
ನವದೆಹಲಿ, ಸೆಪ್ಟೆಂಬರ್ 29: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯತ್ವ ಮತ್ತು ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ಐಸಿಎ) ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿತಾಸಕ್ತಿ ಸಂಘರ್ಷ ನೋಟಿಸ್ ನೀಡಿದ ಬಳಿಕ ಶಾಂತಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.
'ನನ್ನ ತಲೆಯಲ್ಲಿ ಬೇರೆ ಯೋಚನೆಗಳಿವೆ ಹಾಗಾಗಿ ನಾನು ಮುಂದುವರೆಯಲು ನಿರ್ಧರಿಸಿದ್ದೇನೆ. ವರ್ಷಕ್ಕೊಂದುಸಾರಿ ಅಥವಾ ಎರಡು ವರ್ಷಕ್ಕೆ ಒಂದು ಸಾರಿ ಸಿಎಸಿ ಮೀಟಿಂಗ್ ನಡೆಯುತ್ತಿತ್ತು. ಹೀಗಾಗಿ ಸಂಘರ್ಷದ ವಿಚಾರವನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ,' ಎಂದು ರಂಗಸ್ವಾಮಿ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಅಡ್ವೈಸರಿ ಕಮಿಟಿಯಲ್ಲಿರುವುದು ಒಂದು ಹೆಮ್ಮೆಯಾಗಿತ್ತು. ಆದರೆ ಈ ಹಿತಾಸಕ್ತಿ ಸಂಘರ್ಷದಿಂದಾಗಿ ಮಾಜಿ ಕ್ರಿಕೆಟ್ರ್ಗೆ ಸೂಕ್ತ ಆಡಳಿತಾತ್ಮಕ ಪಾತ್ರವನ್ನು ಹುಡುಕಿಕೊಳ್ಳಲು ಬಲು ಕಷ್ಟವಾಗಿದೆ,' ಎಂದು ಮಾಜಿ ಆಟಗಾರ್ತಿ ಹೇಳಿದ್ದಾರೆ. ಸಿಎಸಿ ಸದಸ್ಯರಾದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಅಂಶುಮಾನ್ ಗಾಯಕ್ವಾಡ್ ಇವರಲ್ಲಿ ಶಾಂತಾ ಕೂಡ ಒಬ್ಬರಾಗಿದ್ದರು.
ಆಲ್ ರೌಂಡರ್ ಆಗಿದ್ದ ಶಾಂತಾ ರಂಗಸ್ವಾಮಿ 16 ಟೆಸ್ಟ್ ಪಂದ್ಯಗಳಲ್ಲಿ 32.6ರ ಸರಾಸರಿಯಂತೆ 750 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕವೂ ಸೇರಿದೆ. 19 ಏಕದಿನ ಪಂದ್ಯಗಳಲ್ಲಿ 287 ರನ್ ಗಳಿಸಿದ್ದಾರೆ. ಇನ್ನು 16 ಟೆಸ್ಟ್ ಪಂದ್ಯಗಳಲ್ಲಿ 21 ವಿಕೆಟ್ಗಳು, 19 ಏಕದಿನದಲ್ಲಿ ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದರು.