ನ್ಯಾಟಿಂಗ್ಹ್ಯಾಮ್, ಆಗಸ್ಟ್ 22: ಇಂಗ್ಲೆಂಡ್ ನೆಲದಲ್ಲಿ ಒಂದರ ಹಿಂದೊಂದು ಪಂದ್ಯಗಳನ್ನು ಸೋತ ಬಳಿಕ ಜನರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಆದರೆ, ತಂಡ ಎಂದಿಗೂ ನಮ್ಮ ಸಾಮರ್ಥ್ಯದ ಮೇಲಿನ ನಂಬಿಕೆ ಕಳೆದುಕೊಂಡಿರಲಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಟ್ರೆಂಟ್ ಬ್ರಿಡ್ಜ್ ಟೆಸ್ಟ್: ಆಂಗ್ಲರ ವಿರುದ್ಧ ಭಾರತಕ್ಕೆ ಒಲಿದ ವಿಜಯಲಕ್ಷ್ಮಿ
ಸರಣಿಯಲ್ಲಿ ನಾವು 0-2ರಲ್ಲಿ ಹಿನ್ನಡೆ ಅನುಭವಿಸಿದ್ದೆವು. ಹೀಗಾಗಿ ಹೆಚ್ಚಿನ ಜನರು ನಮ್ಮನ್ನು ನಂಬುವುದನ್ನು ನಿಲ್ಲಿಸಿದ್ದರು. ಆದರೆ, ನಾವು ನಮ್ಮನ್ನು ನಂಬಿದೆವು. ಹೀಗಾಗಿಯೇ 0-2 ರಿಂದ ಈಗ 1-2 ಸಾಧ್ಯವಾಗಿದೆ.
ನಾವು ಡ್ರೆಸ್ಸಿಂಗ್ ಕೊಠಡಿಯಲ್ಲಿ ಏನು ಯೋಚಿಸುತ್ತೇವೆಯೋ ಅದೇ ಮುಖ್ಯವಾಗುತ್ತದೆಯೇ ಹೊರತು, ಅದರಿಂದಾಚೆ ಯೋಚಿಸುವುದು ಇಲ್ಲಿ ಮುಖ್ಯವಾಗುವುದಿಲ್ಲ. ಈ ಸರಣಿಯನ್ನು ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ನಮಗಿದೆ' ಎಂದು ಕೊಹ್ಲಿ ತಿಳಿಸಿದ್ದಾರೆ.
ಸರಣಿಯಲ್ಲಿ ಸ್ಪರ್ಧಾತ್ಮಕತೆ ಉಳಿಸಲು ಈ ಗೆಲುವು ಅತಿ ಅಗತ್ಯವಾಗಿತ್ತು. ಎಲ್ಲ ವಿಭಾಗಗಳಲ್ಲಿಯೂ ನಾವು ಪರಿಣಾಮಕಾರಿಯಾಗಿದ್ದೆವು. ಇದು ಇಡೀ ಡ್ರೆಸ್ಸಿಂಗ್ ಕೊಠಡಿಯ ಗೆಲುವು. ನಮಗೆ ಒಂದು ಪರಿಪೂರ್ಣ ಟೆಸ್ಟ್ ಜಯ ಎಂದಿದ್ದಾರೆ.
ತಂಡದ ಗೆಲುವನ್ನು ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ
ನಾನು 2014ರ ವೈಫಲ್ಯದ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ನನ್ನ ತಂಡದ ಗೆಲುವಿಗೆ ನೀಡಿದ ಕೊಡುಗೆ ಬಗ್ಗೆ ಸಂತೋಷವಿದೆ.
ನನ್ನ ಇನ್ನಿಂಗ್ಸ್ಗಳನ್ನು ನನ್ನ ಪತ್ನಿಗೆ ಅರ್ಪಿಸಲು ಬಯಸುತ್ತೇನೆ. ಆಕೆ ಇಲ್ಲಿಯೇ ಇದ್ದು ನನ್ನನ್ನು ಹುರಿದುಂಬಿಸುತ್ತಿದ್ದಳು. ಆಕೆ ಹಿಂದೆಯೂ ಅನೇಕ ಬಾರಿ ಜತೆಗಿದ್ದಳು. ಆದರೆ, ಈ ಪಂದ್ಯಕ್ಕೆ ಆಕೆ ಶ್ರೇಯಸ್ಸಿಗೆ ಅರ್ಹಳು ಎಂದು ಅನುಷ್ಕಾ ಶರ್ಮಾರನ್ನು ಕೊಹ್ಲಿ ಶ್ಲಾಘಿಸಿದ್ದರು.
ಬೌಲರ್ಗಳು ಸರಣಿಯಲ್ಲಿ ಇದುವರೆಗೂ ಉತ್ತಮವಾಗಿ ಆಡಿದ್ದಾರೆ. ಬ್ಯಾಟ್ಸ್ಮನ್ಗಳು ಸಹ ಜತೆಗೂಡಿದಾಗ ತಂಡವು ತನ್ನ ಪ್ರಾಬಲ್ಯ ಮೆರೆಯಲು ಆರಂಭಿಸುತ್ತದೆ.
ಕೊಹ್ಲಿ ಶತಕಕ್ಕೂ 2001ರ ಸಚಿನ್ ಬಾರಿಸಿದ ಶತಕಕ್ಕೂ ಇದೆ ನಂಟು!
ತಂಡದಲ್ಲಿ ಯಾವುದೇ ಆತಂಕವಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಆಡಿದ ಐದು ಟೆಸ್ಟ್ಗಳಲ್ಲಿ ಲಾರ್ಡ್ಸ್ ಟೆಸ್ಟ್ನಲ್ಲಿ ಮಾತ್ರ ವೈಫಲ್ಯ ಅನುಭವಿಸಿದೆವು. ಈ ಪಂದ್ಯದಲ್ಲಿ ನಾವು ಮೇಲುಗೈ ಸಾಧಿಸಲು ಬ್ಯಾಟ್ಸ್ಮನ್ಗಳು ಉತ್ತಮ ರನ್ ಸೇರಿಸಿದ್ದು ಮತ್ತು ಬೌಲರ್ಗಳು ಉತ್ತಮ ದಾಳಿ ನಡೆಸಿದ್ದು ಕಾರಣವಾಯಿತು. ಅವರು ಅದಕ್ಕೆ ಸಿದ್ಧರಾಗಿ ಕಾಯುತ್ತಿದ್ದರು. ಗಾಯದ ನಡುವೆ ಅಶ್ವಿನ್ ಕೂಡ ಉತ್ತಮವಾಗಿ ಆಡಿದರು ಎಂದು ಕೊಹ್ಲಿ ತಿಳಿಸಿದ್ದಾರೆ.