
ಐಸಿಟಿ ಟಿ20 ವಿಶ್ವಕಪ್ 2021ರಲ್ಲಿ ಗೆಲುವಿನ ಫೇವರಿಟ್ ತಂಡವಾಗಿದ್ದ ಪಾಕಿಸ್ತಾನ ಆರಂಭಿಕ ಪಂದ್ಯದಿಂದಲೂ ಸೋಲನ್ನೇ ಕಾಣದೆ ಸೆಮಿಫೈನಲ್ ಪ್ರವೇಶಿಸಿತು. ಬಾಬರ್ ಅಜಮ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನೆಡೆದ ಪಾಕ್ ಪಡೆ ಭಾರತ, ನ್ಯೂಜಿಲೆಂಡ್ ತಂಡಗಳನ್ನ ಬಗ್ಗು ಬಡಿದು, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಸುಲಭ ಗೆಲುವು ಸಾಧಿಸಿತು.
ಇಷ್ಟೇ ಅಲ್ಲದೆ ಗ್ರೂಪ್ 2ನಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದ ಪಾಕ್, ಐದಕ್ಕೆ ಐದು ಪಂದ್ಯದಲ್ಲಿ ಗೆಲುವು ಸಾಧಿಸಿ 10 ಪಾಯಿಂಟ್ಸ್ನೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. ಸೆಮೀಸ್ನಲ್ಲಿ ಗೆಲುವಿನ ಹಾಟ್ ಫೇವರಿಟ್ ಕೂಡ ಆಗಿತ್ತು. ಆದರೆ ಸ್ವಂತ ಪ್ರಮಾದದಿಂದಲೇ ಪಾಕಿಸ್ತಾನ ಕಾಂಗರೂಗಳಿಗೆ ಗೆಲುವು ಬಿಟ್ಟುಕೊಟ್ಟಿತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಪಾಕ್ ಸೋಲಿಗೆ ಆ ಒಂದು ಕ್ಯಾಚ್ ಕೈ ಚೆಲ್ಲಿದ್ದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
"ನಾವು ಮೊದಲ ಇನ್ನಿಂಗ್ಸ್ನಲ್ಲಿ ಯೋಜನೆ ಮಾಡಿದ್ದ ರೀತಿಯಲ್ಲೇ ಸಾಗಿದೆವು. ಅಂದುಕೊಂಡಂತೆ ಎದುರಾಳಿಗೆ ಸವಾಲಿನ ಮೊತ್ತದ ಟಾರ್ಗೆಟ್ ಅನ್ನೇ ನೀಡಿದೆವು. ಆದರೆ, ಎದುರಾಳಿಗೆ ನೀಡಿದಂತಹ ಇಂತಹ ಅವಕಾಶ ಬೆಲೆತೆರಬೇಕಾಗಿ ಬಂತು. ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಹಸನ್ ಅಲಿ ಬಿಟ್ಟ ಆ ಒಂದು ಕ್ಯಾಚ್. ಈ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು" ಎಂದು ಬಾಬರ್ ಅಜಮ್ ಹೇಳಿದ್ದಾರೆ.
ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಭರ್ಜರಿ ಬ್ಯಾಟಿಂಗ್ ವೇಳೆ, ವೇಡ್ ಬ್ಯಾಟ್ನಿಂದ ಸಿಡಿದ ಚೆಂಡನ್ನು ಹಸನ್ ಅಲಿ ಕೈ ಚೆಲ್ಲಿದರು. ಪರಿಣಾಮ ಮ್ಯಾಥ್ಯೂ ವೇಡ್ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮತ್ತೊಂದೆಡೆ ಪಾಕಿಸ್ತಾನದ ಎರಡನೇ ಟಿ20 ವಿಶ್ವಕಪ್ ಗೆಲ್ಲುವ ಕನಸು ನುಚ್ಚು ನೂರಾಯಿತು.
