ಆ ಓವರ್ ಹಾರ್ದಿಕ್ ಮಾಡುತ್ತಾರೆ ಎಂದು ಭಾವಿಸಿದ್ದೆ
ಟೀಮ್ ಇಂಡಿಯಾ ತನ್ನ ಬೌಲಿಂಗ್ನಲ್ಲಿ ಮಧ್ಯಮ ಓವರ್ಗಳಲ್ಲಿ ಉತ್ತಮ ಯಶಸ್ಸು ಸಾಧಿಸಿತಾದರೂ ಡೆತ್ ಓವರ್ನಲ್ಲಿ ವೈಫಲ್ಯ ಅನುಭವಿಸಿತು. ಅದರಲ್ಲೂ ಶಿವಂ ಮಾವಿ ಎಸೆದ 20ನೇ ಓವರ್ನಲ್ಲಿ 20 ರನ್ ಬಿಟ್ಟುಕೊಟ್ಟರು. ಹೀಗಾಗಿ ಟೀಮ್ ಇಂಡಿಯಾ 207 ರನ್ಗಳ ಗುರಿ ಪಡೆದುಕೊಂಡಿತ್ತು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಟೀಮ್ ಇಂಡಿಯಾದ ಬೌಲಿಂಗ್ನಲ್ಲಿ 20 ಓವರರನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರೇ ಮಾಡುತ್ತಾರೆ ಎಂದು ಭಾವಿಸಿದ್ದೆ ಎಂದಿದ್ದಾರೆ.
ಹಾರ್ದಿಕ್ಗೆ ಅನುಭವವಿತ್ತು
"20ನೇ ಓವರನ್ನು ಶಿವಂ ಮಾವಿ ಬದಲಿಗೆ ಹಾರ್ದಿಕ್ ಪಾಂಡ್ಯ ಮಾಡಬಹುದು ಎಂದು ನಾನು ಲೆಕ್ಕಾಚಾರ ಮಾಡಿದ್ದೆ. ಡೆತ್ ಓವರ್ ಬೌಲಿಂಗ್ನಲ್ಲಿ ಮಾವಿ ಹೆಚ್ಚಿನ ಯಶಸ್ಸು ಸಾಧಿಸಿಲ್ಲ. ಆದರೆ ಹಾರ್ದಿಕ್ಗೆ ಅನುಭವವಿದೆ. ಹಾಗಾಗಿ ಅವರೇ 20ನೇ ಓವರ್ ಬೌಲಿಂಗ್ ಮಾಡಬಹುದು ಎಂದು ನಾನು ಭಾವಿಸಿದ್ದೆ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್. ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪವರ್ಪ್ಲೇನಲ್ಲಿ ಎರಡು ಓವರ್ಗಳ ಬೌಲಿಂಗ್ ಮಾತ್ರವೇ ನಡೆಸಿ ಕೇವಲ 13 ರನ್ ಮಾತ್ರವೇ ನೀಡಿದ್ದರು.
ಅರ್ಶ್ದೀಪ್ ಮಾಡಿದ್ದು ಒಪ್ಪಿಕೊಳ್ಳಲು ಸಾಧ್ಯವಿಲ್ಲ!
ಇನ್ನು ಶಿವಂ ಮಾವಿಗೆ ಹೊಸ ಚೆಂಡು ನೀಡದ ಬಗ್ಗೆಯೂ ಜಾಫರ್ ಮಾತನಾಡಿದ್ದಾರೆ. "ಮೊದಲ ಪಂದ್ಯದಲ್ಲಿ ಶಿವಂ ಮಾವಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಮತ್ತೆ ಅವರಿಗೆ ಯಾಕೆ ಹೊಸ ಚೆಂಡು ನೀಡಲಿಲ್ಲ? ಅರ್ಶ್ದೀಪ್ಗೆ ಮೂರು ಅಥವಾ ನಾಲ್ಕನೇ ಓವರ್ ನೀಡಬಹುದಾಗಿತ್ತು. ಹಾಗಿದ್ದರೂ ಅರ್ಶ್ದೀಪ್ ಮಾಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಶಿವಂ ಮಾವಿ ಮೇಲೆ ನಾಯಕ ಹಾರ್ದಿಕ್ ಪಾಂಡ್ಯ ನಂಬಿಕೆಯಿರಬಹುದಾಗಿತ್ತು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.
ಸರಣಿ ಸಮಬಲಗೊಳಿಸಿದ ಲಂಕಾ
ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲಿಗೆ ಅಬ್ಬರದ ಬ್ಯಾಟಿಂಗ್ ನಡೆಸಿ 206 ರನ್ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆರಂಭದಲ್ಲಿಯೇ ಭಾರೀ ಕುಸಿತ ಕಂಡಿತು. ಒಂದು ಹಂತದಲ್ಲಿ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಜೋಡಿ ಆಸರೆಯಾದರು. ತಲಾ ಅರ್ಧ ಶತಕ ಬಾರಿಸಿದ ಸೂರ್ಯಕುಮಾರ್ ಹಾಗೂ ಅಕ್ಷರ್ ಪಟೇಲ್ ಕೊನೆಯ ಕ್ಷಣದವರೆಗೂ ಹೋರಾಡಿದರು. ಸೂರ್ಯಕುಮಾರ್ ವಿಕೆಟ್ ಕಳೆದುಕೊಂಡ ಬಳಿಕ ಶಿವಂ ಮಾವಿ ಜೊತೆಗೂಡಿ ಅಕ್ಷರ್ ಪಟೇಲ್ ಗೆಲುವಿನ ಆಸೆ ಜೀವಂತವಾಗಿಸಿದರಾದರೂ ಅಂತಿಮವಾಗಿ ಟೀಮ್ ಇಂಡಿಯಾ 16 ರನ್ಗಳ ಸೋಲು ಅನುಭವಿಸಿದೆ. ಈ ಮೂಲಕ ಶ್ರೀಲಂಕಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.