ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಹಿಂಸಾಚಾರದಲ್ಲಿ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ದಿಗ್ಗಜರಾದ ಕುಮಾರ್ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಹಾಲಿ- ಮಾಜಿ ಆಟಗಾರರು ಶ್ರೀಲಂಕಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಮಾಜಿ ಕ್ರಿಕೆಟಿಗರು ಶ್ರೀಲಂಕಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರ ಹೇಳಿಕೆಗಳು ಮಹತ್ವವನ್ನು ಪಡೆದಿರುತ್ತವೆ. "ತಮ್ಮ ಮೂಲಭೂತ ಅಗತ್ಯಗಳು ಮತ್ತು ಹಕ್ಕುಗಳಿಗಾಗಿ ಆಗ್ರಹಿಸಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರದಲ್ಲಿರುವ ಕೊಲೆಗಡುಕರು ಮತ್ತು ಗೂಂಡಾಗಳ ಬೆಂಬಲದೊಂದಿಗೆ ಹೇಯ ಕೃತ್ಯ ಎಸಗಲಾಗಿದೆ. ಇದು ಅಸಹ್ಯಕರವಾಗಿದೆ," ಎಂದು ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
'ಇದು ಸರ್ಕಾರ ಬೆಂಬಲಿತ ಉದ್ದೇಶಪೂರ್ವಕ ಮತ್ತು ಯೋಜಿತ ಹಿಂಸಾಚಾರ' ಎಂದು ಶ್ರೀಲಂಕಾದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ರಾಜಸ್ಥಾನ ರಾಯಲ್ಸ್ನ ಮುಖ್ಯ ಕೋಚ್ ಕುಮಾರ ಸಂಗಕ್ಕಾರ ಹೇಳಿದ್ದಾರೆ.
ಇನ್ನು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ನ ಕೋಚ್ ಮಹೇಲಾ ಜಯವರ್ಧನೆ ಪ್ರತಿಕ್ರಿಯಿಸಿದ್ದು, ಮಹಿಳೆಯೊಬ್ಬರನ್ನು ಥಳಿಸುತ್ತಿರುವ ವಿಡಿಯೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ. "ಪೊಲೀಸ್ ಅಧಿಕಾರಿಗಳ ಮುಂದೆ ಅವರು ಮಹಿಳಾ ಪ್ರತಿಭಟನಾಕಾರರ ಮೇಲೆ ಈ ರೀತಿ ಹಲ್ಲೆ ನಡೆಸಿದ್ದಾರೆ. ಹಿಂಸೆಯನ್ನು ಬಳಸಿದ್ದಕ್ಕಾಗಿ ಆಡಳಿತ ಪಕ್ಷ ಮತ್ತು ಶ್ರೀಲಂಕಾ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ವಾರಗಟ್ಟಲೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಿರಾಯುಧ ಪ್ರತಿಭಟನಾಕಾರರ ಮೇಲೆ ಆಡಳಿತಾರೂಢ ರಾಜಪಕ್ಸೆ ಕುಟುಂಬದ ಬೆಂಬಲಿಗರು ಸೋಮವಾರ ದಾಳಿ ನಡೆಸಿದ್ದಾರೆ.
1948ರ ಸ್ವಾತಂತ್ರ್ಯದ ನಂತರ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರು ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ಸೋಮವಾರ ರಾಜೀನಾಮೆ ನೀಡಿದರು, ಆದರೆ ಅದು ಸಾರ್ವಜನಿಕ ವಿಕೋಪವನ್ನು ಶಾಂತಗೊಳಿಸಲು ಸಹಾಯ ಮಾಡಲಿಲ್ಲ.
ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕೂಡ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದು, "ಹೇಡಿತನ ಮತ್ತು ಅನಾಗರಿಕ! ಮುಗ್ಧ ಮತ್ತು ಶಾಂತಿಯುತ ಶ್ರೀಲಂಕಾದ ಪ್ರತಿಭಟನಾಕಾರರ ಮೇಲಿನ ಇಂದಿನ ದಾಳಿಯನ್ನು ಈ ಎರಡು ಪದಗಳಿಂದ ಕರೆಯಬೇಕಾಗುತ್ತದೆ," ಎಂದು ದೂಷಿಸಿದ್ದಾರೆ.
ಮೇ 12ರಿಂದ ನಡೆಯುವ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ರಾಹುಲ್ ದ್ರಾವಿಡ್ ಭಾಗಿ!
"ನಮ್ಮ ದೇಶದಲ್ಲಿ ಅಂತಹ ನಾಯಕತ್ವವನ್ನು ನಾವು ಹೊಂದಿದ್ದೇವೆ ಎಂದು ಯೋಚಿಸಲು ಸಹ ನನಗೆ ನಿರಾಶೆಯಾಗುತ್ತದೆ. ಈ ಕಾರಣಕ್ಕಾಗಿ ಎಲ್ಲರೊಂದಿಗೆ ನನ್ನ ಹೃದಯ ಒಟ್ಟಾಗಿ ನಿಂತಿದೆ. ಶಾಂತಿಯುತ ಮತ್ತು ಮುಗ್ಧ ಪ್ರತಿಭಟನಾಕಾರರ ಮೇಲೆ ಸುಸಂಘಟಿತ ದಾಳಿಯ ಬಗ್ಗೆ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ," ಎಂದು ಶ್ರೀಲಂಕಾದ ಪ್ರವಾಸಿ ತಂಡದೊಂದಿಗೆ ಬಾಂಗ್ಲಾದೇಶದಲ್ಲಿರುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ನಿರೋಶನ್ ಡಿಕ್ವೆಲ್ಲಾ ಹೇಳಿದರು.
ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸಕ್ಕೆ ಮುಂಚಿತವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಹೇಳಿದೆ, ಆದರೆ ಈಗ ಅದು ಮುಂದೆ ಹೋಗಿದೆ.