
ಫೀನಿಕ್ಸ್ನಂತೆ ಎದ್ದು ಬಂದ ಟೀಂ ಇಂಡಿಯಾ
ಎಂಸಿಜಿ ಅಂಗಳದಲ್ಲಿ ನಡೆದ ಪಂದ್ಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಗೆ ಸಿಕ್ಕ ಕಾಂಗರೂಗಳು ತತ್ತರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 195 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಆಘಾತ ಅನುಭವಿಸಿತು. ಬುಮ್ರಾ 4 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು, ಮೊಹಮ್ಮದ್ ಸಿರಾಜ್ 2 ವಿಕೆಟ್, ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರಹಾನೆ ಅದ್ಭುತ ಶತಕ, ಜಡೇಜಾರ ಅರ್ಧಶತಕದ ನೆರವಿನಿಂದ 326 ರನ್ ಗಳಿಸಿ ಆಲೌಟ್ ಆಯಿತು. 131 ರನ್ಗಳ ಮುನ್ನಡೆ ಕಾಯ್ದುಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲಿ ಕೂಡ ಕಾಂಗರೂಗಳ ಆಟ ನಡೆಯಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 200 ರನ್ಗಳಿಗೆ ಆಲೌಟ್ ಆಗಿ 69 ರನ್ಗಳ ಅತ್ಯಲ್ಪ ಮುನ್ನಡೆ ಪಡೆಯಿತು. ಸಿರಾಜ್ 3 ವಿಕೆಟ್ ಪಡೆದರೆ, ಬುಮ್ರಾ, ಅಶ್ವಿನ್ , ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು.
IND vs NZ: ಅಂತಿಮ ಓವರ್ನಲ್ಲಿ ಬ್ರೇಸ್ವೆಲ್ ಔಟ್ ಮಾಡಲು ಕೊಹ್ಲಿ ಸಲಹೆ ಬಹಿರಂಗಪಡಿಸಿದ ಠಾಕೂರ್

ಡ್ರಾನಲ್ಲಿ ಅಂತ್ಯವಾದ ಮೂರನೇ ಟೆಸ್ಟ್
ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದಿಂದ ಕಾದಾಡಿದವು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 338 ರನ್ಗಳಿಗೆ ಆಲೌಟ್ ಆದರೆ, ಭಾರತ ಮೊದಲ ಇನ್ನಿಂಗ್ಸ್ನಲ್ಲಿ 244 ರನ್ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ ಭಾರಿ ಹೋರಾಟ ನೀಡಿತು. ರಿಷಬ್ ಪಂತ್, ಪೂಜಾರಾ, ರೋಹಿತ್ ಶರ್ಮಾ, ಗಿಲ್, ಹನುಮ ವಿಹಾರಿ, ಅಶ್ವಿನ್ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 334 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಗಬ್ಬಾದಲ್ಲಿ ಕಾಂಗರೂಗಳು ಸೊಕ್ಕು ಮುರಿದ ಭಾರತ
ಸರಣಿಯ ಕೊನೆಯ ಪಂದ್ಯ ಬ್ರಿಸ್ಬೇನ್ ಗಬ್ಬಾ ಅಂಗಳದಲ್ಲಿ ಆಯೋಜನೆಯಾಗಿತ್ತು. ಸತತ 32 ವರ್ಷಗಳಿಂದ ಗಬ್ಬಾ ಅಂಗಳದಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಪಡೆ ಭಾರತದ ವಿರುದ್ಧ ಸರಣಿ ಗೆಲ್ಲುವ ಕನಸು ಕಂಡಿದ್ದರು. ಆದರೆ, ರಹಾನೆ ನೇತೃತ್ವದ ಭಾರತ ಇತಿಹಾಸವನ್ನು ಬರೆಯಲು ಸಿದ್ಧವಾಗಿತ್ತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಲಾಬುಸ್ಚಾಗ್ನೆ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳಿಗೆ ಆಲೌಟ್ ಆಯಿತು. ನಟರಾಜನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್ ಪಡೆದರು. ಸಿರಾಜ್ ಒಂದು ವಿಕೆಟ್ ಉರುಳಿಸಿದ್ದರು.
