ನಾಯಕ ಅಥವಾ ಕೋಚ್ ಭಾಗವಹಿಸಬೇಕಿತ್ತು
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ನಂತರ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಅಜರುದ್ದೀನ್ ಈ ಮಾಧ್ಯಮಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ರವಿ ಶಾಸ್ತ್ರಿ ಭಾಗವಹಿಸಬೇಕಾಗುತ್ತು ಎಂಬ ಅಭಿಪ್ರಾಯಪಟ್ಟಿದ್ದಾರೆ. "ನನ್ನ ಅಭಿಪ್ರಾಯದ ಪ್ರಕಾರ ಈ ಮಾಧ್ಯಮಗೋಷ್ಠಿಗೆ ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ರವಿ ಶಾಸ್ತ್ರಿ ಬರಬೇಕಾಗಿತ್ತು. ನಾಯಕ ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಲು ಇಷ್ಟಪಡದಿದ್ದರೆ ಅದು ಪರವಾಗಿಲ್ಲ. ಆದರೆ ಕೋಚ್ ರವಿ ಶಾಸ್ತ್ರಿಯವರು ಇದರಲ್ಲಿ ಭಾಗವಹಿಸಲೇಬೇಕಿತ್ತು" ಎಂದು ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ಗೆಲುವಿನ ಸಮಯದಲ್ಲಿ ಮಾತ್ರ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದಲ್ಲ!
"ನೀವು ತಂಡ ಗೆಲುವು ಸಾಧಿಸಿದ ಸಂದರ್ಭದಲ್ಲಿ ಮಾತ್ರವೇ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದಲ್ಲ. ಸೋಲಿನ ನಂತರ ಅದಕ್ಕೂ ವಿವರಣೆಯನ್ನು ನೀಡಬೇಕು. ಜಸ್ಪ್ರಿತ್ ಬೂಮ್ರಾ ಅವರನ್ನು ಮಾಧ್ಯಮಗೋಷ್ಠಿಗೆ ಕಳುಹಿಸಿರುವುದು ಸೂಕ್ತವಲ್ಲ. ಇದಕ್ಕೆ ನಾಯಕ ಅಥವಾ ಕೋಚ್ ಭಾಗವಹಿಸಬೇಕು. ಅಥವಾ ಕೋಚಿಂಗ್ ವಿಭಾಗದ ಸಿಬ್ಬಂದಿಗಳು ಭಾಗವಹಿಸಬೇಕು" ಎಂದು ಮೊಹಮ್ಮದ್ ಅಜರುದ್ದೀನ್ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ.
"ಮುಖಭಂಗ ಅನುಭವಿಸುವಂತದ್ದೇನೂ ಇಲ್ಲ"
ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಮಾಜಿ ನಾಯಕ ಅಜರುದ್ದೀನ್ ಅವರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸೋಲಿನ ನಂತರ ಪ್ರಶ್ನೆಗಳನ್ನು ಎದುರಿಸಲು ಬಯಸಿರಲಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅಜರುದ್ದೀನ್, "ನೀವು ಒಂದು ಅಥವಾ ಎರಡು ಪಂದ್ಯವನ್ನು ಸೋತರೆ ಅದರಲ್ಲಿ ಮುಖಭಂಗ ಅನುಭವಿಸುವಂತದ್ದು ಏನೂ ಇಲ್ಲ. ಆದರೆ ನಾಯಕ ಅಥವಾ ಕೋಚ್ ಮುಂದೆ ಬಂದು ಯಾವ ಕಾರಣಕ್ಕಾಗಿ ತಂಡ ಸೋಲು ಕಂಡಿತು ಎಂಬುದನ್ನು ವಿವರಿಸಬೇಕು. ಯಾರಾದರೂ ಅದರ ಜವಾಬ್ಧಾರಿ ವಹಿಸಿಕೊಳ್ಳಬೇಕು. ಇದೆಲ್ಲದಕ್ಕೂ ಬೂಮ್ರಾ ಅವರಿಂದ ಉತ್ತರ ದೊರೆಯುತ್ತದೆ ಎಂದು ಹೇಗೆ ನಿರೀಕ್ಷಿಸುವುದಕ್ಕೆ ಸಾಧ್ಯವಿದೆ. ನೀವು ತಂಡ ಗೆದ್ದಾಗ ಪ್ರಶ್ನೆಗಳನ್ನು ಎದುರಿಸುತ್ತೀರಿ ಎಂದಾದರೆ ತಂಡ ಕಠಿಣ ಸ್ಥಿತಿಯಲ್ಲಿದ್ದಾಗಲೂ ಮುಂದೆ ಬರಬೇಕು" ಎಂದಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್.