ಬೆಂಗಳೂರು, ಫೆಬ್ರವರಿ 23: ನಗರದ ಜಲಮಂಡಳಿಯ ಅಂಗವಿಕಲ ನೌಕರ ಬಸವರಾಜು ಅವರು ರಾಷ್ಟ್ರ ಮಟ್ಟದ ಒಂಟಿ ಕಾಲಿನ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಬೆಳ್ಳಿ ಪದಕ ಜಯಿಸಿ ಕೊಟ್ಟಿದ್ದಾರೆ.
ಇಂದು ಕಂಠೀರವ ಕ್ರೀಡಾಂಗಣದಲ್ಲಿ ಅಂಗವಿಕಲರಿಗಾಗಿ ನಡೆದ ರಾಷ್ಟ್ರ ಮಟ್ಟದ ಇಂಡಿಯನ್ ಮಾಸ್ಟರ್ ಅಥ್ಲೆಟಿಕ್ ಗೇಮ್ನಲ್ಲಿ ಬಸವರಾಜು ಅವರು ಒಂಟಿ ಕಾಲಿನ ಓಟದಲ್ಲಿ ಭಾಗವಹಿಸಿದ್ದರು.
ಇದೇ ಅಂಗವಿಕಲ ಬಸವರಾಜು ಈ ಹಿಂದೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿಯೂ ಕೂಡ ಒಂದು ಚಿನ್ನ ಮತ್ತು ಬೆಳ್ಳಿ ಜಯಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದರು.
ಮೂಲತಃ ಮೈಸೂರಿನ ಬಸವರಾಜು ಅವರು ಒಂದು ಕಾಲು ಇಲ್ಲದ ಅಂಗವಿಕಲರಾಗಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ, ಜೊತೆಗೆ ಕ್ರೀಡೆಯಲ್ಲಿ ಇನ್ನೂ ಉತ್ತಮ ಸಾಧನೆಗೈಯ್ಯುವ ಕನಸು ಹೊಂದಿದ್ದಾರೆ.
ಇಂದು ಬೆಳ್ಳಿ ಪದಕ ಗೆದ್ದ ಬಸವರಾಜು ಅವರನ್ನು ಅಂತರರಾಷ್ಟ್ರೀಯ ಕ್ರೀಡಾಪಟುವಾದ ವಿಲ್ಸನ್ ಥಾಮಸ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಡೇವಿಡ್ ಪ್ರೇಮನಾಥ್ ಅವರುಗಳು ಅಭಿನಂದಿಸಿದರು.