ಕೊಚ್ಚಿಯಲ್ಲಿ ಅಭ್ಯಾಸ ಆರಂಭಿಸಿದ ಸ್ಯಾಮ್ಸನ್
ದೇಶೀಯ ಟೂರ್ನಿಗಳಲ್ಲಿ ಕೇರಳ ಪರವಾಗಿ ಆಡುವ ಸಂಜು ಸ್ಯಾಮ್ಸನ್, ಈಗಾಗಲೇ ತಾವು ಆಯ್ಕೆಗೆ ಲಭ್ಯವಿರುವುದಾಗಿ ಕೇರಳ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೊಚ್ಚಿಯಲ್ಲಿ ಅಭ್ಯಾಸ ಆರಂಭಿಸಿರುವ ಕೇರಳ ವಿಕೆಟ್ ಕೀಪರ್ ಬ್ಯಾಟರ್, ರಣಜಿಯಲ್ಲಿ ತಮ್ಮ ಸಾಮರ್ಥ್ಯ ತೋರಲು ಸಿದ್ಧತೆ ನಡೆಸಿದ್ದಾರೆ.
ಮತ್ತೊಬ್ಬ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ರಣಜಿಯಲ್ಲಿ ಮುಂಬೈ ಪರವಾಗಿ ಆಡಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಸೂರ್ಯಕುಮಾರ್ ಯಾದವ್ಗೆ ವಿಶ್ರಾಂತಿ ನೀಡಿದ್ದರೂ ಕೂಡ ಅವರು ರಣಜಿ ಆಡಲು ನಿರ್ಧರಿಸಿದ್ದಾರೆ.
ಭಾರತ vs ಬಾಂಗ್ಲಾದೇಶ: ಯುವ ವೇಗಿ ಕುಲ್ದೀಪ್ ಸೇನ್ ಹೊರಗುಳಿಯಲು ಕಾರಣವಿದು!
ಅದೃಷ್ಟ ಪರೀಕ್ಷೆಗೆ ಮುಂದಾದ ಸ್ಯಾಮ್ಸನ್
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಸರಣಿ ಭಾರತಕ್ಕೆ ಈ ವರ್ಷದ ಕೊನೆಯ ಸರಣಿಯಾಗಿದೆ. 2023ರ ಜನವರಿಯಲ್ಲಿ ಶ್ರೀಲಂಕಾ ಭಾರತಕ್ಕೆ ಪ್ರವಾಸ ಮಾಡಲಿದ್ದು, ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಕೆಎಲ್ ರಾಹುಲ್ ಜನವರಿ-ಫೆಬ್ರವರಿಯಲ್ಲಿ ಮದುವೆಯಾಗಲಿದ್ದು, ಅವರು ಈ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆಯ್ಕೆಗಾರರು ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸುವ ಅವಕಾಶ ಇದೆ. ಆದರೆ, ರಾಹುಲ್ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ತಂಡದ ಮೊದಲ ಆಯ್ಕೆಯಾಗುವುದರಿಂದ, ಸ್ಯಾಮ್ಸನ್ ಆಯ್ಕೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಅವಕಾಶ?
2023ರ ಏಕದಿನ ವಿಶ್ವಕಪ್ಗೆ ಮುನ್ನ ಟೀಂ ಇಂಡಿಯಾ ಬಿಡುವಿರದ ವೇಳಾಪಟ್ಟಿಯನ್ನು ಹೊಂದಿದೆ. ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗಳನ್ನು ಆಡಲಿದೆ. ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹಲವು ಪಂದ್ಯಗಳನ್ನು ಆಡಲು ಟೀಂ ಇಂಡಿಯಾ ನಿರ್ಧರಿಸಿದೆ.
ಒಂದು ವೇಳೆ ಬಿಡುವಿರದ ವೇಳಾಪಟ್ಟಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ, ಬ್ಯಾಕ್ ಅಪ್ ಆಟಗಾರನಾಗಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಬಹುದು. ಸಂಜು ಸ್ಯಾಮ್ಸನ್ ಆಯ್ಕೆ ಮಾಡುವುದು ಅನುಮಾನವೇ ಆಗಿರುವುದರಿಂದ, ಅವರು ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪರೀಕ್ಷೆಗೊಳಪಡಿಸಬಹುದಾಗಿದೆ. ಇಲ್ಲವಾದಲ್ಲಿ, ಅವರು ಐಪಿಎಲ್ನಲ್ಲಿ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಸಿಗುತ್ತದೆ.
"ಪ್ರತಿಯೊಬ್ಬ ಆಟಗಾರನೂ ಕೂಡ ಬೆಂಚ್ ಕಾಯುವ ಪರಿಸ್ಥಿತಿಯಿಂದಲೇ ಬಂದಿರುತ್ತಾನೆ. ಕಳೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಕೆಲವೊಮ್ಮೆ ಆಯ್ಕೆಯಾಗುವುದು ಕಷ್ಟವಾಗುತ್ತದೆ. ತರಬೇತುದಾರರು ಮತ್ತು ನಾಯಕ ಆಟಗಾರರೊಂದಿಗೆ ಮಾತನಾಡುತ್ತಾರೆ. ತಾನು ಯಾಕೆ ಆಯ್ಕೆಯಾಗಿಲ್ಲ ಎನ್ನುವ ಬಗ್ಗೆ ಸ್ಯಾಮ್ಸನ್ ಸ್ಪಷ್ಟತೆ ಹೊಂದಿದ್ದಾರೆ. ತಂಡದ ಲಾಭ ಮತ್ತು ಸಂಯೋಜನೆಗಳ ಕಾರಣಕ್ಕೆ ಕೆಲವೊಮ್ಮೆ ಇದು ಅನಿವಾರ್ಯ" ಎಂದು ನ್ಯೂಜಿಲೆಂಡ್ ಸರಣಿಯ ವೇಳೆ ನಾಯಕರಾಗಿದ್ದ ಶಿಖರ್ ಧವನ್ ಹೇಳಿದ್ದರು.