'ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗೋದು ಅಷ್ಟೇ'; ಸೆಮಿಫೈನಲ್ ಪ್ರವೇಶದ ಕುರಿತು ತುಟಿಬಿಚ್ಚಿದ ಜಡೇಜಾ

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದರ ಕುರಿತು ಸದ್ಯ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಟೀಮ್ ಇಂಡಿಯಾ ಸೆಮಿಫೈನಲ್ ಸುತ್ತಿಗೆ ಯಶಸ್ವಿಯಾಗಿ ಪ್ರವೇಶಿಸಬೇಕೆಂದರೆ ಮುಂದಿನ ಪಂದ್ಯಗಳಲ್ಲಿ ಯಾವ ರೀತಿ ಗೆಲ್ಲಬೇಕು ಮತ್ತು ಟೀಮ್ ಇಂಡಿಯಾ ಇರುವ ಗುಂಪಿನ ಇತರೆ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಯಾವ ರೀತಿ ಬರಬೇಕು ಎಂಬುದರ ಕುರಿತು ಲೆಕ್ಕಾಚಾರಗಳು ನಡೆಯುತ್ತಿವೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಟ್ರೋಫಿ ಗೆಲ್ಲಲಿರುವ ತಂಡಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿತ್ತು. ಹೀಗೆ ಟೂರ್ನಿ ಆರಂಭಕ್ಕೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಟೀಮ್ ಇಂಡಿಯಾ ಟೂರ್ನಿ ಆರಂಭವಾದ ನಂತರ ಆ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಹೌದು, ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಹೀನಾಯವಾಗಿ ಸೋಲನ್ನು ಅನುಭವಿಸುವುದರ ಮೂಲಕ ಅತಿ ಕೆಟ್ಟ ಆರಂಭವನ್ನು ಪಡೆದುಕೊಂಡಿತು.
ಹೀಗೆ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ನಂತರ ನಡೆದ ಅಫ್ಘಾನಿಸ್ಥಾನ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಬೃಹತ್ ಅಂತರದಿಂದ ಗೆಲುವನ್ನು ಸಾಧಿಸುವುದರ ಮೂಲಕ ತಮ್ಮ ಗುಂಪಿನ ತಂಡಗಳ ಪೈಕಿ ಅತಿ ಹೆಚ್ಚು ನೆಟ್ ರನ್ ರೇಟ್ ಸಂಪಾದಿಸಿದೆ. ಅದರಲ್ಲಿಯೂ ಸ್ಕಾಟ್ಲೆಂಡ್ ವಿರುದ್ಧ ನವೆಂಬರ್ 5ರಂದು ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 6.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಬಾರಿಸುವುದರ ಮೂಲಕ ಅಬ್ಬರದ 8 ವಿಕೆಟ್ಗಳ ಜಯವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶದ ಕನಸು ಇನ್ನೂ ಜೀವಂತವಾಗಿದ್ದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರವೀಂದ್ರ ಜಡೇಜಾ ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಎದುರಾದ ಸೆಮಿಫೈನಲ್ ಪ್ರವೇಶದ ಪ್ರಶ್ನೆ ಕುರಿತು ರವೀಂದ್ರ ಜಡೇಜಾ ಉತ್ತರಿಸಿದ್ದು ಈ ಕೆಳಕಂಡಂತೆ ಮಾತನಾಡಿದ್ದಾರೆ..

ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ವಿರುದ್ಧ ಸೋತರೆ ಮುಂದೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ರವೀಂದ್ರ ಜಡೇಜಾ
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ನಂತರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು 'ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯಗಳಿಸಿದರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಅವಕಾಶವಿರುತ್ತದೆ, ಆದರೆ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸೋಲನ್ನು ಅನುಭವಿಸಿದರೆ ಮುಂದೆ ಕಥೆಯೇನು' ಎಂದು ರವೀಂದ್ರ ಜಡೇಜಾಗೆ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ರವೀಂದ್ರ ಜಡೇಜಾ "ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗುವುದು ಅಷ್ಟೇ, ಮತ್ತೇನು" ಎಂದು ಉತ್ತರವನ್ನು ನೀಡಿದ್ದಾರೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ
ಇನ್ನು ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಕೇವಲ 15 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆಯುವುದರ ಮೂಲಕ ಸ್ಕಾಟ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರವೀಂದ್ರ ಜಡೇಜಾ ಅವರ ಈ ಉತ್ತಮ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.

ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಕ್ಕೆ ಇರುವ ಏಕೈಕ ದಾರಿ
ಟೂರ್ನಿಯಲ್ಲಿ ಇದುವರೆಗೂ 4 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಗೆದ್ದು ಮತ್ತೆರಡು ಪಂದ್ಯಗಳಲ್ಲಿ ಸೋತಿರುವ ಟೀಮ್ ಇಂಡಿಯಾ 4 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಈ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನಾಳೆ ( ನವೆಂಬರ್ 7 ) ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕಡ್ಡಾಯವಾಗಿ ಸೋಲಬೇಕಿದೆ. ಅಷ್ಟೇ ಅಲ್ಲದೆ ಸೋಮವಾರ ಭಾರತ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಅಂತರದಲ್ಲಿ ಮತ್ತೆ ಗೆಲುವು ಸಾಧಿಸಬೇಕಿದೆ. ಈ ರೀತಿ ನಡೆದರೆ ಮಾತ್ರ ಉತ್ತಮ ನೆಟ್ ರನ್ ರೇಟ್ ಸಹಾಯದಿಂದ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ. ಒಂದುವೇಳೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರ ಬೀಳಲಿದ್ದು ನ್ಯೂಜಿಲೆಂಡ್ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications