ಹಿಂದೂ ಎಂಬ ಕಾರಣಕ್ಕೆ ಆಡುವ ಅವಕಾಶ ನೀಡುತ್ತಿರಲಿಲ್ಲ
ನ್ಯೂಸ್ ಏಜೆನ್ಸಿ ಐಎಎನ್ಎಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ದನೀಶ್ ಕನೇರಿಯಾ ಶಾಹಿದ್ ಅಫ್ರಿದಿ ವಿರುದ್ಧ ಆರೋಪ ಮಾಡಿದ್ದಾರೆ. ತಾನು ಹಿಂದೂ ಎಂಬ ಕಾರಣಕ್ಕೆ ಅಫ್ರಿದಿ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂದಿರುವ ದನೀಶ್ ಕನೇರಿಯಾ ತಂಡದ ಆಡುವ ಬಳಗದಲ್ಲಿ ತನಗೆ ಸ್ಥಾನ ನೀಡುತ್ತಿರಲಿಲ್ಲ ಎಂದೂ ಸಹ ಆರೋಪಿಸಿದ್ದಾರೆ. "ಅಫ್ರಿದಿ ಓರ್ವ ಸುಳ್ಳುಗಾರ ಹಾಗೂ ಆತ ಚಾರಿತ್ಯ್ರಹೀನ ವ್ಯಕ್ತಿ. ನನಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡುತ್ತಿರಲಿಲ್ಲ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ನಾನು ನನ್ನ ಪಾಡಿಗೆ ಆಟವಾಡುತ್ತಿದ್ದೆ. ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೆ, ಆದರೆ ಇದನ್ನು ಸಹಿಸದ ಅಫ್ರಿದಿ ನನ್ನ ವಿರುದ್ಧ ತಂಡದ ಇತರೆ ಆಟಗಾರರನ್ನು ಎತ್ತಿಕಟ್ಟುತ್ತಿದ್ದರು. ಆದರೆ, ಪಾಕಿಸ್ತಾನದ ಪರ ಆಡಿದ ಹೆಮ್ಮೆ ನನಗಿದೆ" ಎಂದು ದಾನಿಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.
ಶೋಯೆನ್ ಅಖ್ತರ್ಗೆ ಕೃತಜ್ಞತೆ ಸಲ್ಲಿಸಿದ ಕನೇರಿಯಾ
ಇನ್ನೂ ಮುಂದುವರೆದು ಮಾತನಾಡಿದ ದನೀಶ್ ಕನೇರಿಯಾ ಈ ವಿಷಯವನ್ನು ಈ ಹಿಂದೆಯೇ ಬಿಚ್ಚಿಟ್ಟಿದ್ದ ತನ್ನ ಸಹ ಆಟಗಾರ ಶೊಯಬ್ ಅಖ್ತರ್ಗೆ ಧನ್ಯವಾದ ತಿಳಿಸಿದ್ದಾರೆ. "ನನ್ನ ಸಮಸ್ಯೆ ಕುರಿತಾಗಿ ಬಹಿರಂಗವಾಗಿ ಮೊದಲು ಮಾತನಾಡಿದ ವ್ಯಕ್ತಿ ಶೋಯಬ್ ಅಖ್ತರ್. ಈ ವಿಷಯವನ್ನು ಬಹಿರಂಗಪಡಿಸಿದ ಅವರಿಗೆ ಹ್ಯಾಟ್ಸ್ ಆಫ್. ಆದರೆ, ನಂತರದ ದಿನಗಳಲ್ಲಿ ಕೆಲವರು ಶೋಯಬ್ ಅಖ್ತರ್ ಅವರ ಬಾಯನ್ನು ಮುಚ್ಚಿಸಿಬಿಟ್ಟರು. ಆದರೆ, ನನಗೆ ಆ ರೀತಿ ನಡೆದದ್ದು ನಿಜ, ಅಫ್ರಿದಿ ನನ್ನನ್ನು ಕಡೆಗಣಿಸಿದ್ದರು ಹಾಗೂ ಏಕದಿನ ಪಂದ್ಯಗಳ ಆಡುವ ಬಳಗದಲ್ಲಿ ಅವಕಾಶ ನೀಡದೇ ಬೆಂಚ್ ಕಾಯುವಂತೆ ಮಾಡಿದ್ದರು" ಎಂದು ದನೀಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.
ದನೀಶ್ ಕನೇರಿಯಾ ಕಿರು ಪರಿಚಯ
ದನೀಶ್ ಪ್ರಭಾ ಶಂಕರ್ ಕನೇರಿಯಾ 1980ರ ಡಿಸೆಂಬರ್ 16ರಂದು ಸಿಂಧ್ನ ಕರಾಚಿಯಲ್ಲಿ ಜನಿಸಿದರು. ಪ್ರಭಾಶಂಕರ್ಭಾಯ್ ಲಾಲ್ಜೀಭಾಯ್ ಕನೇರಿಯಾ ಹಾಗೂ ಬಬಿತಾ ಪ್ರಭಾಶಂಕರ್ಭಾಯ್ ಕನೇರಿಯಾ ಈ ಇಬ್ಬರು ದನೀಶ್ ಕನೇರಿಯಾ ಅವರ ತಂದೆ ಮತ್ತು ತಾಯಿ. 2000 - 2010ರವರೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ತಂಡದ ಪರ ಆಡಿರುವ ದನೀಶ್ ಕನೇರಿಯಾ 61 ಟೆಸ್ಟ್ ಪಂದ್ಯಗಳನ್ನಾಡಿ 261 ವಿಕೆಟ್ಗಳನ್ನು ಪಡೆದಿದ್ದಾರೆ ಹಾಗೂ ಕೇವಲ 18 ಪಂದ್ಯಗಳನ್ನಾಡಿ 15 ವಿಕೆಟ್ಗಳನ್ನು ಪಡೆದಿದ್ದಾರೆ.