ಆರ್ ಅಶ್ವಿನ್ ಸೈಂಟಿಸ್ಟ್ ಎಂದ ವೀರೇಂದ್ರ ಸೆಹ್ವಾಗ್: ವೈರಲ್ ಆಯ್ತು ಟ್ವೀಟ್!

ಢಾಕಾದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಆರ್ ಅಶ್ವಿನ್ ಹಾಗೂ ಶ್ರೇಯಸ್ ಐಯ್ಯರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಈ ಮೂಲಕ ಭಾರತದ ವಿರುದ್ಧ ಟೆಸ್ಟ್ ಮಾದರಿಯಲ್ಲಿ ಚೊಚ್ಚಲ ಗೆಲುವು ಸಾಧಿಸುವ ಬಾಂಗ್ಲಾದೇಶದ ಕನಸು ಭಗ್ನಗೊಂಡಿತು. ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಗೆಲ್ಲಲು ಕೇವಲ 145 ರನ್ಗಳ ಅಗತ್ಯವಿತ್ತು. ಆದರೆ ಬಾಂಗ್ಲಾದೇಶದ ಬೌಲಿಂಗ್ ದಾಳಿಗೆ ಭಾರತದ ಅಗ್ರ ಕ್ರಮಾಂಕದ ಆಟಗಾರರು ಸಂಪೂರ್ಣ ವೈಫಲ್ಯ ಅನುಭವಿಸಿದರು.
ಮೆಹದಿ ಹಸನ್ ಈ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿ ಭಾರತ 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಮುರಿಯದ 8ನೇ ವಿಕೆಟ್ಗೆ ಜೊತೆಯಾದ ಆರ್ ಅಶ್ವಿನ್ ಹಾಗೂ ಶ್ರೇಯಸ್ ಐಯ್ಯರ ಜೋಡು ಭಾರತಕ್ಕೆ ಗೆಲುವು ಖಚಿತಪಡಿಸಿದರು. ಆರ್ ಅಶ್ವಿನ್ ಈ ಪಂದ್ಯದಲ್ಲಿ ಅಜೇಯ 42 ರನ್ ಬಾರಿಸಿದರೆ ಐಯ್ಯರ್ ಅಜೇಯ 29 ರನ್ಗಳ ಕೊಡುಗೆ ನೀಡಿದರು. ಈ ಜೋಡಿ 71 ರನ್ಗಳ ಜೊತೆಯಾಟ ನೀಡುವ ಮೂಲಕ ಭಾರತಕ್ಕೆ ಗೆಲುವು ತಂದಿತ್ತರು.
ಸೈಂಟಿಸ್ಟ್ಗೆ ಹೋಲಿಸಿ ಸೆಹ್ವಾಗ್ ಟ್ವೀಟ್
ಇನ್ನು ಈ ಪಂದ್ಯದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್ ಅಶ್ವಿನ್ ಪ್ರದರ್ಶನವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಅದರಲ್ಲೂ ಅಶ್ವಿನ್ ಬ್ಯಾಟಿಂಗ್ನಲ್ಲಿ ನೀಡಿದ ಪ್ರದರ್ಶನಕ್ಕೆ ಸೆಹ್ವಾಗ್ ಟ್ವೀಟ್ ಮೂಲಕ ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಟ್ವೀಟ್ನಲ್ಲಿ ಆರ್ ಅಶ್ವಿನ್ ಅವರನ್ನು ಸೆಹ್ವಾಗ್ ವಿಜ್ಞಾನಿಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
"ಇದು ಹೇಗೋ ಸಿಕ್ಕಿತು, ಸೈಂಟಿಸ್ಟ್ ಇದನ್ನು ಸಾಧಿಸಿ ತೋರಿಸಿದ್ದಾರೆ. ಅಶ್ವಿನ್ ಅವರಿಂದ ಚಾಣಾಕ್ಷ ಬ್ಯಾಟಿಂಗ್ ಮತ್ತು ಶ್ರೇಯಸ್ ಐಯ್ಯರ್ ಜೊತೆಗೆ ಅದ್ಭುತವಾದ ಜೊತೆಯಾಟ" ಎಂದು ಮೀಮ್ ಒಂದರ ಜೊತೆಗೆ ಟ್ವೀಟ್ ಮಾಡಿದ್ದಾರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.

ಆಘಾತ ಅನುಭವಿಸಿದ ಭಾರತ
3ನೇ ದಿನದಾಟದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 231 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಮೆಹದಿ ಹಸನ್ ಹಾಗೂ ಶಕೀಬ್ ಅಲ್ ಹಸನ್ ಆಘಾತ ನೀಡಿದರು. ಹೀಗಾಗಿ ಮೂರನೇ ದುನದಾಟದ ಅಂತ್ಯಕ್ಕೆ ಭಾರತ 45 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಭಾರತದ ಗೆಲುವಿಗೆ ಇನ್ನೂ 100 ರನ್ಗಳ ಅಗತ್ಯವಿತ್ತು. ಶಕೀಬ್ ಕೆಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದರೆ ಬಳಿಕ ಮೆಹದಿ ಹಸನ್ ಚೇತೇಶ್ವರ್ ಪೂಜಾರ, ಶುಬ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಿತ್ತು ಆಘಾತ ನೀಡಿದ್ದರು. ಅಂತಿಮವಾಗಿ ಮೆಹದಿ ಹಸನ್ ಎರಡನೇ ಇನ್ನಿಂಗ್ಸ್ನಲ್ಲಿ 63 ರನ್ಗಳಿಗೆ 5 ವಿಕೆಟ್ ಪಡೆದು ಬಾಂಗ್ಲಾದೇಶ ಪರವಾಗಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚಿದ ಆರ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ನಿರ್ಣಾಯಕ ಪ್ರದರ್ಶನ ನೀಡುವುದರ ಜೊತೆಗೆ ಒಟ್ಟು 6 ವಿಕೆಟ್ಗಳನ್ನು ಕೂಡ ಈ ಪಂದ್ಯದಲ್ಲಿ ಅಶ್ವಿನ್ ಪಡೆದುಕೊಂಡಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದು 222 ರನ್ಗಳಿಸಿ ಸರಣಿಯಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ: ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications