
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕರ್ನಾಟಕದ ವೇಟ್ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. ಈ ಮೂಲಕ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎನಿಸಿದ್ದಾರೆ ಗುರುರಾಜ್. ಕನ್ನಡಿಗನ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು ಟ್ವೀಟ್ ಮೂಲಕ ಗುರುರಾಜ್ ಪೂಜಾರಿ ಅವರ ಪರಿಶ್ರಮವನ್ನು ಕೊಂಡಾಡಿದ್ದಾರೆ.
ಗುರುರಾಜ್ ಪೂಜಾರಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ 2ನೇ ದಿನದಂದು ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ. ಸಂಕೇತ್ ಸರ್ಗರ್ 55 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಭಾರತ ಎರಡನೇ ಪದಕ ಇದಾಗಿದೆ. ಸರ್ಗಾರ್ ಒಟ್ಟು 248 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗುರುರಾಜ್ ಅವರ ಸತತ ಎರಡನೇ ಪದಕ ಎಂಬುದು ಗಮನಾರ್ಹ ಅಂಶ. 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗುರುರಾಜ್ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಬಾರಿಯ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಗುರುರಾಜ್ಗೆ ಅಬಿನಂದನೆ ಸಲ್ಲಿಸಿದ ಪ್ರಧಾನಿ: ಇನ್ನು ಕನ್ನಡಿಗ ಗುರುರಾಜ್ ಪೂಜಾರಿ ಅವರ ಸಾಧನೆಗೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋಡಿ ಕುಡ ಗುರುರಾಜ್ ಸಾಧನೆಗೆ ಶ್ಲಾಘನೆ ವ್ಯಕ್ತೊಡಿಸಿದ್ದು ಪರಿಶ್ರಮದ ಬಗ್ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟ್ವೀಟ್ನಲ್ಲಿ ಪ್ರಧಾನಿ ಮೋದಿ "ಪಿ ಗುರುರಾಜ್ ಅವರ ಸಾಧನೆಯಿಂದ ಅಪಾರ ಸಂತಸವಾಗಿದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಕ್ರೀಡಾ ಪಯಣದಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸುವಂತಾಗಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ ಅಭಿನಂದಿಸಿದ ಉಪರಾಷ್ಟ್ರಪತಿ: ಇನ್ನು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಗುರುರಾಜ್ ಪೂಜಾರಿ ಸಾಧನೆಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ಕಂಚಿನ ಪದಕವನ್ನು ಗೆದ್ದಿರುವುದಕ್ಕೆ ಗುರುರಾಜ್ ಪೂಜಾರಿ ಅವರಿಗೆ ಅಬಿನಂದನೆಗಳು. ನಿಮ್ಮ ಸಾಧನೆಯಿಂದ ಇಡೀ ದೇಶ ಹೆಮ್ಮೆ ಪಡುತ್ತಿದೆ. ಅವರ ಭವಿಷ್ಯಕ್ಕಾಗಿ ನನ್ನ ಹಾರೈಕೆಗಳು" ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟ್ ಮಾಡಿದ್ದಾರೆ.
ಗುರುರಾಜ ಅವರ ಪಂದ್ಯಕ್ಕೂ ಮುನ್ನ, ವೇಟ್ಲಿಫ್ಟರ್ ಸಂಕೇತ್ ಸರ್ಗಾರ್ ಅವರು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದರು. ಮಹಾರಾಷ್ಟ್ರದ ಸಂಕೇತ್ ಸರ್ಗಾರ್ ಅವರು ಶನಿವಾರ ನಡೆದ 55 ಕೆಜಿ ಪುರುಷರ ಫೈನಲ್ನಲ್ಲಿ ಬೆಳ್ಳಿ ಪದಕ ಗೆದ್ದರು.
ಕಾಮನ್ವೆಲ್ತ್ ಗೇಮ್ಸ್ ಪದಕ ಪಟ್ಟಿಯಲ್ಲಿ ಕರ್ನಾಟಕ
#CWG2022 ಪುರುಷರ 61 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಗೆದ್ದ ಉಡುಪಿ ಮೂಲದ ಗುರುರಾಜ ಪೂಜಾರಿ ಅವರಿಗೆ ಅಭಿನಂದನೆಗಳು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಇದು ಅವರ ಎರಡನೇ ಕಾಮನ್ವೆಲ್ತ್ ಗೇಮ್ಸ್ ಪದಕವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅವರು 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ (56 ಕೆಜಿ) ಗೆದ್ದಿದ್ದರು ಎಂದು ಸಚಿವರು ಕೊಂಡಾಡಿದ್ದಾರೆ.
ಸಂಕೇತ್ ಸರ್ಗರ್ ಅವರು ಕ್ಲೀನ್ ಮತ್ತು ಜರ್ಕ್ನ ಮೊದಲ ಪ್ರಯತ್ನದಲ್ಲಿ 135 ಕೆಜಿ ಎತ್ತುವ ಮೊದಲು ಫೈನಲ್ನಲ್ಲಿ ತಮ್ಮ ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ 139 ಕೆಜಿ ತೂಕವನ್ನು ಕಳೆದುಕೊಂಡರು.
ಪುರುಷರ 55 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಂಕೇತ್ ಸರ್ಗಾರ್ ಒಟ್ಟು 248 ಕೆಜಿ ಭಾರವನ್ನು ಎತ್ತುವ ಮೂಲಕ ಭಾರತದ ಪರವಾಗಿ ಪದಕದ ಸಾಧನೆ ಮಾಡಿದ್ದಾರೆ. 113 ಕೆಜಿ ಸ್ನಾಚ್ ಹಾಗೂ 135 ಕೆಜಿ ಕ್ಲೀನ್ ಮತ್ತು ಜರ್ಕ್ ಮೂಲಕ 248 ಕೆಜಿ ಸಾಧನೆ ಮಾಡಿದ್ದಾರೆ ಸಂಕೇತ್.