲ್ಲಿ ನಾವು ಈ ಹಿಂದೆ ಆಡಿದ ಬಗೆಯನ್ನು ಮತ್ತೆ ಸ್ವಲ್ಪ ಬರೆಯಬೇಕು' ಎಂದು ತಂಡದ ಹಳೆಯ ವೈಭವದ ದಿನಗಳನ್ನು ನೆನಪಿಸಿಕೊಂಡು ಮತ್ತೆ ಅಂಗಳಕ್ಕಿಳಿಯುವುದಾಗಿ ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ನತ್ತ ಕ್ರಿಕೆಟ್ ಅಭಿಮಾನಿಗಳನ್ನು ಮತ್ತೆ ಕರೆತರುವುದು ನಮ್ಮೆದುರಿಗೆ ಇರುವ ಬಹುಮುಖ್ಯ ಸವಾಲು. ನಾವು ನಡೆಯುವ ಹಾದಿಯನ್ನು ಅವರು ಖಂಡಿತಾ ಇಷ್ಟಪಡುತ್ತಾರೆ. ಅವರು ಮತ್ತೆ ಕ್ರಿಕೆಟ್ನತ್ತ ಬರಲು ಮತ್ತು ಆಟ ನೋಡಲು ಬಯಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಪಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಸ್ಲೆಡ್ಜಿಂಗ್ ಮಾಡೊಲ್ಲವೇ?
ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡುವುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೆಸರುವಾಸಿ. ಈಗಿನ ತಂಡ ಅದೇ ಮನೋಭಾವವನ್ನು ಪ್ರದರ್ಶಿಸುವ ಸ್ಥಿತಿಯಲ್ಲಿಲ್ಲ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಪರ್ಧಾತ್ಮಕವಾಗಿರಬೇಕು. ಆದರೆ ಈಗ ಅದನ್ನು ಬೇರೆ ಬೇರೆ ಮಾರ್ಗಗಳಲ್ಲಿ ಮಾಡಲು ಮುಂದಾಗುತ್ತೇವೆ. ಎದುರಾಳಿಗಳ ಮೇಲೆ ಅತ್ಯಂತ ಗೌರವಯುತವಾಗಿ ಒತ್ತಡ ಹೇರುವ ತಂತ್ರ ಅನುಸರಿಸುತ್ತೇವೆ. ಮುಂದೆ ಉಳಿದ ತಂಡಗಳ ಆಟಗಾರರೊಂದಿಗೆ ಸಂಭಾಷಿಸುವ ಬಗೆ ವಿಭಿನ್ನವಾಗಿರುತ್ತದೆ ಎಂದಿದ್ದಾರೆ ಪೈನ್.
ತವರು ಅಂಗಳದಲ್ಲಿ ಸೋಲು ಕಂಡಿತು ರಾಜಸ್ಥಾನ ರಾಯಲ್ಸ್

