ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಸರ್ಫರಾಜ್ ಆಯ್ಕೆ ಮಾಡದ ಕಾರಣಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆಯ ಮಾನದಂಡದ ಬಗ್ಗೆ ಆಯ್ಕೆಗಾರರ ವಿರುದ್ಧ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ ಸುನಿಲ್ ಗವಾಸ್ಕರ್.
ಆಯ್ಕೆಗಾರರು ಆಟಗಾರರ ಗಾತ್ರ ಹಾಗೂ ಪ್ರಮಾಣವನ್ನು ಪರಿಗಣಿಸಿ ಆಯ್ಕೆ ಮಾಡಬೇಕು ಆದರೆ ಅದು ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ನ ಸಾಮರ್ಥ್ಯದ್ದಾಗಿರಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್. ಈ ಸಂದರ್ಭದಲ್ಲಿ ದೈಹಿಕಕಾರಣಕ್ಕಾಗಿ ಪ್ರತಿಭಾನ್ವಿತ ಆಟಗಾರರಿಗೆ ಮಣೆ ಹಾಕದ ಆಯ್ಕೆ ಮಂಡಳಿಯ ನಿಲುವಿನ ಬಗ್ಗೆ ಸುನಿಲ್ ಗವಾಸ್ಕರ್ ತೀವ್ರವಾಗಿ ಟೀಕಿಸಿದ್ದಾರೆ.
ಆಯ್ಕೆಗಾರರು ತೆಳ್ಳಗಿನ ಆಟಗಾರರನ್ನು ಆಯ್ಕೆ ಮಾಡಲು ಬಯಸಿದ್ದಾರೆ ಎಂದಾದರೆ ಅವರು ಫ್ಯಾಶನ್ ಶೋಗೆ ಹೋಗಬೇಕು. ಅಲ್ಲಿ ಮಾಡೆಲ್ಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಬ್ಯಾಟ್ ಹಾಗೂ ಬಾಲ್ ನೀಡಬೆಕು. ಬಳಿಕ ಅವರನ್ನು ತಂಡಕ್ಕೆ ಸೇರಸಿಕೊಳ್ಳಿ ಎಂದು ಅಸಮಾಧಾನದಿಂದಲೇ ಕಿಡಿಕಾರಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.
ಕಳೆದ ಮೂರು ದೇಶೀಯ ಕ್ರಿಕೆಟ್ ಆವೃತ್ತಿಗಳಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಸರ್ಫರಾಜ್ ಖಾನ್ 2441 ರನ್ಗಳಿಸಿ ರನ್ ಮಳೆ ಹರಿಸಿದ್ದಾರೆ. ಇಂಥಾ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ದೊರೆತಿಲ್ಲ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೂ ಸರ್ಫರಾಜ್ ಹೆಸರು ಪರಿಗಣಿಸಲಿಲ್ಲ. ಹೀಗಾಗಿ ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ಆಯ್ಕೆ ಮಂಡಳಿಯ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಪೋರ್ಟ್ಸ್ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಮಾತಾಡಿರುವ ಸುನಿಲ್ ಗವಾಸ್ಕರ್ "ಅಂತಿಮವಾಗಿ ನೀವು ಫಿಟ್ ಆಗಿರದಿದ್ದರೆ ಶತಕಗಳನ್ನು ಬಾರಿಸಲು ಸಾಧ್ಯವಿಲ್ಲ. ಕ್ರಿಕೆಟ್ ಫಿಟ್ನೆಸ್ ಎಂಬುದು ಬಹಳ ಮುಖ್ಯ. ನೀವು ಯೋಯೋ ಟೆಸ್ಟ್ ಸೇರುದಂತೆ ಯಾವುದೇ ಪರೀಕ್ಷೆ ಹೊಂದಿದ್ದರೂ ಪರವಾಗಿಲ್ಲ. ಆದರೆ ಯೋಯೋ ಟೆಸ್ಟ್ ಮಾತ್ರವೇ ನಿಮ್ಮ ಅಂತಿಮ ಮಾನದಂಡವಾಗಬಾರದು. ಕ್ರಿಕೆಟ್ಗೆ ಆತ ಫಿಟ್ ಇದ್ದಾನೆಯೇ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಯಾವುದೇ ವ್ಯಕ್ತಿಯಾಗಿರಲಿ ಆತ ಕ್ರಿಕೆಟ್ಗೆ ಫಿಟ್ ಆಗಿದ್ದಾನೆ ಎಂದಾದರೆ ಉಳಿದವೆಲ್ಲಾ ಮುಖ್ಯ ಸಂಗತಿಯಾಗುತ್ತದೆ ಎಂದು ನನಗೆ ಅನಿಸುವುದಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದ ಬಗ್ಗೆ ಸರ್ಫರಾಜ್ ಖಾನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ತಾನು ರೋಬೋಟ್ ಅಲ್ಲ. ಯಾವುದೇ ಇತರ ಸಾಮಾನ್ಯ ಮನುಷ್ಯರಿಗೆ ಆಗುವಂತೆಯೇ ಬೇಸರದ ಭಾವನೆಗಳುಂಟಾಗುತ್ತದೆ ಎಂದಿದ್ದರು. ಸರ್ಫರಾಜ್ ಈ ಬಾರಿಯ ರಣಜಿ ಆವೃತ್ತಿಯಲ್ಲಿ ಈಗಾಗಲೇ ಮೂರನೇ ಶತಕ ಸಿಡಿಸಿದ್ದಾರೆ.