ಟೋಕಿಯೋ, ಜುಲೈ 23: ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಇಂದು(ಶುಕ್ರವಾರ) ಉದ್ಘಾಟನೆಯಾಗಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರವಾಗಿ ಈ ಬಾರಿ ಕೇವಲ 19 ಅಥ್ಲೀಟ್ಗಳು ಮಾತ್ರವೇ ಭಾಗಿಯಾಗಲಿದ್ದಾರೆ. ಇವರ ಜೊತೆಗೆ 6 ಅಧಿಕಾರಿಗಳು ಕೂಡ ಸಾಥ್ ನೀಡಲಿದ್ದಾರೆ. ಕೊರೊನಾವೈರಸ್ನ ಆತಂಕ ಹಾಗೂ ಶನಿವಾರ ಸಾಕಷ್ಟು ಕ್ರೀಡೆಗಳು ನಡೆಯಲಿರುವ ಕಾರಣ ಉಳಿದ ಅಥ್ಲೀಟ್ಗಳು ಉದ್ಘಾಟನಾ ಸಮಾರಂಭದಿಂದ ದೂರವುಳಿಯಲಿದ್ದಾರೆ.
ಕಳೆದ ರಾತ್ರಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಟೇಬಲ್ ಟೆನಿಸ್ ಆಟಗಾರರಾದ ಮನಿಕಾ ಬಾತ್ರಾ ಹಾಗೂ ಶರತ್ ಕಮಾಲ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಈ ಇಬ್ಬರು ಕೂಡ ಶನಿವಾರ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಲಿರುವ ಕಾರಣ ಸಮಾರಂಭ ಹೊರಗುಳಿದಿದ್ದಾರೆ. ಅಂತಿಮ ಹಂತದಲ್ಲಿ ಟೆನಿಸ್ ತಾರೆ ಅಂಕಿತಾ ರೈನಾ ಅವರನ್ನು ಈ ಪಟ್ಟಿಗೆ ಸೇರಿಸಲಾಗಿದ್ದು ಒಟ್ಟು 19 ಅಥ್ಲೀಟ್ಗಳು ಈ ಪಟ್ಟಿಯಲ್ಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಆರ್ಚರಿ ಮೂಲಕ ಅಭಿಯಾನ ಆರಂಭಿಸಿದ ಭಾರತ
ಶೂಟಿಂಗ್, ಬ್ಯಾಡ್ಮಿಂಟನ್, ಆರ್ಚರಿ ಮತ್ತು ಹಾಕಿಯಂತಾ ಕ್ರೀಡೆಗಳ ಆಟಗಾರರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಶನಿವಾರ ಈ ಪಂದ್ಯಗಳು ನಡೆಯಲಿರುವ ಕಾರಣ ಕೊರೊನಾವೈರಸ್ ಅಪಾಯದಿಂದ ದೂರವಿರಲು ಈ ನಿರ್ಧಾರ ಮಾಡಲಾಗಿದೆ. ಆದರೆ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ರಾಷ್ಟ್ರಧ್ವಜ ಹಿಡಿಯುವ ಕಾರಣ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸೈಲಿಂಗ್ ಹಾಗೂ ಪ್ಯಾಡ್ಲರ್ಗಳ ತಲಾ ನಾಲ್ಕು ಸದಸ್ಯರು, ಪೆನ್ಸರ್ ಭವಾನಿದೇವಿ, ಜಿಮ್ನ್ಯಾಸ್ಟ್ ಪ್ರಣತಿ ನಾಯ್ಕ್, ಸ್ವಿಮ್ಮರ್ ಸಜನ್ ಪ್ರಕಾಶ್ ಹಾಗೂ 8 ಬಾಕ್ಸರ್ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೇರಿಕೋಮ್ ಹಾಗೂ ಮನ್ಪ್ರೀತ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡಿದ್ದಾರೆ.
ಭಾರತ ಈ ಬಾರಿಯ ಒಲಿಂಪಿಕ್ಸ್ಗೆ ಇರಿಹಾಸದಲ್ಲಿಯೇ ಮೊದಲ ಬಾರಿಗೆ ಅತೀ ದೊಡ್ಡ ತಂಡವನ್ನು ಕಳುಹಿಸಿದೆ. 125ಕ್ಕೂ ಅಧಿಕ ಅಥ್ಲೀಟ್ಗಳು ಸೇರಿದಂತೆ ಅಧಿಕಾರಿಗಳು, ಕೋಚ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 228 ಜನರ ತಂಡ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದೆ.