ಡಿಸೆಂಬರ್ 30 ರಂದು ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಭಾರತದ ಯುವ ಕ್ರಿಕೆಟಿಗ ರಿಷಬ್ ಪಂತ್ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಷಬ್ ಪಂತ್ರನ್ನು ಡಿಸೆಂಬರ್ 31 ರಂದು ವಿವಿಧ ಚಿಕಿತ್ಸೆಗಳಿಗೆ ಒಳಪಡಿಸಲಾಗಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ತಂಡ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ರಿಷಬ್ ಪಂತ್ರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪ್ಲಾಸ್ಟಿಕ್ ಸರ್ಜರಿಗಾಗಿ ದೆಹಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ ರಿಷಬ್ ಪಂತ್ರನ್ನು ವಿಮಾನದ ಮೂಲಕ ದೆಹಲಿಗೆ ಕಳುಹಿಸಲಾಗುವುದು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಪಂತ್ ಅವರು ಹಮ್ಮದ್ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಅಪಘಾತ ಸಂಭವಿಸಿತ್ತು. ಕಾರು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಪಂತ್ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದರು.
Flashback 2022: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮರೆಯಲಾಗದ ಕ್ಷಣಗಳಿವು
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಶರ್ಮಾ, "ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (DDCA) ತಂಡವು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮ್ಯಾಕ್ಸ್ ಆಸ್ಪತ್ರೆಗೆ ಡೆಹ್ರಾಡೂನ್ಗೆ ಹೋಗುತ್ತಿದೆ, ಅಗತ್ಯವಿದ್ದರೆ ನಾವು ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತೇವೆ. ಪ್ಲಾಸ್ಟಿಕ್ ಸರ್ಜರಿಗಾಗಿ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚಿದೆ" ಎಂದು ಹೇಳಿದ್ದಾರೆ.
ಇಂದು ವಿವಿಧ ಮಾದರಿ ತಪಾಸಣೆ
"ರಿಷಬ್ ಪಂತ್ ಮೂಳೆಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರ ನಿಗಾದಲ್ಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ. ಅವರನ್ನು ಪರೀಕ್ಷಿಸಿದ ನಂತರ ವಿವರವಾದ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ನಾವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ಡಾ ಆಶಿಶ್ ಯಾಗ್ನಿಕ್ ಹೇಳಿದ್ದಾರೆ.
ಡಿಸೆಂಬರ್ 31 ರಂದು ರಿಷಬ್ ಪಂತ್ ಗಾಯಗಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಅವರ ಪಾದ ಮತ್ತು ಮೊಣಕಾಲಿನ ಅಸ್ಥಿರಜ್ಜು ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯತೆ ಬಗ್ಗೆ ಪರೀಕ್ಷೆಯ ನಂತರ ನಿರ್ಧರಿಸಲಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಪಂತ್ಗೆ ಯಾವುದೇ ಹೆಚ್ಚಿನ ಅಪಾಯ ಇಲ್ಲ, ಅವರ ಮೆದುಳು, ನರಹುರಿಗೆ ಯಾವುದೇ ಗಾಯವಾಗಿಲ್ಲ. ಆದರೂ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಗುತ್ತದೆ. ತಾಯಿಯೊಂದಿಗೆ ಹೊಸ ವರ್ಷವನ್ನು ಆಚರಿಸಲು ತೆರಳುವ ವೇಳೆ ಪಂತ್ ಕಾರು ಅಪಘಾತಕ್ಕೀಡಾಗಿಯಿತು.