For Quick Alerts
ALLOW NOTIFICATIONS  
For Daily Alerts

ಕೊಡಗಿನ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ನೆನಪು ಅಮರ!

By Lavakumar Bm
Kodagu Hockey Festivals father Pandanda Kuttappas memory is immortal

ಮಡಿಕೇರಿ, ಮೇ 11: ಬಹುಶಃ ಕೊರೊನಾ ಮಹಾಮಾರಿ ಕಾಡದೆ ಹೋಗಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಹಾಕಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಹಾಕಿ ಉತ್ಸವ ನಡೆಯುತ್ತಿಲ್ಲ. 2018ರಲ್ಲಿ ಸಂಭವಿಸಿದ ಪ್ರವಾಹ, ಜಲಪ್ರಳಯ, ಭೂಕುಸಿತದ ಪರಿಣಾಮ 2019ರಲ್ಲಿ ಹಾಕಿ ಉತ್ಸವವನ್ನು ನಡೆಸಿರಲಿಲ್ಲ. 2020ರಲ್ಲಿ ನಡೆಸಬೇಕೆಂದುಕೊಂಡು ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಾಗಲೇ ಕೊರೊನಾ ಲಾಕ್ ಡೌನ್‌ನಿಂದಾಗಿ ಹಾಕಿ ಉತ್ಸವವನ್ನು ರದ್ದುಗೊಳಿಸಬೇಕಾಯಿತು.

ಇದೆಲ್ಲದರ ನಡುವೆ ಈಗ ಇಡೀ ಕೊಡಗು ಅದರಲ್ಲೂ ಹಾಕಿ ಆಟಗಾರರು ತಲ್ಲಣಗೊಳ್ಳುವಂತ ಘಟನೆ ನಡೆದು ಹೋಗಿದೆ. ಕೊಡಗಿನಂತಹ ಪ್ರದೇಶಗಳಲ್ಲಿ ಹಾಕಿಯನ್ನು ಹುಟ್ಟು ಹಾಕಿ ಅದನ್ನು ಕೇವಲ ಕ್ರೀಡೆಯನ್ನಾಗಿ ನೋಡದೆ ಉತ್ಸವವನ್ನಾಗಿ ಮಾಡಿ ಇಡೀ ಕೊಡವ ಕುಟುಂಬಗಳು ಒಂದೆಡೆ ಕಲೆತು ಆಟವಾಡಿ, ಮನರಂಜನೆ ಪಡೆಯುವಂತೆ ಮಾಡಿದ, ಲಿಮ್ಕಾ ದಾಖಲೆ ಬರೆಯುವಂತೆ ಮಾಡಿದ ಪಾಂಡಂಡ ಕುಟ್ಟಪ್ಪ ಅವರ ಅಗಲಿಕೆ.

ಯುವ ಜನತೆ ಕ್ರಿಕೆಟ್‌ನತ್ತ ವಾಲುತ್ತಿದ್ದ ಕಾರಣದಿಂದ ಹಾಕಿ ಮೂಲೆಗುಂಪಾಗುವ ಪರಿಸ್ಥಿತಿಗೆ ಬಂದಿತ್ತು. ಎಲ್ಲ ಮೈದಾನಗಳಲ್ಲಿಯೂ ಬ್ಯಾಟ್ ಹಿಡಿದು ಯುವಕರು ಕ್ರಿಕೆಟ್ ಆಡುತ್ತಿದ್ದರು. ಇದನ್ನು ನೋಡಿದ ಪಾಂಡಂಡ ಕುಟ್ಟಪ್ಪ ಅವರಿಗೆ ಏನಾದರೊಂದು ಮಾಡಲೇ ಬೇಕೆಂಬ ಆಲೋಚನೆ ಶುರುವಾಗಿತ್ತು. ಏಕೆಂದರೆ ಹಾಕಿ ಆಟ ಕುಟ್ಟಪ್ಪ ಅವರಿಗೆ ಪ್ರಾಣವೇ ಆಗಿತ್ತು. ಬಾಲಕರಾಗಿದ್ದಾಗಲೇ ಅವರು ಹಾಕಿ ಆಟದತ್ತ ಒಲವು ಹೊಂದಿದ್ದರು.

