

ನವದೆಹಲಿ, ಜನವರಿ 25: ಭಾರತದ ಕ್ರಿಕೆಟ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮೇಲಿನ ಅಮಾನತು ತೆರವಾಗಿದೆ. ಆಲ್ ರೌಂಡರ್ ಹಾರ್ದಿಕ್ ನ್ಯೂಜಿಲ್ಯಾಂಡ್ ವಿರುದ್ಧದ ಭಾರತ ತಂಡಕ್ಕೆ, ರಾಹುಲ್ ಭಾರತ 'ಎ' ತಂಡ ಸೇರಿಕೊಳ್ಳುವುದರಲ್ಲಿದ್ದಾರೆ.
ಪಾಂಡ್ಯ-ರಾಹುಲ್ ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಪಾಲ್ಗೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಸುಪ್ರೀಮ್ ಕೋರ್ಟ್ ನೇಮಿತ ಬಿಸಿಸಿಐ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ)ನಿಂದ ಅಮಾನತುಗೊಂಡಿದ್ದರು. ಆಸ್ಟ್ರೇಲಿಯಾ ಏಕದಿನ ಪ್ರವಾಸ ಸರಣಿಗೆ ತೆರಳಿದ್ದ ಇಬ್ಬರೂ ಆಟಗಾರರನ್ನು ಬಿಸಿಸಿಐ ಸರಣಿಗೂ ಮುನ್ನವೇ ಭಾರತಕ್ಕೆ ಕರೆಸಿಕೊಂಡಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮೇಲಿನ ಅಮಾನತನ್ನು ಸಿಒಎ ಗುರುವಾರ (ಜನವರಿ 24) ತೆರವುಗೊಳಿಸಿರುವುದರಿಂದ ಇಬ್ಬರೂ ಆಟಗಾರರು ನಿರಾಳರಾಗಿದ್ದಾರೆ. ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿದ್ದು, ಪಾಂಡ್ಯ ಅವರು ದ್ವಿತೀಯ ಪಂದ್ಯದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ.