ಬೆಂಗಳೂರು, ಅಕ್ಟೋಬರ್ 2: ನಗರದ ಶ್ರೀ ಕಂಠೀರವ ಕ್ರೀಡಾಂಗಣವು ಶನಿವಾರ (ಅಕ್ಟೋಬರ್ 2) ಬೆಳಿಗ್ಗೆ ಪ್ರೋಸ್ಪೋರ್ಟ್ಸ್ ಆಯೋಜಿಸಿದ್ದ ಜೆಕೆ ಟೈರ್ ಐಎನ್ಆರ್ಆರ್ಸಿಗಾಗಿ ( ಇಂಡಿಯನ್ ನ್ಯಾಷನಲ್ ರೆಗ್ಯುಲಾರಿಟಿ ರನ್ ಚಾಂಪಿಯನ್ಶಿಪ್ ) ಹಳದಿ ಬಣ್ಣದಿಂದ ಚಿತ್ರಿಸಲ್ಪಟ್ಟು ಎಲ್ಲರ ಕಣ್ಗಳನ್ನು ಸೆಳೆದಿತ್ತು. ಈ ಹಿಂದೆ ಟಿಡಿಎಸ್ ನ್ಯಾಷನಲ್ಸ್ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ರ್ಯಾಲಿ ಇದೀಗ ಇಂಡಿಯನ್ ನ್ಯಾಷನಲ್ ರೆಗ್ಯುಲಾರಿಟಿ ರನ್ ಚಾಂಪಿಯನ್ಶಿಪ್ ಎಂಬ ನೂತನ ಹೆಸರಿನೊಂದಿಗೆ ಭವ್ಯವಾದ ಆರಂಭವನ್ನು ಪಡೆಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಐಎಎಸ್ ಅಧಿಕಾರಿಯಾಗಿರುವ ಡಾ.ಶಾಲಿನಿ ರಜನೀಶ್ ಈ ರ್ಯಾಲಿಗೆ ಚಾಲನೆ ನೀಡಿದರು.
ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತ ಮತ್ತು ನೋಯ್ಡಾ ಡಿಎಂ ಆಗಿರುವ ಸುಹಾಸ್ ಯತಿರಾಜ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ರ್ಯಾಲಿಗೆ ಚಾಲನೆ ನೀಡಿದ ಡಾ. ಶಾಲಿನಿ ರಜನೀಶ್ ರಸ್ತೆ ಸುರಕ್ಷತೆಯ ಜಾಗೃತಿ, ಸಂಚಾರ ನಿಯಮಗಳನ್ನು ಹೇಗೆ ಪಾಲಿಸಬೇಕು ಮತ್ತು ಚಾಲನೆ ಮಾಡುವಾಗ ಹೇಗೆ ತಾಳ್ಮೆ ಹೊಂದಿರಬೇಕು ಎಂಬುದರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸಬೇಕು ಮತ್ತು ಸಾರಿಗೆ ಇಲಾಖೆ ಹಸಿರು ಪರಿಸರ ಕಾಪಾಡುವುದಕ್ಕೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೇಗೆ ಬದ್ಧವಾಗಿದೆ ಎಂಬುದನ್ನು ತಿಳಿಸಿದರು.
ಟಿಎಸ್ಡಿ ( ಟೈಮ್ ಸ್ಪೀಡ್ ಡಿಸ್ಟೆನ್ಸ್) ರ್ಯಾಲಿ ಜನಪ್ರಿಯವಾಗಿದ್ದು, ಇದು ಸಾಮಾನ್ಯ ವಾಹನಗಳನ್ನು ಸುರಕ್ಷಿತ ಪರಿಸರದಲ್ಲಿ ಓಡಿಸಲು ಮತ್ತು ರ್ಯಾಲಿ ಮಾಡಲು ಸಹಕಾರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಟಿಎಸ್ಡಿ ನ್ಯಾಷನಲ್ ವಾಸ್ತವಿಕವಾಗಿ ಮರೆಯಾಗಿದ್ದು ಇದೀಗ ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಗಳ ಒಕ್ಕೂಟದ (ಎಫ್ಎಂಎಸ್ಸಿಐ) ನೇತೃತ್ವ ಮತ್ತು ಜೆಕೆ ಟೈರ್ ಬೆಂಬಲದೊಂದಿಗೆ ಐಎನ್ಆರ್ಆರ್ಸಿ ಎಂಬ ನೂತನ ಹೆಸರಿನೊಂದಿಗೆ ಈ ನ್ಯಾಷನಲ್ ಚಾಂಪಿಯನ್ಶಿಪ್ ಮರಳಿ ಬಂದಿದೆ.
ಈ ರಾಷ್ಟ್ರೀಯ ಚಾಂಪಿಯನ್ಶಿಪ್ 10 ಕಿಮೀ ವಿಂಟೇಜ್ ಕಾರ್ ರ್ಯಾಲಿಯ ಮೂಲಕ ಪ್ರಾರಂಭವಾಯಿತು. ಸುಮಾರು 40 ಸುಂದರಿಯರು ಕಂಠೀರವ ಕ್ರೀಡಾಂಗಣದಿಂದ ವಿಧಾನಸೌಧಕ್ಕೆ ಹಾಗೂ ವಿಧಾನಸೌಧದಿಂದ ಮರಳಿ ಕಂಠೀರವ ಕ್ರೀಡಾಂಗಣವರೆಗೆ ಕೈಗೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಐಎನ್ಆರ್ಆರ್ಸಿ ರ್ಯಾಲಿಯಲ್ಲಿ ಸುಮಾರು 30 ಕಾರುಗಳು ಭಾಗವಹಿಸಿದ್ದು, ಆಯೋಜಕರು ಮಹಿಳೆಯರಿಗೆ ಉಚಿತ ಪ್ರವೇಶ ಕಲ್ಪಿಸಿದ್ದಾರೆ. ಹಾಗೂ ಈ ರ್ಯಾಲಿ ಅಕ್ಟೋಬರ್ 3ರ ಭಾನುವಾರದಂದು ಹಂಪಿಯಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮೂಲಕ ಮುಕ್ತಾಯಗೊಳ್ಳಲಿದೆ.