ನವದೆಹಲಿ, ಫೆ. 02: ಟೀಂ ಇಂಡಿಯಾದ ಉಪ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮುಂಬರುವ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ತಂಡಕ್ಕೆ ಕರ್ನಾಟಕದ ಮನೀಶ್ ಪಾಂಡೆ ಹಾಗೂ ಆಲ್ ರೌಂಡರ್ ಪವನ್ ನೇಗಿ ಹೊಸ ಮುಖಗಳಾಗಿ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 4-1 ಅಂತರದಿಂದ ಸೋತ ಭಾರತ ತಂಡ, ಟಿ20 ಸರಣಿಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿತು. ಇದಕ್ಕೆ ಬಹುಪಾಲು ಸರಣಿ ಶ್ರೇಷ್ಠ ವಿರಾಟ್ ಕೊಹ್ಲಿ ಅವರ ಉತ್ತಮ ಪ್ರದರ್ಶನವೇ ಕಾರಣ ಎನ್ನಬಹುದು.
ಆಸ್ಟ್ರೇಲಿಯಾ ಸರಣಿಯಲ್ಲಿ ಮೂರು ಅರ್ಧಶತಕದೊಂದಿಗೆ 199 ರನ್ ಗಳಿಸಿದರು. ಕಳೆದ ಅಕ್ಟೋಬರ್ ನಿಂದ ಜನವರಿ ಕೊನೆ ತನಕ ಕೊಹ್ಲಿ ಅವರು ಟೆಸ್ಟ್ ಪಂದ್ಯಗಳಲ್ಲದೆ 10 ಏಕದಿನ ಪಂದ್ಯ ಹಾಗೂ ಐದು ಟಿ20ಗಳನ್ನು ಆಡಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿಪ್ರಾಯಪಟ್ಟಿದೆ.
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಗೆಲುವಿಗೆ ಕಾರಣರಾದ ಶತಕವೀರ ಮನೀಶ್ ಪಾಂಡೆ ಅವರಿಗೆ 15 ಸದಸ್ಯರ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಷಿ ಧವನ್, ಗುರ್ ಕೀರತ್ ಮಾನ್, ಉಮೇಶ್ ಯಾದವ್ ಅವರನ್ನು ಕೈಬಿಡಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಆಲ್ ರೌಂಡರ್ ಪವನ್ ನೇಗಿ ಅವರು ಮುಷ್ತಾಕ್ ಅಲಿ ಹಾಗೂ ದೇವಧರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಫೆಬ್ರವರಿ 9 ರಿಂದ ಪುಣೆಯಲ್ಲಿ ಸರಣಿ ಆರಂಭವಾಗಲಿದೆ. ಫೆ. 9, 12 ಹಾಗೂ 14 ರಂದು ಕ್ರಮವಾಗಿ ಪುಣೆ, ರಾಂಚಿ ಹಾಗೂ ವಿಶಾಖಪಟ್ಟಣದಲ್ಲಿ ನಡೆಯಲಿದೆ.
ತಂಡ: ಎಂಎಸ್ ಧೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್ಪ್ರೀತ್ ಬುಮ್ರಾ, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಪವನ್ ನೇಗಿ. (ಪಿಟಿಐ)