
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಧಿಸಿದ ಗೆಲುವಿನೊಂದಿಗೆ ಭಾರತ ತಂಡದ ಸೋಲಿನ ಸರಪಳಿ ಮುರಿದಿದೆ. ಸತತ ಎರಡು ಸೋಲಿನಿಂದ ಟೀಮ್ ಇಂಡಿಯಾ ಹಾಗೂ ಅಭಿಮಾನಿಗಳು ಕಂಗೆಟ್ಟಿದ್ದರು. ಆದರೆ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಉತ್ಸಾಹ ಹೆಚ್ಚುವಂತೆ ಮಾಡಿದೆ. ಅಲ್ಲದೆ ಟೂರ್ನಿಯಲ್ಲಿ ಮುಂದುವರಿಯುವ ಕನಸಿಗೆ ಹೆಚ್ಚಿನ ಬಲ ದೊರೆತಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮವಾಗಿತ್ತು. ಅದರಲ್ಲೂ ಟೀಮ್ ಇಂಡಿಯಾದ ಓರ್ವ ಆಟಗಾರನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಅದು ಬೇರೆ ಯಾರೂ ಅಲ್ಲ ಅನುಭವಿ ಆಟಗಾರ ಆರ್ ಅಶ್ವಿನ್. ನಾಲ್ಕು ವರ್ಷಗಳ ನಂತರ ವೈಟ್ಬಾಲ್ ಕ್ರಿಕೆಟ್ಗೆ ಮರಳಿರುವ ಆರ್ ಅಶ್ವಿನ್ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಪ್ರದರ್ಶನ ನಿಡಿದ್ದಾರೆ. ಅಲ್ಲದೆ 2 ವಿಕೆಟ್ ಕೂಡ ಕಬಳಿಸಿದ್ದಾರೆ. ಅನುಭವಿ ಆಟಗಾರನ ಈ ಸದ್ಭಿತ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಭವಿ ಆರ್ ಅಶ್ವಿನ್ ಅವರ ಕಮ್ಬ್ಯಾಕ್ ತಂಡಕ್ಕೆ ನಿಜಕ್ಕೂ ಸಕಾರಾತ್ಮಕ ಬಲವನ್ನು ನೀಡಿದೆ ಎಂದಿದ್ದಾರೆ. "ಆರ್ ಅಶ್ವಿನ್ ಅವರ ಕಮ್ಬ್ಯಾಕ್ ನಿಜಕ್ಕೂ ಅದ್ಭುತವಾಗಿತ್ತು. ಇದು ತಂಡಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ. ಅವರು ಬೌಲಿಂಗ್ನಲ್ಲಿ ತಮ್ಮ ನಿಯಂತ್ರಣವನ್ನು ಐಪಿಎಲ್ನಲ್ಲಿಯೂ ತೋರಿಸಿದ್ದರು. ಆತನೋರ್ವ ವಿಕೆಟ್ ಟೇಕರ್ ಹಾಗೂ ಚಾಣಾಕ್ಷ ಬೌಲರ್ ಆಗಿದ್ದಾರೆ ಎಂದು ವಿರಾಟ್ ಕೊಹ್ಲಿ ಆರ್ ಅಶ್ವಿನ್ ಬಗ್ಗೆ ಹೊಗಳಿಕೆಯ ಮಾತುಗನ್ನಾಗಿದ್ದಾರೆ. '
ಮೊದಲ ಎರಡು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಆರ್ ಅಶ್ವಿನ್ ಅಫ್ಘಾನಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಆರ್ ಅಶ್ವಿನ್ ಕೇವಲ 14 ರನ್ ನೀಡಿ 2 ವಿಕೆಟ್ ಸಂಪಾದಿಸಿದರು. ಅವರ ಬದಲಿಗೆ ಮೊದಲ ಎರಡು ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆದುಕೊಂಡಿದ್ದರು. ಆದರೆ ವರುಣ್ ಚಕ್ರವರ್ತಿ ಪರಿಣಾಮಕಾರಿ ಎನಿಸಿರಲಿಲ್ಲ. ಅಲ್ಲದೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಕ್ಕೆ ಅವರು ಸಂಪೂರ್ಣವಾಗಿ ಫಿಟ್ ಇಲ್ಲದ ಕಾರಣ ಆಡುವ ಬಳಗದಿಂದ ಹೊರಗುಳಿದಿದ್ದರು. ಹೀಗಾಗಿ ಆರ್ ಅಶ್ವಿನ್ಗೆ ಸ್ಥಾನ ದೊರೆತಿದೆ. ಈ ಅವಕಾಶವನ್ನು ಅಶ್ವಿನ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ನಲ್ಲಿ ಕೂಡ ಸ್ಪೋಟಕ ಪ್ರದರ್ಶನ ನೀಡಿದೆ. ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ತಂಡದ ಅಫ್ಘಾನಿಸ್ತಾನದ ಬೌಲರ್ಗಳ ವಿರುದ್ಧ ದಂಡೆತ್ತಿ ಹೋದರು. ಈ ಜೋಡಿಯಿಂದ ಮೊದಲಕ ವಿಕೆಟ್ಗೆ ಭರ್ಜರಿ 140 ರನ್ಗಳ ಕೊಡುಗೆ ಬಂದಿತ್ತು. ನಂತರ ಬ್ಯಾಟಿಂಗ್ಗೆ ಇಳಿದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 210ಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೆಟ್ರನ್ರೇಟ್ ಹೆಚ್ಚುಗೊಳಿಸುವ ಯೋಚನೆ ಪಂದ್ಯದ ಆರಂಭಕ್ಕೂ ಮುನ್ನವೇ ನಮ್ಮಲ್ಲಿತ್ತು ಎಂಬುದನ್ನು ಹೇಳಿದ್ದಾರೆ. "ನೆಟ್ ರನ್ರೇಟ್ ನಮ್ಮ ತಲೆಯಲ್ಲಿದ್ದಿದ್ದು ನಿಜ. ತಂಡದ ಮೀಟಿಂಗ್ನಲ್ಲಿಯೂ ನಾವು ನಮಗಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಚರ್ಚಿಸಿದ್ದೆವು ಎಂಬುದಾಗಿ ನಾಯಕ ವಿರಾಟ್ ಕೊಹ್ಲಿ ವಿವರಿಸಿದ್ದಾರೆ.
ಆಡಿದ ಮೂರು ಪಂದ್ಯಗಳ ಪೈಕಿ ಒಂದು ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಸದ್ಯ ಅಂಕಪಟ್ಟಿಯಲ್ಲಿ 02 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಭಾರತ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿಯಿದ್ದು ಇದರಲ್ಲಿ ತಂಡದ ನೆಟ್ರನ್ರೇಟ್ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರವೇ ಟೀಮ್ ಇಂಡಿಯಾಗೆ ಸೆಮಿಫೈನಲ್ಗೇರುವ ಅವಕಾಶ ದೊರೆಯಲಿದೆ.