ಶ್ರೇಯಸ್ ಐಯ್ಯರ್
ಶ್ರೇಯಸ್ ಐಯ್ಯರ್ಗೆ ಟಿ20 ತಂಡದಲ್ಲಿ ಸಾಕಷ್ಟು ಬೆಂಬಲವನ್ನು ನೀಡಿದರೂ ದೊಡ್ಡ ಮಟ್ಟದ ಪ್ರದರ್ಶನ ನೀಡುವಲ್ಲಿ ಐಯ್ಯರ್ ವಿಫಲವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮಾತ್ರವೇ ಆರಂಬಿಕನಾಗಿ ಕಣಕ್ಕಿಳಿದು ಐಯ್ಯರ್ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಏಕದಿನ ಮಾದರಿಯಲ್ಲಿ ಕೆಲ ಅದ್ಭುತ ಇನ್ನಿಂಗ್ಸ್ಗಳನ್ನು ನೀಡಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರೂ ಟಿ20 ಮಾದರಿಯಲ್ಲಿ ಮಿಂಚಲು ಐಯ್ಯರ್ ವಿಫಲವಾಗಿದ್ದಾರೆ. ಇನ್ನು ಶಾರ್ಟ್ ಎಸೆತದಲ್ಲಿ ಶ್ರೇಯಸ್ ದೊಡ್ಡ ಮಟ್ಟದ ವೈಫಲ್ಯವನ್ನು ಅನುಭವಿಸುತ್ತಿದ್ದು ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನಡೆಯುವ ಕಾರಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಹೀಗಾಗಿ ಶ್ರೇಯಸ್ ಐಯ್ಯರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ.
ಕುಲ್ದೀಪ್ ಯಾದವ್
ಚೈನಾಮನ್ ಸ್ಪಿನ್ನರ್ ಎಂದೇ ಖ್ಯಾತವಾಗಿರುವ ಕುಲ್ದೀಪ್ ಯಾದವ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಅವಕಾಶ ಪಡೆದುಕೊಂಡಿದ್ದಾರೆ. ಅದಕ್ಕೂ ಹಿಂದಿನ ದಕ್ಷಿಣ ಆಪ್ರಿಕಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೂ ಕುಲ್ದೀಪ್ ಹೊರಗುಳಿದಿದ್ದರು. ವಿಂಡೀಸ್ ವಿರುದ್ಧ ಸಿಕ್ಕ ಅವಕಾಶದಲ್ಲಿ ಕುಲ್ದೀಪ್ ಯಾದವ್ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಆದರೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ರೇಸ್ನಲ್ಲಿ ಕುಲ್ದೀಪ್ ಬಹಳಷ್ಟು ಹಿಂದುಳಿದಿದ್ದಾರೆ. ಯುಜುವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ಮಧ್ಯೆ ಕುಲ್ದೀಪ್ ಯಾದವ್ಗೆ ಅವಕಾಶ ಕ್ಷೀಣಿಸಿದೆ.
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ ಭಾರತ ತಂಡದಲ್ಲಿ ಮತ್ತೊಮ್ಮೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿದರೂ ಟಿ20 ಸರಣಿಯಲ್ಲಿ ಅಂತಿಮ ಎರಡು ಪಂದ್ಯಗಳಲ್ಲಿ ಮಾತ್ರವೇ ಅವಕಾಶ ದೊರೆತಿದೆ. ಅಲ್ಲಿ ಮಿಂಚಲು ಹೆಚ್ಚಿನ ಅವಕಾಶವೂ ಸಂಜುಗೆ ದೊರೆತಿಲ್ಲ. ಮತ್ತೊಂದೆಡೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಮುಂದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದ್ದು ಇಶಾನ್ ಕಿಶನ್ ಕೂಡ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಸಂಜುಗೆ ಅವಕಾಶ ಕ್ಷೀಣಿಸಿದಂತೆ ಭಾಸವಾಗುತ್ತಿದೆ.
ಆವೇಶ್ ಖಾನ್
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆವೇಶ್ ಖಾನ್ ಹಾಗೂ ಅರ್ಷ್ದೀಪ್ ಸಿಂಗ್ ಇಬ್ಬರಿಗೂ ಉತ್ತಮ ಅವಕಾಶ ದೊರೆತಿದೆ. ಆದರೆ ಈ ಸಂದರ್ಭದಲ್ಲಿ ಅರ್ಷ್ದೀಪ್ ಸಿಂಗ್ ತಮ್ಮ ಸಾಮರ್ಥ್ಯವನ್ನು ಅದ್ಭುತವಾಗಿ ಬಳಸಿಕೊಂಡು ಮಿಂಚಿದ್ದಾರೆ. ಆದರೆ ಆವೇಶ್ ಖಾನ್ ಮಿಂಚಲು ವಿಫಲವಾಗಿದ್ದಾರೆ. ಈ ಹಿಂದೆ ಐರ್ಲೆಂಡ್ ಪ್ರವಾಸದಲ್ಲಿಯೂ ಆವೇಶ್ ಖಾನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಆವೇಶ್ ಖಾನ್ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ.