ಅಮಾನ್, ನವೆಂಬರ್ 17: ಜೋರ್ಡನ್-ಭಾರತ ನಡುವೆ ಇಂದು ರಾತ್ರಿ ನಡೆಯಬೇಕಿದ್ದ ಸೌಹಾರ್ದ ಫುಟ್ಬಾಲ್ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಪಂದ್ಯ ರದ್ದಾದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.
ಅರಬ್ ದೇಶಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ವಿಮಾನಗಳು ವಿಳಂಬವಾಗಿರುವ ಕಾರಣ ಆಟಗಾರರು ಸರಿಯಾದ ಸಮಯಕ್ಕೆ ಜೋರ್ಡನ್ ತಲುಪುವಲ್ಲಿ ವಿಫಲರಾಗಿದ್ದಾರೆ ಹಾಗಾಗಿ ಪಂದ್ಯವನ್ನು ರದ್ದು ಮಾಡುವ ಸಾಧ್ಯತೆ ಇದೆ.
ಏಷ್ಯಾ ಕಪ್ ಫುಟ್ಬಾಲ್ಗೆ ತಯಾರಿ ನಡೆಸಲು ಈ ಪಂದ್ಯ ಭಾರತಕ್ಕೆ ಬಹುವೇ ಮಹತ್ವದ್ದಾಗಿತ್ತು. ಆದರೆ ಈಗ ಪಂದ್ಯ ರದ್ದಾಗುವ ಹಂತಕ್ಕೆ ಬಂದಿರುವುದು ಭಾರತ ಫುಟ್ಬಾಲ್ ತಂಡಕ್ಕೆ ನಷ್ಟವಾಗಲಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ವಾಯು ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ ಹಾಗಾಗಿ ಭಾರತದ ಆಟಗಾರರು ಸರಿಯಾದ ಸಮಯಕ್ಕೆ ಜೋರ್ಡನ್ನ ಕ್ರೀಡಾಂಗಣ ತಲುಪುವುದು ಅಸಾಧ್ಯ ಎನ್ನಲಾಗುತ್ತಿದೆ.
15 ಮಂದಿ ತಂಡದ ಸದಸ್ಯರು ನವೆಂಬರ್ 15 ರಂದೇ ಜೋರ್ಡನ್ ತಲುಪಿದ್ದಾರೆ. ಜೋರ್ಡನ್ ಕಡೆ ಹೊರಟಿದ್ದ 7 ಸದಸ್ಯರ ಮತ್ತೊಂದು ತಂಡ ಇದ್ದ ವಿಮಾನ ಕೆಟ್ಟ ಹವಾಮಾನದ ಪರಿಣಾಮ ಕುವೈತ್ಗೆ ತಿರುಗಿನಸಲಾಗಿದ್ದು, ಈಗ ಏಳು ಜನ ಸದಸ್ಯರು ಕುವೈತ್ ವಿಮಾನ ನಿಲ್ದಾಣದಲ್ಲಿ ಇದ್ದಾರೆ. ಕಳೆದ ಹತ್ತು ಗಂಟೆಯಿಂದಲೂ ಅವರು ಅಲ್ಲೇ ಕಾಲಕಳೆಯುತ್ತಿದ್ದಾರೆ.
ಏಷ್ಯಾ ಫುಟ್ಬಾಲ್ ಕಪ್ ಪಂದ್ಯಾವಳಿಯು ಯುಎಇಯಲ್ಲಿ ಜನವರಿ 5 ರಿಂದ ಪ್ರಾರಂಭವಾಗಲಿದೆ. ಎಂಟು ವರ್ಷದ ನಂತರ ಭಾರತವು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಭಾರತದ ಪಂದ್ಯವು ಜನವರಿ 6 ರಂದು ಥಾಯ್ಲೆಂಡ್ ವಿರುದ್ಧ ಇದೆ. ಪಂದ್ಯಾವಳಿಯು ಫೆಬ್ರವರಿ 1 ಕ್ಕೆ ಮುಕ್ತಾಯಗೊಳ್ಳಲಿದೆ.