ಶುಕ್ರವಾರದ ಸಭೆಯಲ್ಲಿ ಚರ್ಚೆ
ಕ್ರಿಕೆಟ್ ಆಸ್ಟ್ರೇಲಿಯಾ ಇದೇ 20ರಂದು ಸಭೆ ಆಯೋಜಿಸಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಮುಕ್ಯ ಕೋಚ್ ಡೆರೆನ್ ಲೆಹ್ಮನ್ ಪಾತ್ರವೂ ಇದೆ ಎನ್ನಲಾಗಿತ್ತು. ನಂತರ, ಲೆಹ್ಮನ್ ಯಾವ ತಪ್ಪೂ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿತ್ತು. ಆದರೂ ಅವರನ್ನು ಬದಲಿಸಲು ಆಡಳಿತ ಮಂಡಳಿ ಮುಂದಾಗಿದೆ.
ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರನ್ನು ಈಗಾಗಲೇ ಮುಖ್ಯಕೋಚ್ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಮಂಡಳಿ ತಳ್ಳಿಹಾಕಿದೆ.
ಶುಕ್ರವಾರ ನಡೆಯಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯ ಸಭೆಯಲ್ಲಿ ಹೊಸ ಕೋಚ್ ನೇಮಕದ ಪ್ರಕ್ರಿಯೆ ಕುರಿತು ಚರ್ಚೆ ನಡೆಯಲಿದೆ. ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ ಎಂದು ಮಂಡಳಿಯ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಪಾಂಟಿಂಗ್ ಕೋಚ್ ಆಗ್ತಾರಾ?
ಲೆಹ್ಮನ್ ಜಾಗಕ್ಕೆ ಲ್ಯಾಂಗರ್ ಅವರನ್ನೇ ಕರೆತರುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆದರೆ ವೆಸ್ಟ್ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಲ್ಯಾಂಗರ್, ಅಲ್ಲಿ ನೀಡುತ್ತಿರುವ ತರಬೇತಿ ಸಂಸ್ಥೆ ಮತ್ತು ಕುಟುಂಬದ ಬಗ್ಗೆ ಗಮನ ಹರಿಸಲು ಬಯಸಿದ್ದಾರೆ.
ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ವೇಗದ ಬೌಲರ್ ಜೇಸನ್ ಗಿಲೆಸ್ಪಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕೇಳಿಬರುತ್ತಿದೆ. ಕೆಲವು ಕ್ರಿಕೆಟ್ ಪರಿಣತರು ಟೆಸ್ಟ್, ಏಕದಿನ ಮತ್ತು ಟಿ20ಗಳಿಗೆ ಪ್ರತ್ಯೇಕ ಕೋಚ್ಗಳ ನೇಮಕ ಮಾಡಬೇಕೆಂಬ ಸಲಹೆ ನೀಡಿದ್ದಾರೆ.

ಮೂವರು ನಿಷೇಧಕ್ಕೆ ಒಳಗಾಗಿದ್ದರು
ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಪಂದ್ಯದ ವೇಳೆ ಬಹಿರಂಗಗೊಂಡ ಚೆಂಡು ವಿರೂಪ ಪ್ರಕರಣ ದೊಡ್ಡ ವಿವಾದ ಸೃಷ್ಟಿಸಿತ್ತು. ಜಗತ್ತಿನ ಮುಂದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತಲೆತಗ್ಗಿಸುವಂತೆ ಮಾಡಿತ್ತು. ಆಸ್ಟ್ರೇಲಿಯಾ ತಂಡದ ಸಂಸ್ಕೃತಿ ಬಗ್ಗೆ ಚರ್ಚೆಗೆ ಗ್ರಾಸವಾಗಿತ್ತು.
ಬಳಿಕ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಅಲ್ಲದೆ, ಒಂದು ವರ್ಷ ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ನಿಂದ ನಿಷೇಧ ಹೇರಲಾಗಿತ್ತು. ನಾಯಕ ಸ್ಮಿತ್ ಸೂಚನೆಯಂತೆ ಉಪ್ಪು ಕಾಗದ ಬಳಸಿ ಚೆಂಡು ವಿರೂಪಗೊಳಿಸಿದ್ದ ಆರಂಭಿಕ ಬ್ಯಾಟ್ಸ್ಮನ್ ಕ್ಯಾಮೆರಾನ್ ಬೆನ್ಕ್ರಾಫ್ಟ್ ಅವರನ್ನು ಒಂಬತ್ತು ತಿಂಗಳು ಕ್ರಿಕೆಟ್ನಿಂದ ಅಮಾನತುಗೊಳಿಸಲಾಗಿತ್ತು. ಈ ಮೂವರೂ ಆಟಗಾರರು ತಮ್ಮ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ.
ಈ ಘಟನೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮಾನಸಿಕವಾಗಿ ಕುಗ್ಗಿಸಿದ್ದಲ್ಲದೆ, ತಂಡದ ಬಲವನ್ನು ಕ್ಷೀಣಿಸುವಂತೆ ಮಾಡಿದೆ. ನಿಷೇಧ ಪೂರ್ಣಗೊಂಡ ಬಳಿಕ ಮೂವರನ್ನೂ ಮತ್ತೆ ತಂಡಕ್ಕೆ ಸ್ವಾಗತಿಸುತ್ತೇವೆ. ಜನರ ನಿರೀಕ್ಷೆಯಂತೆ ಸೃಷ್ಟಿಯಾಗಲಿರುವ ಹೊಸ ವಾತಾವರಣ ಆಗ ಇರಲಿದೆ ಎಂದು ಪೈನ್ ಹೇಳಿದ್ದಾರೆ.


Click it and Unblock the Notifications