ಕುಟ್ಟಪ್ಪ ಅವರ ಬಾಲ್ಯದ ದಿನಗಳು

ಕುಟ್ಟಪ್ಪ ಅವರ ಬಾಲ್ಯದ ದಿನಗಳು

ನಾವು ಪಾಂಡಂಡ ಕುಟ್ಟಪ್ಪ ಅವರ ಬಾಲ್ಯದ ದಿನಗಳ ಬಗ್ಗೆ ಕೆದಕುತ್ತಾ ಹೋದರೆ ಒಂದಷ್ಟು ರೋಚಕ ವಿಚಾರಗಳು ನಮಗೆ ಸಿಗುತ್ತವೆ. ಅದು ಕುಟ್ಟಪ್ಪರವರ ಬಾಲ್ಯದ ದಿನಗಳು. ಅವರನ್ನು ಎಲ್ಲರೂ ಪ್ರೀತಿಯಿಂದ ಕುಟ್ಟಣಿ ಎಂದೇ ಕರೆಯುತ್ತಿದ್ದರು. ಅವರಿಗೆ ಚಿಕ್ಕಂದಿನಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಹಾಗಾಗಿ ತಮ್ಮ ವಯಸ್ಸಿನ ಬಾಲಕರನ್ನು ಸೇರಿಸಿಕೊಂಡು ಕಾಡು ಮರದಿಂದ ತಾವೇ ಕೆತ್ತಿ ತಯಾರಿಸಿದ ಸ್ಟಿಕ್‌ನ್ನು ಹಿಡಿದು ರಬ್ಬರ್ ಚೆಂಡನ್ನು ನೂಕುತ್ತಾ ತಮ್ಮ ಹುಟ್ಟೂರು ಕುಗ್ರಾಮ ಕರಡದ ಮೈದಾನ ತುಂಬಾ ಧೂಳೆಬ್ಬಿಸುತ್ತಾ ಹಾಕಿ ಆಟವನ್ನಾಡುತ್ತಿದ್ದರು. ಅವತ್ತು ಮುಂದೊಂದು ದಿನ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ 'ಹಾಕಿನಮ್ಮೆ(ಉತ್ಸವ)'ಯ ಹುಟ್ಟಿಗೆ ಕಾರಣನಾಗಿ 'ಹಾಕಿನಮ್ಮೆಯ ಜನಕ' ಎಂದೇ ಹೆಸರು ಮಾಡುತ್ತಾನೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ.

ಕ್ರೀಡೆ ಶಾಶ್ವತವಾಗಿ ಉಳಿಯಲು ಪಣ

ಕ್ರೀಡೆ ಶಾಶ್ವತವಾಗಿ ಉಳಿಯಲು ಪಣ

ಹಾಕಿ ಆಟದ ಬಗ್ಗೆ ಉತ್ಸಾಹ ಹೊಂದಿದ್ದ ಕುಟ್ಟಪ್ಪರವರು ಮುಂದೆ ಬೆಳೆದು ದೊಡ್ಡವರಾದಾಗ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸಲು ಕಂಕಣತೊಟ್ಟು ನಿಂತರು. ಕೊಡಗಿನಲ್ಲಿ ಅಡ್ಡಾಡುವಾಗಲೆಲ್ಲಾ ಮೈದಾನದಲ್ಲಿ ಯುವಕರು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿತ್ತು. ಈ ಸಂದರ್ಭ ಅವರ ತಲೆಯಲ್ಲಿ ಆಲೋಚನೆಯೊಂದು ಸುಳಿದಾಡ ತೊಡಗಿತ್ತು. ಇದು ಹೀಗೆಯೇ ಮುಂದುವರೆದರೆ ಹಾಕಿ ಮೂಲೆ ಗುಂಪಾಗಿ ಎಲ್ಲೆಲ್ಲೂ ಕ್ರಿಕೆಟ್ ಆವರಿಸಲಿದೆ. ಇದರಿಂದ ಹಾಕಿ ಆಟ ಮಂಕಾಗುವ ಸಾಧ್ಯತೆಯಿದೆ.

