Asia Cup: ಅಂದು ಅರ್ಧಕ್ಕೆ ಬಿಟ್ಟಿದ್ದ ಕೆಲಸ ಪೂರ್ತಿ ಮಾಡ್ತೇನೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಬೌಲರ್!

ಇಂದಿನಿಂದ ( ಸೆಪ್ಟೆಂಬರ್ 3 ) ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿದ್ದು, ನಾಳೆ ( ಸೆಪ್ಟೆಂಬರ್ 4 ) ಟೀಮ್ ಇಂಡಿಯಾದ ಮೊದಲ ಸೂಪರ್ 4 ಹಂತದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ಜರುಗಲಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ನಡೆಯಲಿರುವ ಎರಡನೇ ಪಂದ್ಯ ಇದಾಗಿದ್ದು, ಈ ಹಿಂದೆ ಆಗಸ್ಟ್ 28ರ ಕಳೆದ ಭಾನುವಾರದಂದು ನಡೆದಿದ್ದ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಬಳಗ 5 ವಿಕೆಟ್ಗಳ ರೋಚಕ ಜಯವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತ್ತು. ಇನ್ನು ಈ ಪಂದ್ಯದಲ್ಲಿ ಎಡವಿದ್ದ ಬಾಬರ್ ಅಜಮ್ ಬಳಗ ಇದೀಗ ಟೀಂ ಇಂಡಿಯಾ ವಿರುದ್ಧದ ಈ ಬಾರಿಯ ಏಷ್ಯಾಕಪ್ ಟೂರ್ನಿಯ ದ್ವಿತೀಯ ಮುಖಾಮುಖಿಯಲ್ಲಿ ಗೆಲುವನ್ನು ಸಾಧಿಸಿ ತನ್ನ ಹಳೆಯ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಈ ಸುತ್ತಿನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳುವ ಕಾರಣ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಉಭಯ ತಂಡಗಳಿಗೂ ಸಹ ಅತಿಮುಖ್ಯದ್ದಾಗಿದೆ. ಇನ್ನು ಪ್ರತೀಕಾರದ ಯೋಜನೆಯಲ್ಲಿರುವ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಟೀಮ್ ಇಂಡಿಯಾ ವಿರುದ್ಧದ ಸೂಪರ್ 4 ಪಂದ್ಯ ಆರಂಭವಾಗುವುದಕ್ಕೂ ಮುನ್ನ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದು, ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಪಂದ್ಯದಲ್ಲಿ ಅರ್ಧಕ್ಕೆ ಬಿಟ್ಟಿದ್ದ ಕೆಲಸ ಪೂರೈಸುತ್ತೇನೆ
ಭಾರತ ಮತ್ತು ಪಾಕ್ ನಡುವಿನ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ ಸಹ ಪಂದ್ಯದ ವೇಳೆಯೇ ಗಾಯದ ಸಮಸ್ಯೆಯಿಂದಾಗಿ ಬಳಲಿದ್ದರು. ಆದರೂ ಸಹ ತನ್ನ ಪಾಲಿನ ಬೌಲಿಂಗ್ ಮಾಡಿದ ನಸೀಮ್ ಶಾ ಆಟದತ್ತ ತಾನು ತೋರಿದ ಒಲವಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಹೀಗೆ ಗಾಯಕ್ಕೊಳಗಾಗಿದ್ದ ನಸೀಮ್ ಶಾ ಇದೀಗ ಸಂಪೂರ್ಣ ಫಿಟ್ ಆಗಿದ್ದು ನಾಳೆ ( ಸೆಪ್ಟೆಂಬರ್ 4 ) ನಡೆಯಲಿರುವ ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಕುರಿತು ಮಾತನಾಡಿದ್ದಾರೆ. ಪಂದ್ಯಕ್ಕಾಗಿ ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎಂದು ತಿಳಿಸಿರುವ ನಸೀಮ್ ಶಾ ಕಳೆದ ಪಂದ್ಯದಲ್ಲಿ ಅರ್ಧಕ್ಕೆ ಬಿಟ್ಟಿದ್ದ ನನ್ನ ಕೆಲಸವನ್ನು ಈ ಪಂದ್ಯದ ಮೂಲಕ ಪೂರ್ಣಗೊಳಿಸಲಿದ್ದೇನೆ ಎಂದು ಹೇಳಿಕೆ ನೀಡಿ ಭಾರತದ ಬ್ಯಾಟ್ಸ್ಮನ್ಗಳನ್ನು ಕಾಡಲಿದ್ದೇನೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಪ್ರಥಮ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ಗಳನ್ನು ಕಾಡಿದ್ದ ನಸೀಮ್
ಆಗಸ್ಟ್ 28ರಂದು ನಡೆದಿದ್ದ ಭಾರತ ಮತ್ತು ಪಾಕ್ ಪಂದ್ಯದಲ್ಲಿ ನಸೀಮ್ ಶಾ ಗಾಯದ ಬಳಲುವಿಕೆಯಲ್ಲಿಯೇ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ ಟೀಮ್ ಇಂಡಿಯಾದ ಎರಡು ಪ್ರಮುಖ ವಿಕೆಟ್ಗಳನ್ನು ಪಡೆದಿದ್ದರು. ಪಂದ್ಯದ ಮೊದಲ ಓವರ್ನಲ್ಲೇ ಕೆಎಲ್ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ನಸೀಮ್ ಶಾ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕೂಡ ಪಡೆದಿದ್ದರು.

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.
ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ನಿಂದ ಹೊರಬಿದ್ದಿದ್ದು ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸನೈನ್, ಹಸನ್ ಅಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications