ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಇನ್ನಿಂಗ್ಸ್ನ 1.4 ನೇ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಅನಾಮುಲ್ ಹಕ್ ನೀಡಿದ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡರು.
ಚೆಂಡು ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಬಡಿದ ಕಾರಣ ನೋವಿನಿಂದ ಬಳಲಿದರು. ಕೈಯಿಂದ ರಕ್ತ ಬರುತ್ತಿದ್ದ ಕಾರಣ ರೋಹಿತ್ ಶರ್ಮಾ ತಕ್ಷಣವೇ ಮೈದಾನದಿಂದ ಹೊರನಡೆದರು.
ಗಾಯದ ಸ್ವರೂಪ ತೀವ್ರವಾಗಿದ್ದ ಕಾರಣ ಕೈ ಎಕ್ಸ್ ರೇ ಮಾಡಿಸಲು ಅವರನ್ನು ಆಸ್ಪತ್ರಗೆ ಕರೆದೊಯ್ಯಲಾಯಿಗೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ರೋಹಿತ್ ಶರ್ಮಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಅವರ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ರೋಹಿತ್ ಶರ್ಮಾ ಬದಲಿಯಾಗಿ ರಜತ್ ಪಟಿದಾರ್ ಫೀಲ್ಡಿಂಗ್ ಮಾಡುತ್ತಿದ್ದಾರೆ. ನಾಯಕನ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಸ್ಟ್ಯಾಂಡ್ ಇನ್ ನಾಯಕನಾಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಾರಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ವೈದ್ಯರ ತಪಾಸಣೆ ನಂತರವೇ ತಂಡದ ಮ್ಯಾನೇಜ್ಮೆಂಟ್ ಮುಂದಿನ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ತಂಡದಲ್ಲಿ ಎರಡು ಬದಲಾವಣೆ
ಸರಣಿಯನ್ನು ಜೀವಂತವಾಗಿರಿಸಲು ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಟೀಂ ಇಂಡಿಯಾ, ಆಡುವ ಬಳಗದಲ್ಲಿ ಎರಡು ಪ್ರಮುಖ ಬದಲವಾಣೆ ಮಾಡಿದೆ. ಕುಲದೀಪ್ ಸೇನ್ ಬದಲಿಗೆ ವೇಗಿ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಶಹಬಾಜ್ ಅಹ್ಮದ್ ಬದಲಿಗೆ ಗಾಯದಿಂದ ಚೇತರಿಸಿಕೊಂಡಿರುವ ಅಕ್ಷರ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬಾಂಗ್ಲಾದೇಶ : ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್