ಜೈಪುರದಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಕಿವೀಸ್ ಪರ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದ ರಚಿನ್ ರವೀಂದ್ರ ಎಲ್ಲರ ಗಮನಸೆಳೆದಿದ್ದು ಸುಳ್ಳಲ್ಲ. ಆತ ಮೈದಾನಕ್ಕೆ ಕಾಲಿಡುತ್ತಿದ್ದಂತೆ, ಕ್ರಿಕೆಟ್ ಪ್ರೇಮಿಗಳು ಯಾರೀತ ಎಂದು ತಿಳಿದುಕೊಳ್ಳಲು ಗೂಗಲ್ ಸಹಾಯಕ್ಕೆ ಮುಂದಾಗಿದ್ರು.
ಭಾರತೀಯ ಮೂಲದ ಪೋಷಕರಾದ ರವಿ ಕೃಷ್ಣಮೂರ್ತಿ ಮತ್ತು ದೀಪಾ ಕೃಷ್ಣಮೂರ್ತಿಯ ಮಗನೇ ಈ ರಚಿನ್ ರವೀಂದ್ರ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈತನ ಆರಾಧ್ಯ ದೈವ. ನ್ಯೂಜಿಲೆಂಡ್ ಪರ ಭಾರತೀಯ ಮೂಲದ ಆಟಗಾರನೊಬ್ಬ ಆಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಇಶ್ ಸೋಧಿ, ಜೀತನ್ ಪಟೇಲ್, ಜೀತ್ ರಾವಲ್ ಮುಂತಾದವರು ನ್ಯೂಜಿಲೆಂಡ್ ಕ್ಯಾಪ್ ತೊಟ್ಟಿದ್ದಾರೆ.
ಭಾರತ ವಿರುದ್ಧದ ಮೂರು ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರುವ ರಚಿನ್ ರವೀಂದ್ರ ಜೈಪುರದ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಯುವಲ್ಲಿ ಯಶಸ್ವಿಯಾಗಿದ್ರು.
ಕೊಹ್ಲಿ ಅನುಪಸ್ಥಿತಿಯಲ್ಲಿ ವಿರಾಟ ರೂಪ ಪ್ರದರ್ಶಿಸಿದ ಸೂರ್ಯಕುಮಾರ್: 3ನೇ ಕ್ರಮಾಂಕಕ್ಕೆ ಎದುರಾಯ್ತು ಕಠಿಣ ಸ್ಪರ್ಧೆ!
ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿರುವ ರಚಿನ್ಗೆ ಪಿಚ್ನಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿಲ್ಲ. ಆಡಿದ 8 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ರು. ಆದಾಗೂ ಆತನ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಅಭಿಮಾನಿಗಳು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ.
21 ವರ್ಷ ವಯಸ್ಸಿನ ರಚಿನ್ , ಇಬ್ಬರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಹೆಸರನ್ನು ಸೇರಿಸಿ 'ರಚಿನ್' ಎಂದು ಹೆಸರಿಡಲಾಗಿದೆ. ಭಾರತೀಯ ಪೋಷಕರಿಗೆ ವೆಲ್ಲಿಂಗ್ಟನ್ನಲ್ಲಿ ಜನಿಸಿದ ರಚಿನ್ ಚಳಿಗಾಲದ ಸೀಸನ್ನಲ್ಲಿ ಭಾರತದಲ್ಲಿ ಅಭ್ಯಾಸ ಕೂಡ ನಡೆಸಿದ್ದಾರೆ.
ರಚಿನ್ ತಂದೆ ರವಿ ಕೃಷ್ಣಮೂರ್ತಿ ಅವರು ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿದ್ದು ಮೊದಲು ನಮ್ಮ ಬೆಂಗಳೂರಿನಲ್ಲೇ ನೆಲಸಿದ್ರು. 1990ರಲ್ಲಿ ಮದುವೆಯಾದ ಬಳಿಕ ಅವರು ನ್ಯೂಜಿಲೆಂಡ್ಗೆ ತೆರಳಿದ್ರು ಮತ್ತು ಹಟ್ ಹಾಕ್ಸ್ ಕ್ಲಬ್ನ ಸಂಸ್ಥಾಪಕರಾಗಿದ್ದರು. ವಾಸ್ತವವಾಗಿ, ರವಿ ಅವರು ಕ್ರಿಕೆಟ್ನ ಅಚ್ಚುಮೆಚ್ಚಿನ ಅಭಿಮಾನಿಯಾಗಿದ್ದಾರೆ ಮತ್ತು ಬೆಂಗಳೂರಿನಲ್ಲಿ ಕ್ರಿಕೆಟ್ ಆಡಿದ್ದಾರೆ.
