
ಹೊಸದಿಲ್ಲಿ, ಜುಲೈ 16: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಸಿಬ್ಬಂದಿ ವರ್ಗದ ಜೊತೆಗಿನ ಒಪ್ಪಂದ ಇನ್ನೇನು ಮುಕ್ತಾಯಗೊಳ್ಳಲಿದ್ದು, ನೂತನ ನೇಮಕಾತಿ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಅರ್ಜಿ ಆಹ್ವಾನಿಸಿದೆ.
ಅಂದಹಾಗೆ ನೇಮಕಾತಿ ಪ್ರಕ್ರಿಯೆಗೆ ಶಾಸ್ತ್ರಿ ಮತ್ತು ತಂಡ ಮರಳಿ ನೇರವಾಗಿ ಪಾಲ್ಗೊಳ್ಳಬಹುದಾಗಿದೆ. ಜೊತೆಗೆ ನೂತನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 60 ದಾಟಿರಬಾರದು ಹಾಗೂ ಕನಿಷ್ಠ 2 ವರ್ಷ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ನೀಡಿದ ಅನುಭವವಿರಬೇಕು ಎಂದು ಬಿಸಿಸಿಐ ಸೂಚಿಸಿದೆ.
"ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜುಲೈ 30, 2019ರ ಒಳಗಾಗಿ [email protected]ಗೆ ಕಳುಹಿಸಿಕೊಡತಕ್ಕದ್ದು," ಎಂದು ಬಿಸಿಸಿಐ ನೂತನ ಕೋಚ್ ನೇಮಕಾತಿ ಕುರಿತಾಗಿ ಅರ್ಜಿ ಆಹ್ವಾನಿಸುತ್ತಿರುವ ಸಂಗತಿಯನ್ನಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
2017ರ ಜುಲೈನಲ್ಲಿ ರವಿ ಶಾಸ್ತ್ರಿ ನೂತನ ಕೋಚ್ ಆಗಿ ನೇಮಕಗೊಂಡ ಸಂದರ್ಭದಲ್ಲಿ ಕೋಚ್ ಹುದ್ದೆಗೆ ಬಿಸಿಸಿಐ ಒಟ್ಟು 9 ಅರ್ಹತಾ ಮಾನದಂಡವನ್ನು ಹೊಂದಿತ್ತು. ಆದರೆ, ಈ ಬಾರಿ ಇದನ್ನು ಕೇವಲ ಮೂರು ಮಾನದಂಡಗಳಿಗೆ ಸೀಮಿತಗೊಳಿಸಲಾಗಿದೆ.
ಕೋಚ್ ಹುದ್ದೆಯ ಆಕಾಂಕ್ಷಿಗಳು ಟೆಸ್ಟ್ ಆಡುವ ತಂಡಕ್ಕೆ ಕನಿಷ್ಠ 2ರಿಂದ 3 ವರ್ಷಗಳ ಕಾಲ ತರಬೇತಿ ನೀಡಿರಬೇಕು. ಅಲ್ಲದೆ ಕನಿಷ್ಠ 30 ಟೆಸ್ಟ್ ಅಥವಾ 50 ಒಡಿಐ ಪಂದ್ಯಗಳನ್ನು ಆಡಿದ ಅನುಭವವಿರಬೇಕು ಹಾಗೂ 60 ವರ್ಷ ವಯಸ್ಸು ದಾಟಿರಬಾರದು ಎಂಬುದು ಬಿಸಿಸಿಐನ ನೂತನ ಮಾನದಂಡಗಳಾಗಿವೆ. ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಕೋಚ್ ಆಯ್ಕೆಗೂ ಇದೇ ಮಾನದಂಡ ಅನುಸರಿಸಲಾಗುತ್ತಿದ್ದು, ಕನಿಷ್ಠ 10 ಟೆಸ್ಟ್ ಅಥವಾ 25 ಒಡಿಐ ಆಡಿದ್ದರೂ ಈ ಹುದ್ದೆಗಳಿಗೆ ಬಿಸಿಸಿಐ ಪರಿಗಣಿಸಲಿದೆ. ಆದರೆ, ವಯಸ್ಸು ಮಾತ್ರ 60 ದಾಟಿರಬಾರದು.
