ನೋಬಾಲ್ ಕೊಡದದ್ದಕ್ಕೆ ಬೇಸರ
ಮೈದಾನದಲ್ಲೂ ಸಹ ಆಟಗಾರರು ಪರಸ್ಪರ ಮೂದಲಿಸಿಕೊಂಡಿದ್ದು, ಒಂದು ಹಂತದಲ್ಲಿ ಅಸಮಾಧಾನಗೊಂಡ ಶಕೀಬ್ ಉಲ್ ಹಸನ್ ಆಟಗಾರರನ್ನು ಪಂದ್ಯ ಬಿಟ್ಟು ಹೊರ ಬರುವಂತೆ ಸಹ ಕರೆದರು. ಪಂದ್ಯದ ಕೊನೆಯ ಓವರ್ನಲ್ಲಿ ಬಾಂಗ್ಲಾಕ್ಕೆ ಗೆಲ್ಲಲು 12 ರನ್ ಗಳ ಅವಶ್ಯಕತೆ ಇದ್ದಾಗ ಭುಜಕ್ಕೂ ಮೇಲ್ಮಟ್ಟದಲ್ಲಿ ಎಸೆದ ಎರಡು ಶಾರ್ಟ್ ಪಿಚ್ ಎಸೆತಗಳನ್ನು ಅಂಪೈರ್ ನೋಬಾಲ್ ನೀಡದಿರುವ ಬಗ್ಗೆ ಬಾಂಗ್ಲಾ ಆಟಗಾರರು ಸಿಟ್ಟಾದರು.
ಪಂದ್ಯ ಬಿಟ್ಟು ಹೊರಬರುವಂತೆ ಸೂಚನೆ
ಈ ಬಗ್ಗೆ ತೀವ್ರ ಅಸಮಾಧಾನಗೊಂಡ ಬಾಂಗ್ಲಾದೇಶ ನಾಯಕ ಶಕೀಬ್ ಉಲ್ ಹಸನ್ ಆಟಗಾರರನ್ನು ಪಂದ್ಯ ಬಿಟ್ಟು ಹೊರಬರುವಂತೆ ಕರೆದರು. ಆದರೆ ಪಂದ್ಯ ಹಾಗೆ ಮುಂದುವರೆದು ಓವರ್ನ ನಾಲ್ಕನೇ ಎಸೆತದಲ್ಲಿ ಮೊಹಮದ್ಉಲ್ಲಾ ಸಿಕ್ಸರ್ ಭಾರಿಸಿದ ಪರಿಣಾಮ ಬಾಂಗ್ಲಾ ವಿಜಯ ಸಾಧಿಸಿತು.
ಬಾಂಗ್ಲಾ ಆಟಗಾರರಿಂದ ನಾಗೀನ್ ನೃತ್ಯ
ವಿಜಯದ ನಂತರ ಬಾಂಗ್ಲಾ ಆಟಗಾರರು ಮೈದಾನಕ್ಕೆ ಇಳಿದು 'ನಾಗಿನ್ ನೃತ್ಯ' ಮಾಡುವ ಮೂಲಕ ಶ್ರೀಲಂಕಾ ಆಟಗಾರರನ್ನು ಚೇಡಿಸಿದರು. ಆಗಲೂ ಇತ್ತಂಡಗಳ ಆಟಗಾರರ ನಡುವೆ ವಾಗ್ವಾದಗಳು ನಡೆದವು ಆದರೆ ಕೋಚ್ ಕರ್ಟ್ನಿ ವಾಲ್ಶ್ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಮಾಡಿದರು.
ಡ್ರೆಸ್ಸಿಂಗ್ ಕೋಣೆ ಬಾಗಿಲು ಒಡೆದ ಆಟಗಾರರು
ಆ ನಂತರವೂ ತಮ್ಮ ವರಟು ವರ್ತನೆ ತೋರಿರುವ ಬಾಂಗ್ಲಾದೇಶ ಆಟಗಾರರು ಡ್ರೆಸ್ಸಿಂಗ್ ರೂಮ್ನ ಬಾಗಿಲು, ಕಿಟಕಿಗಳನ್ನು ಒಡೆದು ದಾಂದಲೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಈ ಮುಂಚಿನ ಪಂದ್ಯದಲ್ಲೂ ಸಹ 'ನಾಗಿನ್ ಡಾನ್ಸ್' ಮಾಡುವ ಮೂಲಕ ಬಾಂಗ್ಲಾದೇಶ ಆಟಗಾರರು ಶ್ರೀಲಂಕಾ ಆಟಗಾರರನ್ನು ಚೇಡಿಸಿದ್ದರು. ಭಾರತದ ವಿರುದ್ಧ ಸಹ ಇದೇ ರೀತಿ ವರ್ತನೆ ತೋರಿದ್ದರು.
'ಸಭ್ಯರ ಆಟ' ವಿಶೇಷಣಕ್ಕೆ ಧಕ್ಕೆ
ಕ್ರಿಕೆಟ್ ವಿಶ್ಲೇಷಣೆ ಟ್ವಿಟ್ಟರ್ ಖಾತೆ ಕ್ರಿಕೆಟ್ ವಾಲಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಇತ್ತೀಚೆಗೆ ಕ್ರಿಕೆಟ್ನಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಐಸಿಸಿಯು ಒಟ್ಟಾರೆ ವಿಶ್ವದ ಕ್ರಿಕೆಟ್ ಆಟಗಾರರಲ್ಲಿ ಅರ್ಧ ಆಟಗಾರರನ್ನು ಬ್ಯಾನ್ ಮಾಡಬೇಕಾಗಿ ಬರಬಹುದು ಎಂದಿದ್ದಾರೆ. ಸಂಜಯ್ ಮಂಜ್ರೇಕರ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಶಕೀಬ್ ಉಲ್ ಹಸನ್ ತನ್ನ ವರ್ತನೆಗಾಗಿ ಕ್ಷಮೆ ಕೂಡಾ ಕೇಳದಿರುವುದು ಬೇಸರದ ಸಂಗತಿ ಎಂದಿದ್ದಾರೆ.