ಜನಪ್ರಿಯತೆಗೆ ಪಂದ್ಯಾವಳಿಗಳ ಆಯೋಜನೆ

ಜನಪ್ರಿಯತೆಗೆ ಪಂದ್ಯಾವಳಿಗಳ ಆಯೋಜನೆ

ಕೊಡಗಿನಲ್ಲಿ ಕೊಡವ ಕುಟುಂಬಗಳಲ್ಲಿ ಹಲವಾರು ಮಂದಿ ಹಾಕಿ ಕ್ರೀಡೆಯತ್ತ ಒಲವು ಹೊಂದಿದ್ದಾರೆ. ದೇಶವನ್ನು ಹಾಕಿ ತಂಡಗಳ ಮೂಲಕ ಪ್ರತಿನಿಧಿಸಿದ ಆಟಗಾರರಿದ್ದಾರೆ. ಅಂತಹವರಿಗೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಿ ಏಕೆ ಪ್ರೋತ್ಸಾಹ ನೀಡಬಾರದು ಎಂದು ತಮ್ಮನ್ನು ಪ್ರಶ್ನಿಸಿಕೊಳ್ಳುತ್ತಿದ್ದರಲ್ಲದೆ, ಆ ಮೂಲಕ ಹಾಕಿಗೊಂದು ಹೊಸ ರೂಪ ನೀಡುವ ನಿರ್ಧಾರಕ್ಕೆ ಬಂದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾದರು.
ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊಂದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್‌ನ್ನು ವಿಜೇತ ತಂಡಕ್ಕೆ ನೀಡಲು ತೀರ್ಮಾನ ಮಾಡಿದರು.

'ಹಾಕಿನಮ್ಮೆ(ಉತ್ಸವ)’ ಆರಂಭ

'ಹಾಕಿನಮ್ಮೆ(ಉತ್ಸವ)’ ಆರಂಭ

1997ರಲ್ಲಿ ವೀರಾಜಪೇಟೆ ತಾಲೂಕಿನ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ 'ಹಾಕಿನಮ್ಮೆ(ಉತ್ಸವ)'ಯನ್ನು ಆರಂಭಿಸಲಾಯಿತು. ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು. ಆರಂಭದ ಪಂದ್ಯಾವಳಿಯಿಂದ ಇಲ್ಲಿಯವರೆಗೆ ಗಮನಿಸಿದರೆ ಮೊದಲು ಕೇವಲ ಪಂದ್ಯಾವಳಿಯಾಗಿದ್ದದ್ದು, ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತಲ್ಲದೆ, ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು.
1997ರಲ್ಲಿ ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡ ಹಾಕಿನಮ್ಮೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ 'ಲಿಮ್ಕಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲೆ ಬರೆದಿದೆ. ಕಳೆದ ಎರಡು ದಶಕಗಳಿಂದ ಹಾಕಿ ಉತ್ಸವ ನಡೆಯುತ್ತಲೇ ಬರುತ್ತಿದ್ದು ಸುಮಾರು ಮುನ್ನೂರಷ್ಟು ತಂಡಗಳು ಪಾಲ್ಗೊಳ್ಳುತ್ತಿವೆ.

ಬೇರೆಲ್ಲೂ ಕಾಣಲು ಸಾಧ್ಯವಿಲ್ಲ

ಬೇರೆಲ್ಲೂ ಕಾಣಲು ಸಾಧ್ಯವಿಲ್ಲ

ಬಹುಶಃ ಇಂತಹದೊಂದು ಹಾಕಿ ಉತ್ಸವವನ್ನು ಕೊಡಗು ಹೊರತುಪಡಿಸಿ ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ. ಮೊದಲು ಕೊಡಗಿನಲ್ಲಿ ಕೋವಿಯನ್ನು ಹಿಡಿಯದ ಕೈಗಳಿಲ್ಲ ಎಂಬ ಮಾತಿತ್ತು. ಆದರೆ ಈಗ ಹಾಕಿ ಸ್ಟಿಕ್ ಹಿಡಿಯದ ಕೈಗಳಿಲ್ಲ ಎಂದು ಬದಲು ಮಾಡಿಕೊಂಡರೂ ತಪ್ಪಾಗಲಾರದು. ಇಂತಹದೊಂದು ವಾತಾವರಣನ್ನು ಕೊಡಗಿನಲ್ಲಿ ನಿರ್ಮಾಣ ಮಾಡಿ 'ಹಾಕಿನಮ್ಮೆಯ ಜನಕ' ಎಂದೇ ಕರೆಯಿಸಿ ಕೊಂಡಿದ್ದ ಪಾಂಡಂಡ ಕುಟ್ಟಪ್ಪ ಅವರು ಈಗ ನಮ್ಮೊಂದಿಗಿಲ್ಲ ಎಂಬ ಕೊರಗು ಪ್ರತಿಯೊಬ್ಬ ಕೊಡವನನ್ನು ಕಾಡದಿರದು ಆದರೆ ಅವರು ಹಾಕಿಕೊಟ್ಟ ಮಾರ್ಗ ಮಾತ್ರ ಚಿರನೂತನವಾಗಿರುತ್ತದೆ ಎಂಬುದಂತು ಸತ್ಯ.

Story first published: Monday, May 11, 2020, 22:36 [IST]
Other articles published on May 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+