
ಮುಂಬೈ, ಮೇ 22: ಅದ್ಭುತ ರನ್ ಮೂಲಕ ವಿರಾಟ್ ಕೊಹ್ಲಿ ಬೆರಗು ಮೂಡಿಸಬಲ್ಲರು. ಆದರೆ ವಿಶ್ವಕಪ್ ಟ್ರೋಫಿ ಗೆಲ್ಲಿಸೋದು ಕೊಹ್ಲಿಯೊಬ್ಬರಿಂದಾಗೋಲ್ಲ. ಅದಕ್ಕೆ ಇಡೀ ತಂಡದ ಆಟಗಾರರ ಬೆಂಬಲ ಬೇಕು ಎಂದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಪಿಟಿಐ ಜೊತೆ ಸಂದರ್ಶನದಲ್ಲಿ ಮಾತನಾಡುತ್ತ ಸಚಿನ್, 'ನೀವು ಪ್ರತೀ ಪಂದ್ಯದಲ್ಲೂ ಒಬ್ಬೊಬ್ಬ ಆಟಗಾರ ಮಿಂಚೋದನ್ನು ನೋಡಲು ಸಾಧ್ಯವಿದೆ. ಆದರೆ ಇಡೀ ತಂಡದ ಆಟಗಾರರ ಬೆಂಬಲವಿಲ್ಲದಿದ್ದರೆ ಆಟ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ದೇಶಕ್ಕೆ ವಿಶ್ವಕಪ್ನಲ್ಲಿ ಗೆದ್ದು ಕೊಡುವ ನಿಟ್ಟಿನಲ್ಲಿ ಕೊಹ್ಲಿ ಜೊತೆ ಎಲ್ಲಾ ಸಹ ಆಟಗಾರರೂ ಮುಂದೆ ಬರಬೇಕು' ಎಂದರು.
ತಂಡದಲ್ಲಿ ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಸೇರ್ಪಡೆ, ನಾಲ್ಕನೇ ಬ್ಯಾಟಿಂಗ್ ಕ್ರಮಾಂಕಗಳ ಬಗ್ಗೆಯೂ ವಿಚಾರಗಳನ್ನು ಹರವಿಕೊಂಡ ಸಚಿನ್, ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಸ್ಥಿರ ಬ್ಯಾಟ್ಸ್ಮನ್ ಇಲ್ಲದ ಬಗ್ಗೆ ಬೇಸರವೂ ತೋರಿಕೊಂಡರು. ಪಂದ್ಯದ ಪರಿಸ್ಥಿಗನುಗುಣವಾಗಿ 4ನೇ ಕ್ರಮಾಂಕವನ್ನು ಬೇಕಾದರೆ ಬದಲಾಯಿಸಿಕೊಳ್ಳಬಹುದು ಎಂದು ಸಲಹೆಯಿತ್ತರು.
'ಅಸಾಮಾನ್ಯ ಆಟ ತೋರಬಲ್ಲ ಬ್ಯಾಟ್ಸ್ಮನ್ಗಳು ನಮ್ಮಲ್ಲಿದ್ದಾರೆ. ನನಗನ್ನಿಸಿದ ಮಟ್ಟಿಗೆ 4ನೇ ಕ್ರಮಾಂಕ ಒಂದು ಸಂಖ್ಯೆಯಷ್ಟೆ. ಆ ಜಾಗಕ್ಕೆ ಸ್ಥಿರ ಬ್ಯಾಟ್ಸ್ಮನ್ ಇಲ್ಲದಿರುವುದರಿಂದ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ' ಎಂದು ಸಚಿನ್ ವಿವರಿಸಿದರು.
ಮಾತು ಮುಂದುವರೆಸಿದ ಲಿಟ್ಲ್ ಮಾಸ್ಟರ್, 'ನಮ್ಮ ಆಟಗಾರರು ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 4, 6, ಅಥವಾ 8ನೇ ಕ್ರಮಾಂಕಕ್ಕೆ ಯಾರು ಸೂಕ್ತ ಅನ್ನೋದು ಅವರಿಗೇ ಅರಿವಿದೆ. ಪಂದ್ಯದ ಸಂದರ್ಭಗಳನ್ನು ಅರಿತುಕೊಳ್ಳೋದೆ ಗೆಲುವಿನ ಗುಟ್ಟಾಗಲಿದೆ' ಎಂದು ಟೀಮ್ ಇಂಡಿಯಾದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.