ನಂತರ ಮೊದಲ ಇನ್ನಿಂಗ್ಸ್ ಆಡಿದ ಭಾರತ ವಾಷಿಂಗ್ಟನ್ ಸುಂದರ್ 62, ಶಾರ್ದುಲ್ ಠಾಕೂರ್ 67 ರನ್ ಗಳಿಸುವ ಮೂಲಕ ತಕ್ಕ ಎದುರೇಟು ಕೊಟ್ಟರು. ಮೊದಲ ಇನ್ನಿಂಗ್ಸ್ನಲ್ಲಿ 336 ರನ್ಗಳಿಗೆ ಆಲೌಟ್ ಆದ ಭಾರತ 33 ರನ್ಗಳ ಹಿನ್ನಡೆ ಅನುಭವಿಸಿತು.

ಸಿರಾಜ್, ಪಂತ್, ಗಿಲ್ ಆಟಕ್ಕೆ ಶರಣಾದ ಆಸಿಸ್ ಪಡೆ
ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮಾರಕವಾದರು. ಸಿರಾಜ್ 5 ವಿಕೆಟ್ಗಳನ್ನು ಪಡೆದು ಮಿಂಚಿದರೆ, ಶಾರ್ದುಲ್ 4 ವಿಕೆಟ್ ಕಿತ್ತರು. ಅಂತಿಮವಾಗಿ ಆಸ್ಟ್ರೇಲಿಯಾ 294 ರನ್ಗಳಿಗೆ ಆಲೌಟ್ ಆಗುವ ಮೂಲಕ 327 ರನ್ಗಳ ಮುನ್ನಡೆ ಪಡೆದುಕೊಂಡಿತು.
328 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ ಕಾಂಗರೂಗಳ ಮಾರಕ ಬೌಲಿಂಗ್ ಅನ್ನು ಮೆಟ್ಟಿ ನಿಂತಿತು. ಶುಭಮನ್ ಗಿಲ್ 91 ರನ್ ಗಳಿಸಿದರೆ, ಪೂಜಾರ 211 ಎಸೆತಗಳಲ್ಲಿ 56 ರನ್ ಗಳಿಸಿ ಬಂಡೆಯಂತೆ ನಿಂತರು. ಆಸ್ಟ್ರೇಲಿಯಾ ಬೌಲರ್ ಗಳ ಬೆಂಡೆತ್ತಿದ ರಿಷಬ್ ಪಂತ್ ಅಜೇಯ 89 ರನ್ ಗಳಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ಕ್ರಿಕೆಟ್ ಅಭಿಮಾನಿಗಳ ಸಂಭ್ರಮ
ಭಾರತ ಗೆಲ್ಲುತ್ತಿದ್ದಂತೆ ಭಾರತ ತಂಡದ ಆಟಗಾರರು ಹರ್ಷೋದ್ಘಾರ ಮಾಡಿದ್ದರು. ಇಡೀ ಕ್ರಿಕೆಟ್ ಜಗತ್ತೇ ಭಾರತದ ಆಟಕ್ಕೆ ಮನಸೋತಿತ್ತು. ಟಿ20 ಹಾವಳಿಯಲ್ಲಿ ಮರೆಯಾಗುತ್ತಿದ್ದ ಟೆಸ್ಟ್ ಕ್ರಿಕೆಟ್ ಗತವೈಭವವನ್ನು ಮರಳಿ ಪಡೆದಿತ್ತು.
ಐತಿಹಾಸಿಕ ಸರಣಿ ಗೆದ್ದು ಇಂದಿಗೆ (ಜನವರಿ 19) ಎರಡು ವರ್ಷ. ಫೆಬ್ರವರಿ 9 ರಿಂದ ಮತ್ತೆ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು, ಮತ್ತೊಂದು ರೋಚಕ ಟೆಸ್ಟ್ ಕದನ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.