ಸದ್ಯ ಭಾರತ ತಂಡದ ಕೋಚಿಂಗ್ ಸಿಬ್ಬಂದಿ ವರ್ಗದಲ್ಲಿರುವ ರವಿಶಾಸ್ತ್ರಿ (ಮುಖ್ಯ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್), ಸಂಜಯ್ ಬಾಂಗರ್ (ಬ್ಯಾಟಿಂಗ್ ಕೋಚ್) ಮತ್ತು ಆರ್. ಶ್ರೀಧರ್ (ಫೀಲ್ಡಿಂಗ್ ಕೋಚ್) ಎಲ್ಲರಿಗೂ 45 ದಿನಗಳ ಕಾಲ ಸೇವೆಯನ್ನು ವಿಸ್ತರಿಸಲಾಗಿದೆ. ವಿಶ್ವಕಪ್ ಮುಕ್ತಾಯದೊಂದಿಗೆ ಕೋಚಿಂಗ್ ವರ್ಗದ ಜೊತೆಗಿನ ಒಪ್ಪಂದ ಅಂತ್ಯಗೊಂಡಿದ್ದು, ಆಗಸ್ಟ್ 3ರಂದು ಆರಂಭವಾಗಲಿರುವ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ನಿಟ್ಟಿನಲ್ಲಿ ಒಪ್ಪಂದ ವಿಸ್ತರಿಸಲಾಗಿದೆ.
ವಿರಾಟ್ ಕೊಹ್ಲಿ ಪಡೆ ಇತ್ತೀಚೆಗೆ ಅಂತ್ಯಗೊಂಡ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು. ಆದರೂ, ಈಗಿರುವ ತರಬೇತಿ ವರ್ಗ ಮರಳಿ ಆಯ್ಕೆಯಾಗಲು ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅನುಮತಿಸಿದೆ.
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಭಾರತ ತಂಡ ತನ್ನ ತಾಯ್ನಾಡಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನಾಡಲಿದ್ದು, ಸೆಪ್ಟೆಂಬರ್ 15ಕ್ಕೆ ವಿವಿಧ ಮಾದರಿಯ ಕ್ರಿಕೆಟ್ನ ಸರಣಿ ಆರಂಭವಾಗಲಿದೆ.
2017ರಲ್ಲಿ ಟೀಮ್ ಇಂಡಿಯಾದ ಅಂದಿನ ಕೋಚ್ ಅನಿಲ್ ಕುಂಬ್ಳೆ ವಿವಾದಾತ್ಮಕ ರೀತಿಯಲ್ಲಿ ಅಂತ್ಯಗೊಂಡ ಬಳಿಕ ರವಿ ಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇದಕ್ಕೂ ಮುನ್ನ 57 ವರ್ಷದ ಮಾಜಿ ಕ್ರಿಕೆಟಿಗ ಶಾಸ್ತ್ರಿ, 2014ರಿಂದ 2016ರವರೆಗೆ ಭಾರತ ತಂಡದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದರು.
ಅಂದಹಾಗೆ ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ತಂಡ ಈವರೆಗೆ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ. 2015 ಮತ್ತು 2016ರ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಸೆಮಿಫೈನಲ್ಸ್ ಹಂತದಲ್ಲಿ ತನ್ನ ಹೋರಾಟ ಕೊನೆಗೊಳಿಸಿತ್ತು. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದಿರುವುದಷ್ಟೇ ಶಾಸ್ತ್ರಿ ಅಂಡ್ ಟೀಮ್ನ ಬಹುದೊಡ್ಡ ಸಾಧನೆಯಾಗಿದೆ.