ಪ್ರೊ ಕಬಡ್ಡಿ ಲೀಗ್ನ 9ನೇ ಆವೃತ್ತಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರೊ ಕಬಡ್ಡಿ ಒತೊಹಾಸದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದಂತಾಗಿದೆ. ಶನಿವಾರ ನಡೆದ ಪುಣೆರಿ ಪಲ್ತಾನ್ ವಿರುದ್ಧದ ಪಂದ್ಯದಲ್ಲಿ ರೋಚಕ ಸೆಣೆಸಾಟದಲ್ಲಿ 33-29 ಅಂಕಗಳ ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಗೆದ್ದುಬೀಗಿದೆ.
ಮುಂಬೈನ ಎನ್ಎಸ್ಸಿಐ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ರೋಚಕ ಕಾದಾಟ ನಡೆಸಿದವು. ಆದರೆ ಅಂತಿಮವಾಗಿ ಸುನಿಲ್ ಕುಮಾರ್ ನೇತೃತ್ವದ ಜೈಪುರ್ ತಂಡ ಈ ಪ್ರತಿಷ್ಠಿತ ಪ್ರಶ್ಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಬಾರಿಯ ಟೂರ್ನಿಯ ಆರಂಭಿಕ ಹಂತದಂದಲೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಅದ್ಭುತ ಆಟವನ್ನು ಪ್ರದರ್ಶಿಸುತ್ತಲೇ ಬಂದಿತ್ತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ವಿಉಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿತು. ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದ ಪ್ಯಾಂಥರ್ಸ್ ಸೆಮಿಫೈನಲ್ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿತ್ತು. ಈ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು.
ಇನ್ನು ಟೂರ್ನಿಯಲ್ಲಿ ಅದ್ಭುತ ಫಾರ್ಮ್ನಲ್ಲಿದ್ದ ಅರ್ಜುನ್ ದೇಶ್ವಾಲ್ ಜೈಪುರ್ ತಂಡದ ಯಶಸ್ಸಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಈ ಆವೃತ್ತಿಯಲ್ಲಿ 290 ರೈಡ್ ಅಂಕಗಳನ್ನು ಪಡೆದುಕೊಂಡ ಅವರು ರೈಡಿಂಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಅವರಿಗೆ ಅಜಿತ್ ಕುಮಾರ್ ಹಾಗೂ ರಾಹುಲ್ ಚೌಧರಿ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ರಕ್ಷಣಾ ವಿಭಾಗದಲ್ಲಿ ಅಂಕುಶ್ ಒಟ್ಟಾರೆಯಾಗಿ ಈ ಟೂರ್ನಿಯಲ್ಲಿ 86 ಟ್ಯಾಕಲ್ ಅಂಕಗಳನ್ನು ಗಳಿಸಿದರೆ ಸುನಿಲ್ ಕುಮಾರ್ 59 ಟ್ಯಾಕಲ್ ಅಂಕ ಪಡೆದುಕೊಂಡು ಸಾತ್ ನೀಡಿದರು. ಇದು ಟೂರ್ನಿಯಲ್ಲಿ ಜೈಫುರ್ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಸಾಧಿಸಲು ಕಾರಣವಾಗಿದೆ.