
ಮಹೀಂದ್ರಾ ಗ್ರೂಫ್ನ ಮುಖ್ಯಸ್ಥ ಮುಂಬೈ ಮೂಲದ ಉದ್ಯಮಿ ಆನಂದ್ ಮಹೀಂದ್ರಾ ಕ್ರಿಕೆಟ್ನ ಬಗ್ಗೆ ವಿಶೇಷವಾದ ಒಲವನ್ನು ಹೊಂದಿದವರು. ಕ್ರಿಕೆಟ್ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಅವರು ಸಾಕಷ್ಟು ಸಂದರ್ಭಗಳಲ್ಲಿ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಕಳೆದ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ನೀಡಿದ ವಿಶೇಷ ಪ್ರದರ್ಶನಕ್ಕೆ ಆನಂದ್ ಮಹೀಂದ್ರಾ ಅದೆಷ್ಟು ಸಂತಸಗೊಂಡಿದ್ದರು ಎಂದರೆ ಆ ಟೆಸ್ಟ್ ಸರಣಿಯಲ್ಲಿ ಯುವ ಆಟಗಾರರ ಪ್ರದರ್ಶನಕ್ಕೆ ಮನಸೋತು ಆರು ಆಟಗಾರರಿಗೆ ಮಹೀಂದ್ರಾ ಥಾರ್ SUVಯನ್ನು ಉಡುಗೊರೆಯಾಗಿ ಘೋಷಿಸಿದ್ದರು.
ಘೋಷಣೆ ಮಾಡಿದ್ದು ಮಾತ್ರವಲ್ಲದೆ ಯುವ ಆಟಗಾರರು ಭಾರತಕ್ಕೆ ಮರಳುತ್ತಿದ್ದಂತೆಯೇ ಅವರಿಗೆ ಹೊಸ ಥಾರ್ ಎಸ್ಯುವು ಕಾರುಗಳನ್ನು ತಲುಪಿಸಿದ್ದರು. ಈ ಉಡುಗೊರೆ ಪಡೆದುಕೊಂಡ ಆಟಗಾರರು ಫೋಟೋಗಳನ್ನು ಹಂಚಿಕೊಂಡು ಸಂತಸವನ್ನು ಹಂಚಿಕೊಂಡಿದ್ದರು.
ಈಗ ಈ ಉಡುಗೊರೆಯನ್ನು ಪಡೆದುಕೊಂಡಿರುವ ಭಾರತದ ವೇಗಿ ನಟರಾಜನ್ ಕೂಡ ಈ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತನಗೆ ಉಡುಗೊರೆಯಾಗಿ ಕಾರ್ ನೀಡಿದ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದದ ರೂಪದಲ್ಲಿ ನಟರಾಜನ್ ಐತಿಹಾಸಿಕ ಗೆಲುವು ಸಾಧಿಸಿದ ಗಾಬಾ ಪಂದ್ಯದಲ್ಲಿ ಧರಿಸಿದ ಜರ್ಸಿಯನ್ನು ಸಹಿ ಹಾಕಿ ಕಳುಹಿಸಿಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಮಿಂಚಿ ಭಾರತದ ಐತಿಹಾಸಿಕ ಸರಣಿ ಗೆಲುವಿಗೆ ಯುವ ಆಟಗಾರರು ಪ್ರಮುಖ ಕಾರಣರಾಗಿದ್ದರು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಈ ಯುವ ಆಟಗಾರರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಜವಾಬ್ಧಾರಿಯುತ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಕಾರಣರಾಗಿದ್ದರು.
ಟಿ ನಟರಾಜನ್ ಅಲ್ಲದೆ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ನವ್ದೀಪ್ ಸೈನಿ, ವಾಶಿಂಗ್ಟನ್ ಸುಂದರ್ಗೆ ಆನಂದ್ ಮಹೀಂದ್ರಾ ಥಾರ್ ಎಸ್ಯುವು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.