ಬೆಂಗಳೂರು, ಜು. 24: ಚೀನಾದ ವುಹಾನ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 5ನೇ ಫಿಬಾ ಏಷ್ಯಾ ಕಪ್ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತೀಯ ತಂಡ ಉತ್ತಮ ಸಾಧನೆಯ ವಿಜಯೋತ್ಸವಕ್ಕೆ ತಣ್ಣಿರೆರಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಘಟಕರು ಜನಾಂಗೀಯ ತಾರತಮ್ಯ ತೋರಿದ್ದಾರೆ ಎಂದು ವರದಿಯಾಗಿದೆ.
ಚೀನಾದ ವಿರುದ್ಧ ಐತಿಹಾಸಿಕ ವಿಜಯ ದಾಖಲಿಸಿದ ಭಾರತ ವಿಶ್ವಕಪ್ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿರುವ ಇರಾನ್, ಜೋರ್ಡಾನ್ ಮತ್ತು ಫಿಲಿಪ್ಪೀನ್ಸ್ ತಂಡಕ್ಕೆ ಸವಾಲೆನಿಸಿತ್ತು. ಜನಾಂಗೀಯ ತಾರತಮ್ಯ ತೋರಿದ ಪಂದ್ಯಾವಳಿಯ ಸಂಘಟಕರು ಭಾರತ ತಂಡದ ಸಿಖ್ ಆಟಗಾರರು ತಮ್ಮ ಮುಂಡಾಸುಗಳನ್ನು ಕಳಚಿಟ್ಟು ಆಡುವಂತೆ ಮಾಡಿದ್ದಾರೆ.
ಭಾರತದ ಆರಂಭಿಕ ಪಂದ್ಯ ಜುಲೈ 12ರಂದು ಜಪಾನ್ ವಿರುದ್ಧ ನಡೆಯಿತು. ಆಟಗಾರರು ಅಂಗಣ ಪ್ರವೇಶಿಸುವ ಕ್ಷಣಗಳ ಮೊದಲು ಇಬ್ಬರು ಸಿಖ್ ಆಟಗಾರರಾದ ಅಮೃತಪಾಲ್ ಸಿಂಗ್ ಮತ್ತು ಅಮ್ಜ್ಯೋತ್ ಸಿಂಗ್ಗೆ ತಮ್ಮ ಪೇಟಗಳನ್ನು ತೆಗೆಯುವಂತೆ ಸಂಘಟನಾ ಅಧಿಕಾರಿಗಳು ಸೂಚಿಸಿದರು.
ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಫೆಡರೇಶನ್ (ಫಿಬಾ)ನ ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಪಂದ್ಯದ ಅಧಿಕಾರಿಗಳು ಸಿಖ್ ಆಟಗಾರರಿಗೆ ಹೇಳಿದರು ಹಾಗೂ ಅವರಿಗೆ ಪೇಟ ಧರಿಸಿ ಆಡಲು ಅವಕಾಶ ನೀಡಲಿಲ್ಲ.

'ಇತರೆ ಆಟಗಾರರಿಗೆ ಗಾಯ ಮಾಡಬಹುದಾದ ಸಾಧನಗಳನ್ನು ಆಟಗಾರರು ಧರಿಸುವಂತಿಲ್ಲ. ತಲೆಗೆ ಧರಿಸುವ ಸಾಧನ, ಕೂದಲ ಉಪಕರಣಗಳು ಮತ್ತು ಒಡವೆಗಳನ್ನು ಧರಿಸುವಂತಿಲ್ಲ' ಎಂದು ಫಿಬಾದ 4.4.2 ನಿಯಮ ಹೇಳುತ್ತದೆ.
ಭಾರತದ ಅಮೆರಿಕನ್ ಕೋಚ್ ಸ್ಕಾಟ್ ಫ್ಲೆಮಿಂಗ್ ಮಾಡಿಕೊಂಡ ಮನವಿಯನ್ನು ಅಧಿಕಾರಿಗಳು ಕೇಳಲಿಲ್ಲ ಹಾಗೂ ಆ ಇಬ್ಬರು ಆರಂಭಿಕ ಐವರ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ತಮ್ಮ ಪೇಟಗಳನ್ನು ತೆಗೆದ ಬಳಿಕವಷ್ಟೆ ಅವರಿಗೆ ಮೊದಲ ಕ್ವಾರ್ಟರ್ನಲ್ಲಿ ಆಡಲು ಅವಕಾಶ ನೀಡಲಾಯಿತು. ಅವಮಾನದ ಹೊರತಾಗಿಯೂ, ಪಂದ್ಯದ ಅತಿ ಹೆಚ್ಚು 15 ಅಂಕಗಳನ್ನು ಅಮೃತಪಾಲ್ ಗಳಿಸಿದರು.
22 ವರ್ಷದ ಅಮ್ಜ್ಯೋತ್ ಪೇಟವಿಲ್ಲದೆ ಬಾಸ್ಕೆಟ್ಬಾಲ್ ಆಡಿದ್ದು ಅದೇ ಮೊದಲು. ಪೇಟ ಧರಿಸುವುದು ನನ್ನ ಒಂದು ಭಾಗವಾಗಿದೆ. ನಾವು ಪೇಟ ಧರಿಸಿ ಆಡುವಂತಿಲ್ಲ ಎಂದು ಅವರು ಹೇಳಿದಾಗ ಆಘಾತವಾಯಿತು. ಆದರೆ ತಂಡಕ್ಕೋಸ್ಕರ ನಾವು ಪೇಟ ತೆಗೆದಿಟ್ಟು ಆಡಲು ನಿರ್ಧರಿಸಿದೆವು ಎಂದು ಅಮ್ಜ್ಯೋತ್ ಹೇಳಿದರು.
ಮುಂದೆಯೂ ಇದೇ ನಿಯಮಗಳನ್ನು ಅನುಸರಿಸಿದರೆ ಭಾರತ ತಂಡ ಈ ಇಬ್ಬರು ಆಟಗಾರರ ಹಾಗೂ ಒಟ್ಟಾರೆಯಾಗಿ ಯಾವುದೇ ಸಿಖ್ ಆಟಗಾರರ ಸೇವೆಯಿಂದ ವಂಚಿತರಾಗಬಹುದು. ತಮ್ಮ ಮಕ್ಕಳು ಪೇಟ ತೆಗೆದಿಟ್ಟು ಆಡುವುದಕ್ಕೆ ಇಬ್ಬರು ಸಿಖ್ ಆಟಗಾರರ ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.