ಗುಂಡಿನ ದಾಳಿಯಿಂದ ಬಚಾವಾದ ಬಾಂಗ್ಲಾ ಕ್ರಿಕೆಟಿಗರು: ಟೆಸ್ಟ್ ಪಂದ್ಯ ರದ್ದು

ಕ್ರೈಸ್ಟ್ ಚರ್ಚ್, ಮಾರ್ಚ್ 15: ನ್ಯೂಜಿಲೆಂಡ್ನ ಕ್ರೈಸ್ಟ್ ಚರ್ಚ್ನಲ್ಲಿನ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಬಾಂಗ್ಲಾದೇಶದ ಕ್ರಿಕೆಟಿಗರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.
ಶುಕ್ರವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.45ರ ವೇಳೆಗೆ ಈ ಗುಂಡಿನ ದಾಳಿ ನಡೆದಿದ್ದು, ಇದಕ್ಕೂ ಮೊದಲಷ್ಟೇ ತಂಡ ಕೆಲವು ಆಟಗಾರರು ಕೋಚ್ ಸಿಬ್ಬಂದಿಯೊಂದಿಗೆ ಘಟನೆ ನಡೆದ ಸ್ಥಳದ ಸಮೀಪ ಪ್ರಾರ್ಥನೆಗೆಂದು ತೆರಳಿದ್ದರು. ಇನ್ನು ಕೆಲವು ಆಟಗಾರರು ಹೋಟೆಲ್ನಲ್ಲಿಯೇ ಇದ್ದರು. ಅದೃಷ್ಟವಶಾತ್ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಕ್ರಿಕೆಟಿಗರು ಇರಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಕ್ರೈಸ್ಟ್ಚರ್ಚ್ನಲ್ಲಿ ಶನಿವಾರದಿಂದ ಆರಂಭವಾಗಬೇಕಿತ್ತು. ಆದರೆ, ಘಟನೆಯಿಂದ ಆಟಗಾರರು ಮಾನಸಿಕವಾಗಿ ಆಘಾತಗೊಂಡಿರುವುದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ.
'ಈ ಘಟನೆಯಿಂದ ಆಟಗಾರರು ಆಘಾತಕ್ಕೆ ಒಳಗಾಗಿದ್ದರು. ಆದರೆ, ಚೇತರಿಸಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಅವರೊಂದಿಗೆ ಮಾತನಾಡಿದ್ದೇನೆ. ಅವರು ಏನನ್ನೂ ಕಂಡಿಲ್ಲ. ಆದರೆ, ಗುಂಡಿನ ಸದ್ದು ಕೇಳಿಸಿತ್ತು. ಆಗ ಅವರೆಲ್ಲರೂ ಹ್ಯಾಗ್ಲೀ ಓವಲ್ ಮೈದಾನದಲ್ಲಿದ್ದರು. ಸದ್ದು ಕೇಳಿದ ಕೂಡಲೇ ಓಡಲು ಆರಂಭಿಸಿದ್ದರು' ಎಂದು ಬಾಂಗ್ಲಾದೇಶ ತಂಡದ ತರಬೇತುದಾರರಲ್ಲಿ ಒಬ್ಬರಾದ ಮಾರಿಯೊ ವಿಲ್ಲವರೆಯನ್ ಹೇಳಿದ್ದಾರೆ.
'ಘಟನೆ ವೇಳೆ ತರಬೇತುದಾರ ಸಿಬ್ಬಂದಿಯೆಲ್ಲರೂ ಹೋಟೆಲ್ನಲ್ಲಿದ್ದರು. ಗುಂಡಿನ ಸದ್ದು ಕೇಳಿದ ಕೂಡಲೇ ಆಟಗಾರರು ಓಡಲಾರಂಭಿಸಿದರು. ಎಷ್ಟು ಗುಂಡುಗಳನ್ನು ಹಾರಿಸಲಾಯಿತು ಎಂಬುದು ನನಗೆ ತಿಳಿದಿಲ್ಲ. ಮಧ್ಯಾಹ್ನ 1.45ರ ಸುಮಾರಿಗೆ ಇದು ನಡೆಯಿತು' ಎಂದು ವಿವರಿಸಿದ್ದಾರೆ.
