
ನವದೆಹಲಿ, ನವೆಂಬರ್ 5: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಆಯ್ಕೆದಾರರ ಅಗತ್ಯ ಖಂಡಿತಾ ಇದೆ ಎಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಹೇಳಿದ್ದಾರೆ. ಮುಂಬರಲಿರುವ ಅಬುಧಾಬಿ ಟಿ20 ಲೀಗ್ ಪ್ರಚಾರ ಕಾರ್ಯಕ್ರಮಕ್ಕಾಗಿ ಬಂದಿದ್ದ ಯುವಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಮಾರು 4 ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಕೆಚ್ಚೆದೆಯ ಮಹಾರಾಜ ಯುವಿಗೆ ಭಾರತದ ಆಯ್ಕೆ ಸಮಿತಿ ಬಗ್ಗೆ ಸಹಜವಾಗೇ ಬೇಸರವಿದೆ. ನಾಯಕ ವಿರಾಟ್ ಕೊಹ್ಲಿ ಬಗೆಗಿನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯುವಿ, 'ಇದನ್ನುನಿಮ್ಮ ಶ್ರೇಷ್ಠ ಆಯ್ಕೆದಾರರಲ್ಲಿ ಕೇಳಿ' ಎಂದು ಧೋನಿ ಭವಿಷ್ಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
'ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡೋದು ಸವಾಲಿನ ಕೆಲಸ. ಆದರೆ ಈಗಿನ ಆಧುನಿಕ ಕ್ರಿಕೆಟನ್ನು ಗಣನೆಗೆ ತೆಗೆದುಕೊಂಡರೆ ಅವರ (ಆಯ್ಕೆದಾರರ) ಆಲೋಚನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ನಾನು ಯಾವತ್ತಿಗೂ ಆಟಗಾರರನ್ನು ರಕ್ಷಣೆ ಮತ್ತು ಅವರನ್ನು ಸಕಾರಾತ್ಮಕವಾಗಿರಿಸುವುದರ ಪರವಾಗಿದ್ದೇನೆ,' ಎಂದು ಯುವಿ ಹೇಳಿದ್ದಾರೆ.
'ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಈಗಿನಿಂದಲೇ ತಯಾರಿ ಶುರುವಾಗಬೇಕು. ವಿಶ್ವಕಪ್ಗಿನ್ನು 4 ತಿಂಗಳು ಇರುವಾಗಲೇ ನೀವು ನಿಮ್ಮ ತಂಡವನ್ನು ನಿರ್ಧರಿಸಬೇಕು. ನಿಮ್ಮ 20 ಜನರ ತಂಡದಲ್ಲಿ ಆರಿಸಬೇಕಾದ 16 ಮಂದಿ ಯಾರೆಂಬುದನ್ನು ನಿರ್ಧರಿಸಬೇಕು. ವಿಶ್ವಕಪ್ ಒಂದು ಗಂಭೀರ ಟೂರ್ನಿ. ಕೊನೇ ಗಳಿಗೆಯಲ್ಲಿ ತಂಡದ ಆಟಗಾರರ ಬದಲಾವಣೆ ಸಾಧ್ಯವಿಲ್ಲ,' ಎಂದು ಸಿಂಗ್ ನುಡಿದರು.