ಹಸನ್ ಅಲಿ ಬೆಂಬಲಕ್ಕೆ ನಿಂತ ಬಾಬರ್
ಟೂರ್ನಿಯಲ್ಲಿ ಅತ್ಯಂತ ನೀರಸ ಬೌಲಿಂಗ್ ಪ್ರದರ್ಶಿಸಿದ ಹಸನ್ ಅಲಿ ಸೆಮಿಫೈನಲ್ನಲ್ಲಿ 4 ಓವರ್ಗಳಿಗೆ 44 ರನ್ ಬಿಟ್ಟುಕೊಟ್ಟು ಒಂದೂ ವಿಕೆಟ್ ಪಡೆಯಲಿಲ್ಲ. ಜೊತೆಗೆ ಮ್ಯಾಥ್ಯೂ ವೇಡ್ ಕ್ಯಾಚ್ಕೈ ಚೆಲ್ಲಿದ್ದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಯಿತು. ಇಷ್ಟಾದರೂ ಹಸನ್ ಅಲಿ ಬೆಂಬಲಕ್ಕೆ ಕ್ಯಾಪ್ಟನ್ ಬಾಬರ್ ಅಜಮ್ ನಿಂತಿದ್ದಾರೆ. ಹಸನ್ ಅಲಿ ತುಂಬಾನೆ ಕುಗ್ಗಿ ಹೋಗಿದ್ದಾನೆ. ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದಿದ್ದಾರೆ.
"ಕ್ಯಾಚ್ ಹಿಡಿದಿದ್ದರೆ ಸನ್ನಿವೇಶವು ವಿಭಿನ್ನವಾಗಿರುತ್ತಿತ್ತು. ಆದರೆ ಅದು ಆಟದ ಒಂದು ಭಾಗವಾಗಿದೆ. ಆತ ನನ್ನ ಪ್ರಮುಖ ಬೌಲರ್ಗಳಲ್ಲಿ ಒಬ್ಬರು ಮತ್ತು ಅವರು ಪಾಕಿಸ್ತಾನಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆಟಗಾರರು ಕ್ಯಾಚ್ಗಳನ್ನು ಬಿಡುತ್ತಾರೆ ಆದರೆ ಅವನು ಒಬ್ಬ ಹೋರಾಟಗಾರ ಮತ್ತು ನಾನು ಅವನನ್ನು ಬೆಂಬಲಿಸುತ್ತೇನೆ. ಎಲ್ಲರೂ ಪ್ರತಿದಿನ ಪ್ರದರ್ಶನ ನೀಡುವುದಿಲ್ಲ. ಇಂದು ಅವನ ದಿನವಾಗಿರಲಿಲ್ಲ. ಅವರು ಕುಗ್ಗಿದ್ದಾರೆ ಮತ್ತು ನಾವು ಅವರ ಮನಸ್ಥಿತಿಯನ್ನು ಮೇಲಕ್ಕೆತ್ತುತ್ತೇವೆ, "ಎಂದು ಬಾಬರ್ ಅಜಯ್ ಹೇಳಿದರು.
ಇದರ ಜೊತೆಗೆ "ಇಡೀ ಟೂರ್ನಿಯಲ್ಲಿ ನಾವು ಆಡಿದ ರೀತಿ ಮತ್ತು ನನ್ನ ನಾಯಕತ್ವದ ಬಗ್ಗೆ ನನಗೆ ತೃಪ್ತಿ ಇದೆ. ಇಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿ ಮುಂದಿನ ಸೀಸನ್ನಲ್ಲಿ ಇನ್ನಷ್ಟು ಉತ್ತಮವಾಗಿ ಕಮ್ಬ್ಯಾಕ್ ಮಾಡುತ್ತೇವೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಕೊನೆಯ ಹಂತದಲ್ಲಿ ಮಾಡಿದ ಸಣ್ಣ ತಪ್ಪು ಕೂಡ ದೊಡ್ಡದಾಗಿ ಬಿಡುತ್ತವೆ. ನಾವು ಆಟಗಾರರಿಗೆ ಒಂದೊಂದು ಪಾತ್ರ ನೀಡಿದ್ದೆವು, ಅದನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಅಭಿಮಾನಿಗಳು ನಮಗೆ ದೊಡ್ಡ ಸಪೋರ್ಟ್ ನೀಡಿದರು. ಇಲ್ಲಿ ಆಟವಾಡಲು ನಮಗೆ ತುಂಬಾನೆ ಖುಷಿ" ಎಂದು ಬಾಬರ್ ಹೇಳಿದರು.