
ಅದ್ಮದಾಬಾದ್: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 30) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 34 ರನ್ ಸೋಲನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣ ಪಂಜಾಬ್ನ ಸ್ಪಿನ್ನರ್ ಹರ್ಪ್ರೀತ್ ಬ್ರಾರ್.
ಶುಕ್ರವಾರದ ಪಂದ್ಯದಲ್ಲಿ 14ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಪಂದ್ಯ ಆಡಿದ್ದ ಎಡಗೈ ಆರ್ಥೋಡಾಕ್ಸ್ ಬೌಲರ್ ಹರ್ಪ್ರೀತ್ ಬ್ರಾರ್, ಆರ್ಸಿಬಿ ಪ್ರಮುಖ ವಿಕೆಟ್ಗಳನ್ನು ಕೆಡವಿ ಪಂಜಾಬ್ಗೆ ಗೆಲುವಿಗೆ ಕಾರಣರಾಗಿದ್ದರು. ವಿರಾಟ್ ಕೊಹ್ಲಿ (35 ರನ್), ಗ್ಲೆನ್ ಮ್ಯಾಕ್ಸ್ವೆಲ್ (0), ಎಬಿ ಡಿ ವಿಲಿಯರ್ಸ್ (3) ವಿಕೆಟ್ಗಳು ಬ್ರಾರ್ಗೆ ಲಭಿಸಿತ್ತು.
ಬ್ರಾರ್ ವೀರೋಚಿತ ಪ್ರದರ್ಶನ ಮೆಚ್ಚಿ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. 'ಹರ್ಪ್ರೀತ್ ಬ್ರಾರ್ ಪ್ರದರ್ಶನಕ್ಕೆ ಖುಷಿಯಾಗಿದೆ. ಗುಣಮಟ್ಟದ ಬ್ಯಾಟ್ಸ್ಮನ್ಗಳ ವಿಕೆಟ್ ಪಡೆಯೋದು ಮತ್ತು ಪಂದ್ಯದ ಕೊನೆಯಲ್ಲಿ ಅಗತ್ಯ ರನ್ ಕೊಡುಗೆ ನೀಡಿದ್ದು ಖುಷಿಯಾಗಿದೆ' ಎಂದು ಯುವಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಟ್ವೀಟ್ನ ಮುಂದಿನ ಸಾಲುಗಳಲ್ಲಿ, 'ರಾಜ್ಯ ಕ್ರಿಕೆಟ್ನ ವಿಚಾರಕ್ಕೆ ಬಂದಾಗ ನಿನ್ನ ಮೇಲಿನ ಟೀಕೆಗಳಿಗೆ ಉತ್ತರಿಸಲು ಉತ್ತಮ ವಿಧಾನವಿದು. ಮ್ಯಾಚ್ ವಿನ್ನರ್ ಆಟಗಾರನ ನೀಡಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್, ಹರ್ಭಜನ್ ಸಿಂಗ್ ಒಳ್ಳೆಯ ಕೆಲಸ ಮಾಡಿದಿರಿ,' ಎಂದು ಬರೆದುಕೊಳ್ಳಲಾಗಿದೆ. ಅಂದ್ಹಾಗೆ ಪಂಜಾಬ್ ಇನ್ನಿಂಗ್ಸ್ನಲ್ಲಿ ಬ್ರಾರ್ ಅಜೇಯ 25 ರನ್ (17 ಎಸೆತ) ಕೊಡುಗೆ ಕೂಡ ನೀಡಿದ್ದರು.