ಗುವಾಹಟಿ, ಫೆ. 08: ಈ ಬಾರಿಯ 12 ನೇ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ 56 ಕೆಜಿ ವಿಭಾಗದ ವೇಯ್ಟ್ ಲಿಪ್ಟಿಂಗ್ ನಲ್ಲಿ ಕರ್ನಾಟಕದ ಕುವರ ಗುರುರಾಜ್ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬಡತನದಲ್ಲಿ ಬೆಳೆದ ಇವರು ತನ್ನ ಶ್ರದ್ಧೆ ಮತ್ತು ಹಠದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸುವ ಮೂಲಕ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ, ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ವಂಡ್ಸೆಯ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿಗಳ 6 ಜನ ಗಂಡು ಮಕ್ಕಳಲ್ಲಿ 5 ನೆಯವರು ಗುರುರಾಜ್.
ತಂದೆ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದವರು ಪ್ರಸ್ತುತ ಆಟೋ ಚಾಲಕ. ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ಇವರು ಮೂಲತ ಅಥ್ಲೆಟಿಕ್, ಓರ್ವ ಓಟಗಾರ, ಹ್ಯಾಂಡ್ ಬಾಲ್ ಪ್ಲೇಯರ್ ಮತ್ತು ಖೋ ಖೋ ಆಟಗಾರ. ಕ್ರೀಡಾ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ (ಎಸ್ ಡಿಎಂ) ವಿಫುಲ ಅವಕಾಶ ಇದೆ ಎಂದು ತನ್ನ ಗುರು ಶಾರದಾ ಬಾರ್ಕೂರ್ ಅವರಿಂದ ತಿಳಿದ ಗುರುರಾಜ್ ಈ ಕಾಲೇಜಿನಲ್ಲಿ ಕ್ರೀಡಾ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು.
ಅಥ್ಲೆಟಿಕ್ ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾಗ ಇದರೊಂದಿಗೆ ಪವರ್ ಲಿಫ್ಟಿಂಗ್ ಅಭ್ಯಾಸ ನಡೆಸಲು ಶುರುವಿಟ್ಟುಕೊಂಡರು. ನಂತರ ಇವರ ಮನಸ್ಸುವಾಲಿದ್ದು ವೈಟ್ ಲಿಫ್ಟಿಂಗ್ ನತ್ತ. ಅಲ್ಲಿ ಇವರಿಗೆ ಎಸ್ ಡಿಎಂ ಇಂಜಿನಿಯರ್ ಕಾಲೇಜಿನ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ರಾಜೇಂದ್ರ ಪ್ರಸಾದ್ ಕೋಚ್ ಆಗಿ ಸಿಕ್ಕಿದರು.
ಕಲಿಕೆಯಲ್ಲೂ ಮುಂದಿದ್ದ ಇವರು 3 ಬಾರಿ ಯೂನಿವರ್ಸಿಟಿ ಲೆವೆಲ್ ಶ್ರೇಷ್ಠ ಭಾರ ಎತ್ತುವ ಸ್ಪರ್ಧಿ ಜೊತೆಗೆ ಬಂಗಾರದ ಪದಕ, ಇದರೊಂದಿಗೆ ಯುನಿವರ್ಸಿಟಿಯಲ್ಲಿ ತನ್ನ ಕೋಚ್ ರಾಜೇಂದ್ರ ಪ್ರಸಾದ್ ಅವರ 1999ರ ದಾಖಲೆಯನ್ನು 14 ವರ್ಷಗಳ ಬಳಿಕ ಶಿಷ್ಯನಾಗಿ ಮುರಿದರು ಮತ್ತು 2 ಬಾರಿ ಸೀನಿಯರ್ ಬೆಸ್ಟ್ ಲಿಫ್ಟರ್ ಸ್ಟೇಟ್ ಅವಾರ್ಡ್ ಜೊತೆಗೆ ಬಂಗಾರದ ಪದಕ ಪಡೆದಿದ್ದಾರೆ.
ಸದ್ಯ ಕೇವಲ ವೇಯ್ಟ್ ಲಿಪ್ಟಿಂಗ್ ನಲ್ಲಿ , ಏಷ್ಯನ್ ಗೇಮ್ಸ್ ನ ಬಂಗಾರದ ಪದಕ ಸೇರಿ 9 ಚಿನ್ನ 1 ಬೆಳ್ಳಿ 1 ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆ 23 ಹರೆಯದ ಲಿಫ್ಟರ್ ಗುರುರಾಜ್ ಗೆ ಅನೇಕ ಕನಸುಗಳಿವೆ ಸಾಧಿಸುವ ಛಲವಿದೆ. ಪ್ರಸ್ತುತ ಕ್ರೀಡಾಕೋಟಾದಲ್ಲಿ ಭಾರತೀಯ ವಾಯಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ. ಇವರ ಸಂದರ್ಶನ ಮುಂದೆ ನಿರೀಕ್ಷಿಸಿ. (ಒನ್ ಇಂಡಿಯಾ ಸುದ್ದಿ)