ಕೊನೆಯ ಕ್ಷಣದ ಬದಲಾವಣೆ ಬಯಸಿದ ಗವಾಸ್ಕರ್
ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಭಾರೀ ಮಳೆಯಾಗಿರುವ ಕಾರಣದಿಂದಾಗಿ ಟೀಮ್ ಇಂಡಿಯಾ ಇಬ್ಬರು ಸ್ಪಿನ್ ಬೌಲರ್ಗಳೊಂದಿಗೆ ಕಣಕ್ಕಿಳಿಯುವ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇಬ್ಬರು ಸ್ಪಿನ್ನರ್ಗಳಲ್ಲಿ ಒಬ್ಬರ ಸ್ಥಾನದ ಬದಲಿಗೆ ಓರ್ವ ಬ್ಯಾಟ್ಸ್ಮನ್ನನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.
"ಟಾಸ್ ನಡೆಯುವವರೆಗೆ ಬದಲಾವಣೆಗೆ ಅವಕಾಶವಿದೆ"
"ಅವರು ತಮ್ಮ ತಂಡವನ್ನು ನಿನ್ನೆ ಘೋಷಣೆ ಮಾಡಿರಬಹುದು. ಆದರೆ ನಾಯಕರಿಬ್ಬರು ಟಾಸ್ ಸಂದರ್ಭದಲ್ಲಿ ಆಡುವ ಬಳಗದ ಪಟ್ಟಿಯನ್ನು ಹಂಚಿಕೊಳ್ಳುವವರೆಗೆ ಯಾವುದು ಕೂಡ ಅಂತಿಮವಲ್ಲ. ಹೀಗಾಗಿ ಕಡೇಯ ಕ್ಷಣದಲ್ಲಿಯೂ ನೀವು ತಂಡವನ್ನು ಬದಲಾವಣೆ ಮಾಡುವ ಅವಕಾಶವಿರುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.
ಕುತೂಹಲಕಾರಿ ಸಂಗತಿ ಬಹಿರಂಗಪಡಿಸಿದ ಗವಾಸ್ಕರ್
ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. "ನಾಯಕನಾಗಿದ್ದ ಸಂದರ್ಭದಲ್ಲಿ ನಾನು ಕೂಡ ಸ್ಪಿನ್ನರ್ನನ್ನು ಆಡಿಸಬೇಕೋ ಅಥವಾ ಹೆಚ್ಚುವರಿ ಬ್ಯಾಟ್ಸ್ಮನ್ನನ್ನು ಕಣಕ್ಕಿಳಿಸಬೇಕೋ ಎಂದು ಗೊಂದಲಗೊಳಗಾಗುತ್ತಿದ್ದೆ. ಆಗ ನಾನು ಟಾಸ್ಗೆ ಕೆಲ ಕ್ಷಣಗಳ ಮುನ್ನ ಎದುರಾಳಿಯ ಆಡುವ ಬಳಗವನ್ನು ನೋಡಿಕೊಂಡು ನನ್ನ ಕಾಗದದಲ್ಲಿ ತಿದ್ದಿ ಬದಲಾವಣೆ ಮಾಡಿಕೊಂಡು ನೀಡುತ್ತಿದ್ದೆ. ಆಡುವ ಬಳಗವನ್ನು ಟಾಸ್ಗಿಂತ ಮುನ್ನ ಯಾವ ಕ್ಷಣದಲ್ಲಿಯೂ ನೀವು ಬದಲಾವಣೆ ಮಾಡಿಕೊಳ್ಳಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ನ್ಯೂಜಿಲೆಂಡ್ ಬೌಲರ್ಗಳಿಗೆ ಹೆಚ್ಚು ಅನುಕೂಲ
"ನನಗನಿಸುತ್ತದೆ ಹವಾಮಾನದ ಕಾರಣದಿಂದಾಗಿ ಮತ್ತೋರ್ವ ಬ್ಯಾಟ್ಸ್ಮನ್ನನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಬಹುದು ಎನಿಸುತ್ತದೆ. ಯಾಕೆಂದರೆ ಈ ವಾತಾವರಣ ನ್ಯೂಜಿಲೆಂಡ್ ತಂಡದ ಬೌಲರ್ಗಳಿಗೆ ಹೆಚ್ಚು ಸೂಕ್ತವಾಗಿದೆ. ಹೀಗಾಗಿ ಆರನೇ ಕ್ರಮಾಂಕದಲ್ಲಿ ಇಳಿಯುವ ರಿಷಭ್ ಪಂತ್ ಏಳನೇ ಕ್ರಮಾಂಕಕ್ಕೆ ಇಳಿಸಿ ಹೆಚ್ಚುವರಿ ಬ್ಯಾಟ್ಸ್ಮನ್ ಇಳಿಯುವುದು ಸೂಕ್ತ. ಈ ಹವಾಮಾನವನ್ನು ನೋಡುತ್ತಿದ್ದರೆ ಓರ್ವ ಸ್ಪಿನ್ನರ್ನನ್ನು ಕೈಬಿಡಬಹುದು" ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.