ಬಂದೂಕುಧಾರಿಯೊಬ್ಬ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅನೇಕರು ಬಲಿಯಾಗಿದ್ದಾರೆ.
ಎಲ್ಲರೂ ಸುರಕ್ಷಿತವಾಗಿದ್ದಾರೆ
ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ತನ್ನ ಆಟಗಾರರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದೆ.
'ಕ್ರೈಸ್ಟ್ಚರ್ಚ್ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಸದಸ್ಯರೂ ನಗರದಲ್ಲಿ ಶೂಟಿಂಗ್ ಘಟನೆ ನಡೆದ ಬಳಿಕ ಹೋಟೆಲ್ಗೆ ಸುರಕ್ಷಿತವಾಗಿ ಮರಳಿದ್ದಾರೆ. ತಂಡದ ಆಟಗಾರರು ಮತ್ತು ಮ್ಯಾನೇಜ್ಮೆಂಟ್ನೊಂದಿಗೆ ಕ್ರಿಕೆಟ್ ಮಂಡಳಿ ನಿರಂತರ ಸಂಪರ್ಕದಲ್ಲಿದೆ' ಎಂದು ಕ್ರಿಕೆಟ್ ಮಂಡಳಿ ಹೇಳಿದೆ.
ನಡುಕ ಹುಟ್ಟಿಸುವ ಅನುಭವ
'ಸಕ್ರಿಯ ಶೂಟರ್ಗಳಿಂದ ಇಡೀ ತಂಡ ಬಚಾವಾಗಿದೆ. ನಡುಕ ಹುಟ್ಟಿಸುವ ಅನುಭವ. ನಿಮ್ಮ ಪ್ರಾರ್ಥನೆ ವೇಳೆ ನಮಗಾಗಿಯೂ ಪ್ರಾರ್ಥಿಸಿ' ಎಂದು ಬಾಂಗ್ಲಾದೇಶದ ಆರಂಭಿಕ ಆಟಗಾರ ತಮಿಮ್ ಇಕ್ಬಾಲ್ ಟ್ವೀಟ್ ಮಾಡಿದ್ದಾರೆ.
ಕೊಹ್ಲಿ ಭಯಂಕರ ನಾಯಕ, ಆದರೆ ಧೋನಿ ಅದಕ್ಕೂ ಮೇಲೆ: ಶೇನ್ ವಾರ್ನ್
ನಾವು ಅದೃಷ್ಟವಂತರು
'ಕ್ರೈಸ್ಟ್ಚರ್ಚ್ನ ಮಸೀದಿಯಲ್ಲಿ ನಡೆದ ಶೂಟಿಂಗ್ನಿಂದ ಅಲ್ಲಾ ನಮ್ಮನ್ನು ರಕ್ಷಿಸಿದ್ದಾನೆ. ನಾವು ಬಹಳ ಅದೃಷ್ಟವಂತರು. ಈ ರೀತಿಯ ಘಟನೆ ಮತ್ತೆ ಸಂಭವಿಸುವುದನ್ನು ನೋಡಲು ಬಯಸುವುದಿಲ್ಲ' ಎಂದು ವಿಕೆಟ್ ಕೀಪರ್ ಮುಷ್ಫೀಕರ್ ರಹೀಂ ಟ್ವೀಟ್ ಮಾಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯ ರದ್ದು
ಈ ಘಟನೆಯಿಂದ ಪ್ರವಾಸಿ ಬಾಂಗ್ಲಾದೇಶದ ಕ್ರಿಕೆಟಿಗರು ಆತಂಕಕ್ಕೆ ಒಳಗಾಗಿದ್ದಾರೆ. ಕ್ರಿಕೆಟ್ ಮೈದಾನದ ಸಮೀಪವೇ ಈ ದಾಳಿ ನಡೆದಿರುವುದರಿಂದ ಭದ್ರತೆಯ ಹಿತದೃಷ್ಟಿಯಿಂದ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಘಟನೆಯ ಕುರಿತಂತೆ ಚರ್ಚಿಸಿದ್ದು, ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಆಡುವುದು ಸೂಕ್ತವಲ್ಲ ಎಂಬ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications