ಬೆಂಗಳೂರು, ಆಗಸ್ಟ್ 13: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ದಿನದಲ್ಲಿ ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ನೀಡಿದ ಪ್ರದರ್ಶನದಿಂದಾಗಿ ಮೊದಲ ದಿನದ ಸಂಪೂರ್ಣ ಯಶಸ್ಸನ್ನು ಭಾರತ ಗಳಿಸಿಕೊಂಡಿದೆ. ಮೊದಲ ದಿನದಾಟದ ಬಳಿಕ ಭಾರತದ ಅನುಭವಿ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಪಂದ್ಯಗಳ ಮುಕ್ತಾಯದ ಬಳಿಕದ ಮಾಧ್ಯಮಗೋಷ್ಠಿಯಲ್ಲಿ ತಮ್ಮ ನೇತ ಉತ್ತರಗಳ ಮೂಲಕ ಸಾಕಷ್ಟು ಬಾರಿ ರೋಹಿತ್ ಶರ್ಮಾ ಸುದ್ದಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಸ್ಟ್ನ ಮೊದಲ ದಿನದಾಟದ ಪಂದ್ಯದ ಬಳಿಕದ ಪತ್ರಿಕಾಗೋಷ್ಠಿ ಕೂಡ ಇಂತಾದ್ದೇ ಘಟನೆಗೆ ಸಾಕಷ್ಟಿಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಪತ್ರಕರ್ತರೊಬ್ಬರ ಪ್ರಶ್ನೆಗೆ ಸೆಲ್ಯೂಟ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರ ಈ ನಡೆ ಸಾಕಷ್ಟು ವೈರಲ್ ಆಗಿದೆ.
ಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್: ಕೆಎಲ್ ರಾಹುಲ್ ಶತಕದಾಟ
ರೋಹಿತ್ ಶರ್ಮಾಗೆ ಮಾಧ್ಯಮ ಪ್ರತಿನಿಧಿ ಹೇಳಿದ್ದೇನು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದರು. "ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 15ರಂದು ಅಂತ್ಯವಾಗಲಿರುವ ಕಾರಣ ಈ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ ಭಾರತದ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗುತ್ತದೆ" ಎಂದು ಮಾಧ್ಯಮ ಪ್ರತಿನಿಧಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿ ಹೇಳಿದ ಈ ಮಾತಿಗೆ ರೋಹಿತ್ ಶರ್ಮಾ ತಕ್ಷಣವೇ ಸೆಲ್ಯೂಟ್ ಮಾಡುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರು. "ಸೆಲ್ಯೂಟ್ ಸರ್, ಎಂತಾ ಮಾತನ್ನು ನೀವು ಹೇಳಿದಿರಿ. ಅದು ಸಾಧ್ಯವಾದರೆ ನಿಜಕ್ಕೂ ದೊಡ್ಡ ವಿಚಾರ" ಎಂದು ರೋಹಿತ್ ಶರ್ಮಾ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಅವರ ಈ ನಡೆಗೆ ನೆಟ್ಟಿಗರು ಸಾಕಷ್ಟು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
Rohit Sharma with another gem in press conference 😂👏👌
— Subhayan Chakraborty (@CricSubhayan) August 13, 2021
Video: BCCI#ENGvIND pic.twitter.com/v7rw0CIEBk
ಭಾರತದ ಹಿಡಿತದಲ್ಲಿ ಲಾರ್ಡ್ಸ್ ಪಂದ್ಯ: ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯ ಲಾರ್ಡ್ಸ್ನಲ್ಲಿ ನಡೆಯುತ್ತಿದೆ. ಮೊದಲ ದಿನದಾಟದಲ್ಲಿ ಭಾರತ ಟಾಸ್ ಸೋತರು ಕೂಡ ಅದ್ಭುತ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಬೌಲರ್ಗಳ ದಾಳಿಯನ್ನು ಭಾರತೀಯ ದಾಂಡಿಗರು ಸಂಪೂರ್ಣವಾಗಿ ಹಿನ್ನೆಟ್ಟಿಸಲು ಯಶಸ್ವಿಯಾಗಿದ್ದು ಮೊದಲ ದಿನದ ಗೌರವವನ್ನು ಭಾರತ ಸಂಪಾದಿಸಿದೆ. ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಮೊದಲ ದಿನ ಅಜೇಯ ಶತಕವನ್ನು ಸಿಡಿಸಿದ್ದು ಎರಡನೇ ದಿನ ಆಟವನ್ನು ಮುಂದುವರಿಸಲಿದ್ದಾರೆ. ಅಜಿಂಕ್ಯ ರಹಾನೆ ಮತ್ತೊಂದು ತುದಿಯಲ್ಲಿ ಕೆಎಲ್ ರಾಹುಲ್ಗೆ ಸಾಥ್ ನೀಡಲಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಆರಂಭದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ರೋಹಿತ್ ಶರ್ಮಾ 83 ರನ್ಗಳಿಸಿ ವಿಕೆಟ್ ಕಳೆದುಕೊಂಡು ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಬಳಿಕ ಚೇತೇಶ್ವರ್ ಒಊಜಾರ ಮತ್ತೊಂದು ವೈಫಲ್ಯವನ್ನು ಅನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಚೇತೇಶ್ವರ್ ಪೂಜಾರ ಈ ಪಂದ್ಯದಲ್ಲಿ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ನಂತರ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಜೊತೆ ಸೇರಿ ಮತ್ತೊಂದು ಶತಕದ ಜೊತೆಯಾಟವನ್ನು ನೀಡಿದರು. ಆದರೆ 42 ರನ್ಗಳಿಸಿದ್ದ ವಿರಾಟ್ ಕೊಹ್ಲಿ ರಾಬಿನ್ಸನ್ಗೆ ಔಟಾಗಿದ್ದಾರೆ.
ಗುರುವಾರ ನಡೆದ ಮೊದಲನೇ ದಿನದಾಟದ ಅಂತ್ಯದಲ್ಲಿ ಭಾರತ 90 ಓವರ್ಗಳಲ್ಲಿ ಮೂರು ವಿಕೆಟ್ ಕಳೆದು 276 ರನ್ ಗಳಿಸಿದೆ. ಇಂಗ್ಲೆಂಡ್ನಿಂದ ಜೇಮ್ಸ್ ಆ್ಯಂಡರ್ಸನ್ 52 ರನ್ ನೀಡಿ 2 ವಿಕೆಟ್ ಪಡೆದರೆ, ಆಲಿ ರಾಬಿನ್ಸನ್ 47 ರನ್ಗಳಿಗೆ 1 ವಿಕೆಟ್ ಪಡೆದಿದ್ದಾರೆ. ದಿನದಾಟದ ಅಂತ್ಯಕ್ಕೆ ಕೆಎಲ್ ರಾಹುಲ್ 248 ಎಸೆತಗಳನ್ನು ಎದುರಿಸಿ 127 ರನ್ ಬಾರಿಸಿ ಅಜೇಯವಾಗುಳಿದಿದ್ದಾರೆ. ಇದರಲ್ಲಿ 12 ಬೌಂಡರಿಗಳು ಹಾಗೂ 1 ಸಿಕ್ಸರ್ ಸೇರಿತ್ತು. ರಾಹುಲ್ ಜೊತೆ ಉಪನಾಯಕ ಅಜಿಂಕ್ಯ ರಹಾನೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ ಕೊಡುಗೆ ನೀಡಿ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದರು.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ:
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.