ಮೀಸಲು ಆಟಗಾರನಾಗಿ ಆಸ್ಟ್ರೇಲಿಯಾದಲ್ಲಿರುವ ಶಾರ್ದೂಲ್
ಶಾರ್ದೂಲ್ ಠಾಕೂರ್ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾರತದ ಮೀಸಲು ಆಟಗಾರನಾಗಿ ಹೆಸರಿಸಲ್ಪಟ್ಟಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿಯಿರುವ ಕಾರಣ ಶಾರ್ದೂಲ್ ಠಾಕೂರ್ಗೆ ಪ್ರಾಥಮಿಕ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಮೀಸಲು ಆಟಗಾರನಾಗಿ ಅವಕಾಶ ಪಡೆದುಕೊಂಡಿದ್ದಾರೆ ಮುಂಬೈ ಮೂಲದ ಈ ಆಟಗಾರ.
ಕಳೆದ ಆವೃತ್ತಿಯಲ್ಲಿ ಎಡವಿದ ಠಾಕೂರ್
ಶಾರ್ದೂಲ್ ಠಾಕೂರ್ ಕಳೆದ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ 10.75 ಕೋಟಿ ಮೊತ್ತ ಪಡೆಯುವ ಮೂಲಕ ದೊಡ್ಡ ಮೊತ್ತವನ್ನು ಗಳಿಸಿಕೊಂಡಿದ್ದರು ಕೂಡ ಆ ಬೃಹತ್ ಮೊತ್ತಕ್ಕೆ ಪೂರಕವಾದ ಪ್ರದರ್ಶನ ನೀಡಲು ವಿಫಲವಾದರು. ಆಡಿದ 14 ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ 140 ರನ್ಗಳನ್ನು ಗಳಿಸಿದ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ 15 ವಿಕೆಟ್ ಸಂಪಾದಿಸಿದ್ದರೂ ಅವರ ಎಕಾನಮಿ ರೇಟ್ 10ರ ಸನಿಹದಲ್ಲಿತ್ತು ಎಂಬುದು ಗಮನಾರ್ಹ.
ಮತ್ತಿಬ್ಬರು ಪ್ರತಿಭಾನ್ವಿತರನ್ನು ಕೈಬಿಡಲು ಡಿಸಿ ನಿರ್ಧಾರ?
ಇನ್ನು ಕ್ರಿಕ್ಬಜ್ ವರದಿಯ ಪ್ರಕಾರ ಶಾರ್ದೂಲ್ ಠಾಕೂರ್ ಮಾತ್ರವಲ್ಲದೆ ಮತ್ತಿಬ್ಬರು ಪ್ರತಿಭಾನ್ವಿತ ಆಟಗಾರರನ್ನು ಕೂಡ ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಯೋಜಿಸಿದೆ ಎನ್ನಲಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಮತ್ತು ಬ್ಯಾಟರ್ ಮಂದೀಪ್ ಸಿಂಗ್ ಡಿಸಿ ತಂಡದಿಂದ ಹೊರಬೀಳುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 16ರಂದು ಹರಾಜು
ಇನ್ನು ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ಮಿನಿ ಹರಾಜಿಗಾಗಿ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ನವೆಂಬರ್ 15ಕ್ಕೆ ಮುನ್ನ ಬಿಡುಗಡೆಗೊಳಿಸಬೇಕು ಎಂದು ಸೂಚನೆ ನೀಡಿದೆ. ಡಿಸೆಂಬರ್ 16ರಂದು ಈ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದ್ದು ಬೆಂಗಳೂರು ಅಥವಾ ಟರ್ಕಿಯ ಇಸ್ತಾಂಬೂಲ್ನಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಇನ್ನು ಆಟಗಾರರನ್ನು ಟ್ರೇಡ್ ಮಾಡುವ ಪ್ರಕ್ರಿಯೆ 2022ರ ಐಪಿಎಲ್ ಆವೃತ್ತಿ ಅಂತ್ಯವಾಗುತ್ತಿದ್ದಂತೆಯೇ ಜಾರಿಗೆ ಬಂದಿದ್ದರೂ ಮೇಲ್ನೋಟಕ್ಕೆ ಅದಕ್ಕೆ ಪೂರಕವಾದ ಯಾವ ಬೆಳವಣಿಗೆಗಳು ಕೂಡ ಈವರೆಗೆ ನಡೆದಿಲ್ಲ.