
ಟೀಮ್ ಇಂಡಿಯಾದ ಮುಖ್ಯ ತರಬೇತುದಾರನಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರ ಅವಧಿ ನವೆಂಬರ್ 8ಕ್ಕೆ ಮುಕ್ತಾಯಗೊಂಡಿದೆ. ಹೌದು, ನಮೀಬಿಯಾ ವಿರುದ್ಧ ನವೆಂಬರ್ 8ರಂದು ನಡೆದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಭಾರತದ ಅಂತಿಮ ಪಂದ್ಯವೇ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರವಿಶಾಸ್ತ್ರಿ ಕಾರ್ಯನಿರ್ವಹಿಸಿದ ಕೊನೆಯ ಪಂದ್ಯ ಕೂಡ ಆಗಿದೆ.
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ತನ್ನ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದ ಟೀಂ ಇಂಡಿಯಾ ನಂತರ ನಡೆದ ಆಫ್ಘಾನಿಸ್ತಾನ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿತು. ಆದರೆ ಸೆಮಿ ಫೈನಲ್ ಸುತ್ತನ್ನು ಪ್ರವೇಶಿಸಲು ಬೇಕಾಗಿದ್ದ ಅಂಕಗಳನ್ನು ಗಳಿಸುವಲ್ಲಿ ಎಡವಿದ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಹೀಗೆ ಟೀಮ್ ಇಂಡಿಯಾ ಮತ್ತು ನಮೀಬಿಯಾ ತಂಡಗಳ ನಡುವೆ ನವೆಂಬರ್ 8ರಂದು ನಡೆದ ಪಂದ್ಯ ಕೇವಲ ರವಿಶಾಸ್ತ್ರಿಗೆ ಮಾತ್ರವಲ್ಲದೆ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೂ ಕೂಡ ಅಂತಿಮ ಪಂದ್ಯವಾಗಿತ್ತು.
ಹೌದು, ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ಭರತ್ ಅರುಣ್ ಅವರ ತರಬೇತುದಾರರಾಗಿ ಕೆಲಸ ನಿರ್ವಹಿಸುವ ಅವಧಿ ನವೆಂಬರ್ 8ಕ್ಕೆ ಮುಕ್ತಾಯಗೊಂಡಿದ್ದು ಈ ಮೂವರೂ ಸಹ ತಮ್ಮ ಕೆಲಸವನ್ನು ಮುಂದುವರಿಸಲು ಇಚ್ಛಿಸದೇ ಕೋಚ್ ಸ್ಥಾನದಿಂದ ನಿರ್ಗಮಿಸಿದ್ದಾರೆ. ರವಿಶಾಸ್ತ್ರಿ ಅವರಿಗೆ ಹೆಚ್ಚಿನ ವಯಸ್ಸು ಕೂಡ ಆಗಿದ್ದು, ಕೋಚ್ ಸ್ಥಾನದಿಂದ ನಿರ್ಗಮಿಸಿದ ನಂತರ ವಿವಿಧ ಹುದ್ದೆಗಳ ಅವಕಾಶಗಳನ್ನು ಸಹ ಹೊಂದಿದ್ದಾರೆ. ಹೀಗಾಗಿ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರಿಯುವಲ್ಲಿ ಆಸಕ್ತಿಯನ್ನು ತೋರಿಲ್ಲ ಎನ್ನಲಾಗುತ್ತಿದೆ.
ಹೀಗೆ 2017ರಿಂದ ಟೀಮ್ ಇಂಡಿಯಾ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಶಾಸ್ತ್ರಿ ನಿರ್ಗಮಿಸಿರುವುದು ತಂಡದ ಎಲ್ಲಾ ಆಟಗಾರರಲ್ಲಿಯೂ ಬೇಸರವನ್ನು ಉಂಟು ಮಾಡಿತ್ತು. ಒಂದೆಡೆ ನಾಯಕ ವಿರಾಟ್ ಕೊಹ್ಲಿ ಕೂಡ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿರುವುದು, ಮತ್ತೊಂದೆಡೆ ಭಾರತ ತಂಡದ ಕೋಚ್ ಸ್ಥಾನದಿಂದ ರವಿಶಾಸ್ತಿ ಕೆಳಗಿಳಿಯುತ್ತಿರುವುದಕ್ಕೆ ತಂಡದ ಆಟಗಾರರು ಭಾವುಕರಾಗಿದ್ದರು.
ಹೀಗೆ ನಮಿಬಿಯಾ ವಿರುದ್ಧದ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಇಬ್ಬರೂ ಕೂಡ ತಮ್ಮ ಬ್ಯಾಟ್ಗಳನ್ನು ರವಿಶಾಸ್ತ್ರಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಂದ ಈ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ರವಿಶಾಸ್ತ್ರಿ ಫೋಟೋವೊಂದಕ್ಕೆ ಪೋಸ್ ನೀಡಿದ್ದು ತಮ್ಮೆರಡೂ ಕೈಗಳಲ್ಲಿಯೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೀಡಿದ್ದ ಆ ಬ್ಯಾಟ್ಗಳನ್ನು ಹಿಡಿದುಕೊಂಡಿದ್ದಾರೆ. ಸದ್ಯ ರವಿಶಾಸ್ತ್ರಿ ಅವರ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
"ನನಗೆ ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಏನು ಸಾಧಿಸುತ್ತೀರಿ ಎಂಬುದರ ಬಗ್ಗೆ ಅಲ್ಲ, ನೀವು ಏನನ್ನು ಜಯಿಸುತ್ತೀರಿ ಎಂಬುದು. ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ನೀವು ಏನು ಅನುಭವಿಸಿದ್ದೀರಿ ಎಂಬುದು (ಕೋವಿಡ್ ಅಡೆತಡೆಗಳು), ಹಾಗೂ ಕಷ್ಟಗಳನ್ನ ಎದುರಿಸಿ ನೀವು ಎಲ್ಲದರ ಮೂಲಕ ಹೋಗುತ್ತೀರಿ ಮತ್ತು ಮನಸ್ಸಿನಲ್ಲಿ ಮತ್ತಷ್ಟು ಗಟ್ಟಿಯಾಗುತ್ತೀರಿ. ಇದರ ಜೊತೆಗೆ ಉನ್ನತ ಮಟ್ಟದಲ್ಲಿ ಆಟವನ್ನು ಆಡಲು ಮತ್ತು ಸ್ಪರ್ಧಿಸಲು ಸಿದ್ಧರಾಗಿರಿ. ಇದು ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಾನು ಇಷ್ಟಪಡುವ ಅತ್ಯುತ್ತಮ ವಿಷಯ" ಎಂದು ರವಿಶಾಸ್ತ್ರಿ ತಮ್ಮ ಮಾತು ಮುಕ್ತಾಯಗೊಳಿಸಿದರು.