
ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಅತ್ಯುನ್ನತ ಕ್ರೀಡಾಕೂಟದಲ್ಲಿ ಪಾಳ್ಗೊಳ್ಳಲು ಕ್ರೀಡಾಪಟುಗಳು ತಮ್ಮ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಈ ಕ್ರೀಡಾಕೂಟದಲ್ಲಿ ಭಾರತದ 120ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗುತ್ತಿದ್ದಾರೆ. ಇವರಲ್ಲಿ ತಮಿಳುನಾಡಿದ ವಿ ರೇವತಿ ಕೂಡ ಒಬ್ಬರು. ಅತ್ಯಂತ ಬಡತನದಿಂದ ಬಂದ ಈ ಓಟಗಾರ್ತಿ ಈಗ ಪ್ರತಿಷ್ಟಿತ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
23 ವರ್ಷದ ತಮಿಳು ನಾಡು ಮೂಲದ ವಿ. ರೇವತಿ 4*400 ಮಿಕ್ಸ್ಡ್ ರಿಲೇಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಾಟಿಯಾಲ ಕ್ಯಾಂಪ್ನಲ್ಲಿ ಇವರು 53.55 ಸೆಕೆಂಡ್ಗಳಲ್ಲಿ ಗುರಿಯನ್ನು ತಲುಪಿದ್ದರು. ಮಿಕ್ಸ್ಡ್ ರಿಲೇ ವಿಭಾಗದಲ್ಲಿ ಭಾರತಕ್ಕೆ ಪದಕವನ್ನು ತರುವ ನಿರೀಕ್ಷೆಯಲ್ಲಿದ್ದಾರೆ ರೇವತಿ.
ಆದರೆ ರೇವತಿ ಈ ಹಂತಕ್ಕೆ ನಡೆದು ಬಂದ ಹಾದಿ ಸುಲಭದ್ದಾಗಿರಲಿಲ್ಲ. ಕಡು ಬಡತನದೊಂದಿಗೆ ಬೆಳೆದು ಕ್ರೀಡಾ ಲೋಕದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದರು. ಕಿರಿಯ ವಯಸ್ಸಿನಲ್ಲಿಯೇ ಹತ್ತವರನ್ನು ಕಳೆದುಕೊಂಡ ಈಕೆಗೆ ಆಸರೆಯಾಗಿದ್ದು ತನ್ನ ಅಜ್ಜಿ. ಮಧುರೈನ ಗ್ರಾಮವೊಂದರಲ್ಲಿ ಅಜ್ಜಿಯ ಜೊತೆಗೆ ಬೆಳೆದರು ರೇವತಿ. ಆದರೆ ಬಡತನದ ಕಾರಣಕ್ಕೆ ಕ್ರೀಡೆಯಲ್ಲಿ ಸಾಕಷ್ಟು ಉತ್ಸಾಹವಿದ್ದರು ಅಗತ್ಯವಿದ್ದ ಶೂಗಳನ್ನು ಕೊಳ್ಳುವುದು ಕಷ್ಟವಾಗಿತ್ತು.
ಹೀಗಿದ್ದಾಗ ಈ ಪ್ರತಿಭಾವಂತ ಓಟಗಾರ್ತಿ ಕೋಚ್ ಕಣ್ಣನ್ ಎಂಬವರ ಕಣ್ಣಿಗೆ ಬಿದ್ದರು. ರೇವತಿ ಕುಟುಂಬವನ್ನು ಅಕ್ಷರಶಃ ದತ್ತು ಪಡೆದು ಅವರಿಗೆ ತರಬೇತಿಯನ್ನು ನೀಡಲು ಆರಂಭಿಸಿದರು. ನಂತರ ಅವರು ಯುನಿವರ್ಸಿಟಿ ಮಟ್ಟದಲ್ಲಿ ದಾಖಲೆಯನ್ನು ಬರೆದರು. ರಾಷ್ಟ್ರಮಟ್ಟದಲ್ಲಿಯೂ ಮೂರು ಪದಕಗಳನ್ನು ಗೆದ್ದಿದ್ದಾರೆ. 2019ರ ದೋಹಾ ಏಷ್ಯನ್ ಗೇಮ್ಸ್ನಲ್ಲಿ ನಾಲ್ಕನೇ ಸ್ಥಾನದಲ್ಲಿ ಗುರಿ ತಲುಪುವ ಮೂಲಕ ಸಣ್ಣ ಅಂತರದಲ್ಲಿ ಪದಕವನ್ನು ಕಳೆದುಕೊಂಡಿದ್ದರು. ಈಗ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ರೇವತಿ ಅವರ ಈ ಸಾಧನೆಗೆ ಕೋಚ್ ಕಣ್ಣನ್ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ರೇವತಿ ಅವರ ಈ ಹಿನ್ನೆಲೆ ಹಾಗೂ ಅವರ ಸಾಧನೆಯ ಬಗ್ಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.