ದೊಡ್ಡದು ಮಾಡಬೇಡಿ
ಮುಂಬೈನಲ್ಲಿ ಗುರುವಾರ (ಜನವರಿ 17) ಮಾತನಾಡುತ್ತ ಗಂಗೂಲಿ, 'ಮನುಷ್ಯರೆಲ್ಲರೂ ತಪ್ಪು ಮಾಡುತ್ತಾರೆ. ಹಾಗೆಯೇ ಇವರೂ ಮಾಡಿದ್ದಾರೆ. ಇದನ್ನು ತುಂಬಾ ದೊಡ್ಡದು ಮಾಡುವ ಅಗತ್ಯವಿಲ್ಲ.
ಪಾಂಡ್ಯ-ರಾಹುಲ್ ಇಬ್ಬರಿಗೂ ಈಗ ತಪ್ಪಿನ ಅರಿವಾಗಿದೆ. ಇನ್ಮುಂದೆ ಅವರು ಒಳ್ಳೆತನವನ್ನು ಬೆಳೆಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ' ಎಂದರು.
ವಿವಾದವೇನು?
ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೊಹರ್ ನಡೆಸಿಕೊಡುವ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್-ಪಾಂಡ್ಯ ಸ್ವೇಚ್ಛಾಚಾರದ ಹೇಳಿಕೆ ನೀಡಿದ್ದರು. ಮಹಿಳೆಯ ಬಗ್ಗೆ ಕೀಳು ಅಭಿರುಚಿಯನ್ನು ತೋರಿಕೊಂಡಿದ್ದರು. ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇದು ಸಾರ್ವಜನಿಕರು ಮತ್ತು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು.
ನಾವೇನು ಯಂತ್ರವಲ್ಲ
'ನಾವೆಲ್ಲರೂ ಮನುಷ್ಯರೇ ಹೊರತು ಯಂತ್ರಲ್ಲ. ಯಂತ್ರವಾಗಿದ್ದರೆ ಎಲ್ಲವನ್ನೂ ಪರ್ಫೆಕ್ಟ್ ಅನ್ನುವಂತೆ ಮಾಡಬಹುದಿತ್ತು. ನಾವು ಹಾಗಲ್ಲವಲ್ಲ? ಇಲ್ಲಿ ನಾವೂ ಚಂದವಾಗಿ ಬದುಕಬೇಕು. ಇತರರೂ ಬದುಕೋಕೆ ಅವಕಾಶ ಮಾಡಿಕೊಡಬೇಕು. ತಪ್ಪನ್ನೇ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಸೌರವ್ ಹೇಳಿದ್ದಾರೆ.
ಸರಣಿಯಿಂದ ಅಮಾನತು
ಟಾಕ್ ಶೋ ವೇಳೆ ಪಾಂಡ್ಯ ಅವರೇ ಹೆಚ್ಚು ಎಲ್ಲೆ ಮೀರಿ ಮಾತನಾಡಿದ್ದು. ಅಂದು ಪಾಂಡ್ಯ ತಾನು ಹೆಣ್ಣನ್ನು ಹೇಗೆ ಗಮನಿಸುತ್ತೇನೆ ಎಂದೆಲ್ಲ ಹೇಳಿದ್ದರಲ್ಲದೆ ಮಹಿಳೆಯರನ್ನು ಸೆಕ್ಸಿಸ್ಟ್ ಎಂದು ಪರಿಗಣಿಸಿರುವ ರೀತಿಯಲ್ಲಿ ಮಾತನಾಡಿದ್ದರು. ರಾಹುಲ್ ಅವರು ಮಹಿಳೆಯರ ಬಗ್ಗೆ ಮಾತನಾಡಿದ್ದಕ್ಕಿಂತಲೂ ಡ್ರೆಸ್ಸಿಂಗ್ ರೂಮ್ನ ಸೀಕ್ರೆಟ್ಗಳನ್ನು ಬಿಟ್ಟುಕೊಟ್ಟಿದ್ದರು. ಇದು ವಿವಾದ ಸೃಷ್ಟಿಸಿತ್ತು. ಪರಿಣಾಮ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಅಮಾನತುಗೊಂಡಿದ್ದರು.