ತನ್ನ ಮಗನ ಕುರಿತು ಮಾತನಾಡಿರುವ ರವಿ, ರಚಿನ್ 2016 ರ ಅಂಡರ್ -19 ವಿಶ್ವಕಪ್ ಮತ್ತು 2018 ರ ಅಂಡರ್ -19 ಕ್ರಿಕೆಟ್ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಅವರು ಕಿವೀಸ್ಗಾಗಿ ಒಟ್ಟು 6 ಟಿ20 ಪಂದ್ಯಗಳನ್ನು ಆಡಿದ್ದಾರೆ, ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು.
ಇದೇ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ತಂಡದಲ್ಲಿ ಸೆಲೆಕ್ಟ್ ಆಗಿದ್ದ ರಚಿನ್ , ಟೀಮ್ ಇಂಡಿಯಾ ವಿರುದ್ಧ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡ್ರು.
'' ನಾನು ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಚಳಿಗಾಲದ ಸೀಸನ್ನಲ್ಲಿ ಭಾರತಕ್ಕೆ ಆಗಮಿಸಿ ಪ್ರತಿ ವರ್ಷ ಆರ್ಡಿಟಿ (ಅನಂತಪುರ, ಆಂಧ್ರಪ್ರದೇಶ) ನಲ್ಲಿ ತರಬೇತಿ ಪಡೆದಿದ್ದೇನೆ," ಎಂದು ಅವರು ತೆಲಂಗಾಣ ಟುಡೆಗೆ ತಿಳಿಸಿದ್ದಾರೆ.
ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್ ಕೂಡ ಕಿವೀಸ್ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
''ಆತ (ರಚಿನ್ ರವೀಂದ್ರ) ಕಳೆದ ನಾಲ್ಕು ವರ್ಷಗಳಿಂದ ಅನಂತಪುರದ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನಲ್ಲಿ ತರಬೇತಿ ಪಡೆಯುತ್ತಿದ್ದ ಹಟ್ ಹಾಕ್ಸ್ ತಂಡದ ಭಾಗವಾಗಿದ್ದರು. ಅವರೊಬ್ಬ ಭರವಸೆಯ ಕ್ರಿಕೆಟಿಗ. ಯುವ ಕ್ರಿಕೆಟಿಗನಾಗಿ, ಅವರು ಎಡಗೈ ಬ್ಯಾಟ್ ಮತ್ತು ಎಡಗೈ ಸ್ಪಿನ್ನರ್ ಆಗಿ ಮಿಂಚುವ ಭರವಸೆ ಮತ್ತು ಹಸಿವನ್ನು ತೋರಿಸಿದ್ದಾರೆ'' ಎಂದು ಕೋಚ್ ಖತೀಬ್ ಸೈಯದ್ ತಿಳಿಸಿದ್ದಾರೆ.
ರಚಿನ್ ರವೀಂದ್ರ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ತನ್ನ ಪ್ರೀತಿಯ ಐಡಲ್ ಕುರಿತು ಮಾತನಾಡಿರುವ ರಚಿನ್ '' ನನ್ನ ಬ್ಯಾಟಿಂಗ್ ಆರಾಧ್ಯ ಸಚಿನ್ ತೆಂಡೂಲ್ಕರ್. ನಾನು ಚಿಕ್ಕವಯಸ್ಸಿನಿಂದಲೂ ನನ್ನ ಆಟವನ್ನು ಅವರ ಮೇಲೆಯೇ ರೂಪಿಸಿಕೊಂಡಿದ್ದೇನೆ'' ಎಂದು ರಚಿನ್ ಹೇಳಿದ್ದಾರೆ.
ಸಚಿನ್ ಬ್ಯಾಟಿಂಗ್ ಶೈಲಿಯನ್ನು ಅನುಕರಿಸಲು ಪ್ರಯತ್ನಿಸಿರುವ ರಚಿನ್ ಇದೇ ವರ್ಷ ಸೆಪ್ಟೆಂಬರ್ 0, 2021ರಂದು ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯಗಳನ್ನಾಡಿದ್ದಾರೆ. ಇದುವರೆಗೂ ಆರು ಅಂತರರಾಷ್ಟ್ರೀಯ ಟಿ20 ಪಂದ್ಯಗಳು ಸೇರಿದಂತೆ ಒಟ್ಟು 28 ಟಿ20 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. 345 ರನ್ಗಳ ಜೊತೆಗೆ 25 ವಿಕೆಟ್ ಕಬಳಿಸಿದ್ದಾರೆ. ಇನ್ನಿಂಗ್ಸ್ವೊಂದರಲ್ಲಿ ಗರಿಷ್ಠ 40ರನ್ ಇವರ ಬ್ಯಾಟ್ನಿಂದ ಸಿಡಿದಿದೆ.