ಇದೇ ತಿಂಗಳು ಗುರುವಾರ (ಫೆ. 24) ಪ್ರಾರಂಭಗೊಳ್ಳಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಗೂ ಮುನ್ನ ಉಭಯ ತಂಡಗಳಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಟೀಂ ಇಂಡಿಯಾ ಪರ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಬೌಲರ್ ದೀಪಕ್ ಚಹಾರ್ ಟೂರ್ನಿಯಿಂದ ಹೊರಬಿದ್ರೆ, ಶ್ರೀಲಂಕಾ ಪರ ಕೀ ಸ್ಪಿನ್ನರ್ ವಹಿಂದು ಹಸರಂಗ ಟಿ20 ಸರಣಿಯಲ್ಲಿ ಆಡುತ್ತಿಲ್ಲ.
ಆಸ್ಟ್ರೇಲಿಯಾ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದ ಹಸರಂಗ ಕೋವಿಡ್-19 ಪಾಸಿಟಿವ್ ಆಗಿದ್ದರು. ಭಾರತಕ್ಕೆ ಈಗಾಗಲೇ ಶ್ರೀಲಂಕಾ ತಂಡವು ಆಗಮಿಸಿದ್ದು, ಕೋವಿಡ್ ನಿಂದ ಚೇತರಿಸಿಕೊಳ್ಳದ ಹಸರಂಗ ಆಸ್ಟ್ರೇಲಿಯಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾ ಸರಣಿಗೂ ಮುನ್ನ ಆಘಾತ: ಭಾರತದ ಪ್ರಮುಖ ಆಟಗಾರರಿಬ್ಬರು ಔಟ್
ಇತ್ತೀಚಿನ RT-PCR ಪರೀಕ್ಷೆಯಲ್ಲಿ, ಅವರು ಮತ್ತೆ ಪಾಸಿಟಿವ್ ಆಗಿದ್ದು, ಕುಶಾಲ ಮೆಂಡಿಸ್, ಬಿನುರಾ ಫೆರ್ನಾಂಡೋ ಅವರ ಜೊತೆಗೆ ಪಾಸಿಟಿವ್ ಆಗಿದ್ದಾರೆ. ಶ್ರೀಲಂಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-4 ಅಂತರದಲ್ಲಿ ಸೋಲನ್ನ ಕಂಡಿತು. ಮೊದಲ ನಾಲ್ಕು ಪಂದ್ಯ ಸೋತಿದ್ದ ಲಂಕಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಕಾಲಿಟ್ಟಿದೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹಸರಂಗ ಕೇವಲ ಎರಡು ಟಿ20 ಪಂದ್ಯಗಳಲ್ಲಿ ಮಾತ್ರ ಭಾಗಿಯಾಗಿದ್ರು. ಈ ಪಂದ್ಯಗಳಲ್ಲಿ 3/38 ಮತ್ತು 2/33 ವಿಕೆಟ್ ಪಡೆದು ಮಿಂಚಿದ್ದರು.
ಫೆಬ್ರವರಿ 24 ರಂದು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಮೊದಲ T20 ಅಂತರಾಷ್ಟ್ರೀಯ ಪಂದ್ಯದೊಂದಿಗೆ ಪ್ರಾರಂಭವಾಗುವ ಸರಣಿಯಲ್ಲಿ ಶ್ರೀಲಂಕಾವು ಭಾರತದ ವಿರುದ್ಧ ಮೂರು ಚುಟುಕು ಪಂದ್ಯಗಳನ್ನು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮುಂದಿನ ಎರಡು ಪಂದ್ಯಗಳು ಧರ್ಮಶಾಲಾದಲ್ಲಿ ಸತತ ದಿನಗಳಲ್ಲಿ (ಫೆಬ್ರವರಿ 26 ಮತ್ತು 27) ನಡೆಯಲಿವೆ.
ಇನ್ನು ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆದರೆ, ಎರಡನೇ ಟೆಸ್ಟ್ ಪಂದ್ಯ ಡೇ ಅಂಡ್ ನೈಟ್ ಬೆಂಗಳೂರಿನಲ್ಲಿ ನಡೆಯಲಿದೆ.