ತಿರುವನಂತಪುರಂ, ಮೇ.7: ತರಬೇತುದಾರನ ಕಿರುಕುಳಕ್ಕೆ ಬೇಸತ್ತು ನಾಲ್ವರು ಮಹಿಳಾ ಅಥ್ಲೀಟ್ ಗಳು ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್ಎ ಐ) ಹಾಸ್ಟೆಲ್ ನಲ್ಲಿ ನಾಲ್ವರು ಹುಡುಗಿಯರು ವಿಷ ಸೇವಿಸಿದ್ದಾರೆ. ಈ ಪೈಕಿ ಓರ್ವ ಅಥ್ಲೀಟ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಪ್ರತಿಭಾವಂತರ ದುಃಸ್ಥಿತಿ: ಸ್ಥಳೀಯವಾಗಿ ಸಿಗುವ ಓಥ್ಲಂಗಾ ಎಂಬ ಹಣ್ಣಿನಿಂದ ಮಾಡಿದ ವಿಷವನ್ನು ಎಲ್ಲರೂ ಸೇವಿಸಿದ್ದಾರೆ. ಈ ವರ್ಷ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈ ಎಲ್ಲಾ ಅಥ್ಲೀಟ್ ಗಳು ಕಯಾಕಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಪುನ್ನಮಾಡ ಎಂಬಲ್ಲಿ ವಾಟರ್ ಸ್ಫೋರ್ಟ್ಸ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತಿದ್ದರುಬುಧವಾರ ರಾತ್ರಿಯೇ ವಿಷ ಸೇವಿಸಿರುವ ಬಗ್ಗೆ ಅನುಮಾವ ವ್ಯಕ್ತವಾಗಿದೆ. ವಿಷಯ ತಿಳಿದ ಇತರೆ ಅಥ್ಲೀಟ್ ಗಳು ಎಲ್ಲರನ್ನು ಸಮೀಪದ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದರೆ, ಓರ್ವ ಅಥ್ಲೀಟ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಮೃತ ಅಥ್ಲೀಟ್ ನ ಸಂಬಂಧಿಕರು ಎಚ್ಚರಿಕೆ ನೀಡಿದ್ದಾರೆ. ತರಬೇತುದಾರ, ಸೀನಿಯರ್ ಗಳಿಂದ ದೈಹಿಕ, ಮಾನಸಿಕ ಕಿರುಕುಳದ ಬಗ್ಗೆ ಆರೋಪ ಕೇಳಿ ಬಂದಿದೆ. ಅದರೆ, ಎಲ್ಲಾ ಆರೋಪವನ್ನು ಎಸ್ಎಐನ ಹಾಸ್ಟೆಲ್ ವಾರ್ಡನ್ ಅಲ್ಲಗೆಳೆದಿದ್ದಾರೆ.