ನವೆಂಬರ್ 24ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ ನಡೆಯುತ್ತಿರುವ ಅಭ್ಯಾಸದ ವೇಳೆ ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರಾಗೆ ಬೌಲಿಂಗ್ ಮಾಡಿದ್ದರೆ, ಮತ್ತೊಂದೆಡೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂ ಎಸ್ ಧೋನಿ ಅವರನ್ನು ರಿಟೈನ್ ಮಾಡಿಕೊಂಡಿದೆ. ಹೀಗೆ ನವೆಂಬರ್ 24ರ ಪ್ರಮುಖ ಕ್ರಿಕೆಟ್ ಸುದ್ದಿಗಳು ಈ ಕೆಳಕಂಡಂತಿವೆ..
* ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತೊಡೆಯ ನೋವಿನಿಂದ ಬಳಲುತ್ತಿರುವ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಕೆಎಲ್ ರಾಹುಲ್ ಆಡುತ್ತಿದ್ದ ಆರಂಭಿಕ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವ ವಿಷಯದ ಕುರಿತು ಚರ್ಚೆಗಳು ಜೋರಾಗಿದ್ದವು. ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ "ಕೆ ಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದದ್ದು ನಿಜಕ್ಕೂ ದೊಡ್ಡ ಆಘಾತ. ಆತ ಉತ್ತಮ ಫಾರ್ಮ್ನಲ್ಲಿದ್ದ, ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ, ಖಂಡಿತವಾಗಿಯೂ ನಾವು ಆತನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಕೆಎಲ್ ರಾಹುಲ್ ಸ್ಥಾನವನ್ನು ತುಂಬಬಲ್ಲ ಆಟಗಾರರು ತಂಡದಲ್ಲಿದ್ದಾರೆ. ಈ ಹಿಂದೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಸ್ಥಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
* ಐಪಿಎಲ್ನ ಮಹಾ ಹರಾಜಿಗೆ ಸಿದ್ಧತೆಗಳು ಭರದಿಂದ ಸಾಗಿದೆ. ಈ ಮಧ್ಯೆ ಎಲ್ಲಾ ತಂಡಗಳು ಕೂಡ ಮುಂದಿನ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳಬೇಕಾದ ಆಟಗಾರರು ಯಾರು ಎಂಬ ಬಗ್ಗೆ ಲೆಕ್ಕಾಚಾರಗಳನ್ನು ಮಾಡಿಕೊಳ್ಳುತ್ತಿದೆ.. ಭವಿಷ್ಯದ ಆವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿದೆ. ವರದಿಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಮೂರು ಐಪಿಎಲ್ ಆವೃತ್ತಿಗೆ ಎಂಎಸ್ ಧೋನಿಯನ್ನು ರೀಟೈನ್ ಮಾಡಿಕೊಳ್ಳಲಿದೆ. ಎಂಎಸ್ ಧೋನಿಯನ್ನು ಹೊರತುಪಡಿಸಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಮುಂದುವರಿಯಲಿದ್ದಾರೆ
* ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದದ್ದು ಇದೀಗ ಟಿಟ್ವೆಂಟಿ ಶ್ರೇಯಾಂಕದಲ್ಲಿ ಪರಿಣಾಮವನ್ನು ಬೀರಿದೆ. ಐಸಿಸಿ ಕಳೆದ ಬಾರಿ ಪ್ರಕಟಿಸಿದ್ದ ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸದೇ ಇದ್ದುದರ ಕಾರಣದಿಂದಾಗಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಕಳೆದ 18 ತಿಂಗಳುಗಳ ಕಾಲ ಸತತವಾಗಿ ಟಿಟ್ವೆಂಟಿ ಅತ್ಯುತ್ತಮ ಬ್ಯಾಟ್ಸ್ಮನ್ ಶ್ರೇಯಾಂಕ ಪಟ್ಟಿಯ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದ ಕೊಹ್ಲಿ ಇದೇ ಮೊದಲ ಬಾರಿಗೆ ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ.
* ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ ಮತ್ತು ಫಾಫ್ ಡು ಪ್ಲೆಸಿಸ್ ಈ 4 ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದ್ದು, ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದು ಶ್ರಮಿಸಿರುವ ಸುರೇಶ್ ರೈನಾರನ್ನು ಈ ಬಾರಿಯ ಮೆಗಾ ಹರಾಜಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಈ ಮೂಲಕ ಸುರೇಶ್ ರೈನಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೇರೆ ತಂಡವೊಂದರ ಪರ ಕಣಕ್ಕಿಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
{document1}