
ಮಂಗಳೂರು, ಸೆಪ್ಟೆಂಬರ್ 7: ಕಳೆದ ಭಾನುವಾರ (ಸೆ. 2) ಮುಕ್ತಾಯಗೊಂಡ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಗೆದ್ದ ಕನ್ನಡತಿ ಎಂಆರ್ ಪೂವಮ್ಮ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಇಂದು (ಸೆ.7) ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿದರು.
ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆದಿದ್ದ 18ನೇ ಏಷ್ಯನ್ ಗೇಮ್ಸ್ ನ 4X400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಪೂವಮ್ಮ ಬೆಳ್ಳಿ ಗೆದ್ದಿದ್ದರು. ಮಹಿಳಾ ವಿಭಾಗದ 4X400 ರಿಲೇ ಸ್ಪರ್ಧೆಯಲ್ಲಿ ಹಿಮಾ ದಾಸ್, ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡಕ್ಕೆ ಬಂಗಾರ ಲಭಿಸಿತ್ತು.
ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕೆ ಎರಡು ಪದಕ ಗೆದ್ದಿದ್ದಕ್ಕಾಗಿ ರಾಜ್ಯಸರ್ಕಾರದ ಪ್ರೋತ್ಸಾಹ ಧನವಾಗಿ ಕುಮಾರಸ್ವಾಮಿ ಅವರು ಪೂವಮ್ಮ ಅವರಿಗೆ 40 ಲಕ್ಷ ರೂ.ಗಳ ಚೆಕ್ ನೀಡಿ ಗೌರವಿಸಿದರು. ಇದರಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ 25 ಲಕ್ಷ ರೂ., ಬೆಳ್ಳಿಗೆ 15 ಲಕ್ಷ ರೂ. ಸೇರಿದ್ದವು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಭಿಪ್ರಾಯ ಹಂಚಿಕೊಳ್ಳುತ್ತ ಪೂವಮ್ಮ, ಇತರ ರಾಜ್ಯಗಳಲ್ಲಿ ಕಂಚು ಗೆದ್ದರೂ ಸುಮಾರು 30 ಲಕ್ಷ ರೂ.ಗಳ ಪ್ರೋತ್ಸಾಹ ಧನ ಸಿಗುತ್ತವೆ. ನಮ್ಮಲ್ಲೂ ಕ್ರೀಡಾಪಟುಗಳಿಗೆ ಆ ಮಟ್ಟಿನ ಪ್ರೋತ್ಸಾಹದ ಅಗತ್ಯವಿದೆ ಎಂದರು. ಜೊತೆಗೆ, ಪ್ರಶಸ್ತಿ ಗೆದ್ದೂ ಪ್ರೋತ್ಸಾಹ ಧನಕ್ಕಾಗಿ ಸರ್ಕಾರದ ಮೊರೆ ಹೋಗುವ ಇರಾದೆ ಹಿಂದೆ ಇತ್ತು. ಆದರೆ ಕುಮಾರಸ್ವಾಮಿ ಅವರ ಸ್ಪಂದನೆ ಸಂತಸ ತಂದಿದೆ ಎಂದೂ ತಿಳಿಸುವುದನ್ನು ಮರೆಯಲಿಲ್ಲ.
ಏಷ್ಯನ್ ಬಂಗಾರದ ಹುಡುಗಿಯ ಮಾತು ಆಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ, ಪ್ರೋತ್ಸಾಹ ಧನ ಏರಿಸುವುದಾಗಿ ಭರವಸೆ ನೀಡಿದರು. ಕ್ರೀಡಾಕೂಟ ಮುಗಿಸಿ ಗುರುವಾರ ರಾಜ್ಯಕ್ಕೆ ಮರಳಿದ್ದ ಪೂವಮ್ಮ ಅವರನ್ನು ಗುರುವಾರ ಮಂಗಳೂರಿನಲ್ಲಿ ಆದರದಿಂದ ಬರಮಾಡಿಕೊಳ್ಳಲಾಗಿತ್ತು.