ಡೆಹ್ರಾಡೂನ್, ಜೂನ್ 8: ಈಗ ತಾನೆ ಕ್ರಿಕೆಟ್ ಅಂಗಳದಲ್ಲಿ ಅಂಬೆಗಾಲು ಇಡುತ್ತಿರುವ ಕೂಸು ಆಫ್ಘಾನಿಸ್ತಾನ, ಹಿರಿಯಣ್ಣ ಬಾಂಗ್ಲಾದೇಶಕ್ಕೆ ದೊಡ್ಡ ಶಾಕ್ ನೀಡಿದೆ.
ಮಾತ್ರವಲ್ಲ, ತನ್ನ ಇತಿಹಾಸದಲ್ಲಿ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗುತ್ತಿರುವ ಆಫ್ಘನ್ ಪಡೆ, ಭಾರತ ಕ್ರಿಕೆಟ್ ತಂಡಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ಗಳಲ್ಲಿ ಕೊಹ್ಲಿಯೂ ಇದ್ದಾರೆ
ಭಾರತದ ನೆಲದಲ್ಲಿ ಆಡಿದ ಮೊದಲ ಟಿ 20 ಸರಣಿಯಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಎಲ್ಲ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಆಫ್ಘಾನಿಸ್ತಾನ, ಟೆಸ್ಟ್ ಆಡುವ ತಂಡವೊಂದರ ವಿರುದ್ಧ ಒಂದೂ ಟೆಸ್ಟ್ ಆಡದ ತಂಡವೊಂದು ಕ್ಲೀನ್ ಸ್ವೀಪ್ ಮಾಡಿದ ದಾಖಲೆ ನಿರ್ಮಿಸಿದೆ.
ಉತ್ತರಾಖಂಡದ ಡೆಹ್ರಾಡೂನ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ 20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಆಫ್ಘಾನಿಸ್ತಾನ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಕೊನೆಯ ಓವರ್ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಉತ್ತಮವಾಗಿ ಆಡುತ್ತಿದ್ದ ನಾಯಕ ಮುಷ್ಫೀಕರ್ ರಹೀಮ್ ಮತ್ತು ಮಹ್ಮದುಲ್ಲಾ ಕ್ರೀಸ್ನಲ್ಲಿದ್ದರು. ಇನ್ನೂ ಆರು ವಿಕೆಟ್ಗಳು ಕೈಯಲ್ಲಿದ್ದವು.
ಆದರೆ, ವಿಶ್ವಕ್ರಿಕೆಟ್ನಲ್ಲಿ ಮನೆಮಾತಾಗಿರುವ ಯುವ ಬೌಲರ್ ರಶೀದ್ ಖಾನ್ ಸ್ಪಿನ್ ಕೌಶಲದ ಎದುರು ಬಾಂಗ್ಲಾದ ಅನುಭವಿ ಬ್ಯಾಟ್ಸ್ಮನ್ಗಳ ಆಟ ನಡೆಯಲಿಲ್ಲ.
ಶ್ರೀಲಂಕಾ ವಿರುದ್ಧದ ಸರಣಿಗೆ ಸಚಿನ್ ಪುತ್ರ ಅರ್ಜುನ್ ಆಯ್ಕೆ
ಕೊನೆಯ ಓವರ್ನ ಮೊದಲ ಎಸೆತದಲ್ಲೇ ರಹೀಮ್ ವಿಕೆಟ್ ಕಿತ್ತ ರಶೀದ್, ಉಳಿದ ಐದು ಎಸೆತಗಳಲ್ಲಿ ಕೇವಲ ಐದು ರನ್ಗಳನ್ನು ಬಿಟ್ಟುಕೊಟ್ಟು ತಂಡಕ್ಕೆ ಜಯತಂದಿತ್ತರು.
ಮೂರೂ ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರಶೀದ್ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ತಾನ ತಂಡಕ್ಕೆ ರನ್ ಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ನಜ್ಮುಲ್ ಹಸನ್, ಶಕೀಬ್ ಉಲ್ ಹಸನ್, ಅಬು ಜಾಯೇದ್ ಆಫ್ಘಾನಿಸ್ತಾನದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿದರು.
ನಾಯಕ ಅಜ್ಗರ್ ಸ್ಟಾನಿಕ್ಝೈ 27 (17) ಮತ್ತು ಸಮೀವುಲ್ಲಾ ಶೆನ್ವಾರಿ 33 (28) ಅವರ ಪ್ರಯತ್ನದ ಫಲದಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಆಫ್ಘನ್ ಬೌಲರ್ ಮುಜೀಬ್ ಉರ್ ರೆಹಮಾನ್ ಆರಂಭದಲ್ಲೇ ಆಘಾತ ನೀಡಿದರು.
ಅಫ್ತಾಬ್ ಅಲಂ, ಮುಜೀವ್ ಉರ್ ರೆಹಮಾನ್ ಮತ್ತು ಮೊಹಮದ್ ನಬಿ ಅವರ ಚರುಕಿನ ದಾಳಿಗೆ ತಿಣುಕಾಡಿದ ಬಾಂಗ್ಲಾ ಬ್ಯಾಟ್ಸ್ಮನ್ಗಳು ವೇಗವಾಗಿ ರನ್ ಗಳಿಸಲು ಪರದಾಡಿದರು. ಇನ್ನೊಂದಡೆ ರಶೀದ್ ಖಾನ್ ಎಂದಿನಂತೆ ಬ್ಯಾಟ್ಸ್ಮನ್ಗಳನ್ನು ಕಾಡಿದರು.
ಮುಷ್ಫೀಕರ್ ರಹೀಮ್ 46 (37) ಮಹ್ಮದುಲ್ಲಾ 45 (38) ಅವರು ಕೊನೆಯ ಹಂತದಲ್ಲಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.
ಆಫ್ಘಾನಿಸ್ತಾನವು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು ತಯಾರಿ ನಡೆಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 14ರಂದು ಭಾರತ-ಆಫ್ಘಾನಿಸ್ತಾನ ನಡುವಣ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ.