
ಮೈಸೂರು: ಆಗಸ್ಟ್ 29ರಂದು ಹಾಕಿ ದಂತಕತೆ ಧ್ಯಾನ್ ಚಂದ್ ಜನ್ಮದಿನಾಚರಣೆಯಾಗಿ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಸಲಾಗುತ್ತದೆ. ಇದರ ಅಂಗವಾಗಿ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ವಿವಿಧ ಕ್ರೀಡಾ ತರಬೇತುದಾರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಗರದ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ವಾಲಿಬಾಲ್ ತರಬೇತುದಾರ ಡಾ. ಎನ್.ಬಿ. ಸುರೇಶ್, ಖೋ-ಖೋ ತರಬೇತುದಾರ ಬಿ.ಡಿ. ಕಾಂತರಾಜ್ ಹಾಗೂ ಕ್ರಿಕೆಟ್ ತರಬೇತುದಾರ ಡಾ. ಮನ್ಸೂರ್ ಅಹ್ಮದ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ.ಕೃಷ್ಣಯ್ಯ, ಅಂತಾರಾಷ್ಟ್ರೀಯ ಅಥ್ಲೀಟ್ ಎಂ. ಯೋಗೇಂದ್ರ, ಎಸ್. ಸೋಮಶೇಖರ್, ಕೆ. ಗುರುರಾಜ್, ಕೆ. ಗೋಪಿನಾಥ್, ಕೆ.ಎಂ. ಕಾಂತರಾಜ್, ಕೃಷ್ಣಕುಮಾರ್, ಲೀಲಾದರ್ ನಂಜಪ್ಪ, ಪರಶಿವಮೂರ್ತಿ, ವಿನೋದ್, ಮಹದೇವಯ್ಯ ಹಾಗೂ ಇನ್ನಿತರರು ಹಾಜರಿದ್ದರು.